ಪಠ್ಯದ ಸಾಮಾನ್ಯ ಜ್ಞಾನದ ಪುಸ್ತಕ ಓದಿ: ಡಾ. ಈಶ್ವರ ಉಳ್ಳಾಗಡ್ಡಿ

| Published : Oct 13 2025, 02:02 AM IST

ಪಠ್ಯದ ಸಾಮಾನ್ಯ ಜ್ಞಾನದ ಪುಸ್ತಕ ಓದಿ: ಡಾ. ಈಶ್ವರ ಉಳ್ಳಾಗಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಪಡೆಯುವ ಸಮಯದಲ್ಲಿ ಪಠ್ಯಾಭ್ಯಾಸದ ಜತೆಗೆ ಸಾಮಾನ್ಯ ಜ್ಞಾನಾಭಿವೃದ್ಧಿ ಹೊಂದುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಕೆಎಎಸ್ ಹಾಗೂ ಐಎಎಸ್ ಪರೀಕ್ಷೆಗೆ ಅನುಕೂಲವಾಗುತ್ತದೆ.

ವೀರಶೈವ ಲಿಂಗಾಯತ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಧಾರವಾಡ

ಶಿಕ್ಷಣ ಪಡೆಯುವ ಸಮಯದಲ್ಲಿ ಪಠ್ಯಾಭ್ಯಾಸದ ಜತೆಗೆ ಸಾಮಾನ್ಯ ಜ್ಞಾನಾಭಿವೃದ್ಧಿ ಹೊಂದುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರೆ ಕೆಎಎಸ್ ಹಾಗೂ ಐಎಎಸ್ ಪರೀಕ್ಷೆಗೆ ಅನುಕೂಲವಾಗುತ್ತದೆ ಎಂದು ಶಾಲಾ ಶಿಕ್ಷಣ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಭಿಪ್ರಾಯಪಟ್ಟರು.

ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಶಿಕ್ಷಣವು ವಿದ್ಯಾರ್ಥಿಗಳಿಗೆ ಜೀವನದ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಸಾಧನೆ ಮಾಡುವುದು ಬಹಳ ಅವಶ್ಯಕ. ಇತ್ತೀಚಿನ ದಿನದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಪಠ್ಯದ ಹೊರತಾಗಿ ಸಾಮಾನ್ಯ ಜ್ಞಾನ ಸಿಗುವುದು ಅಸಾಧ್ಯ ಎಂದರು.

ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಓದಿನ ಬಗ್ಗೆ ಹೆಚ್ಚು ಗಮನ ನೀಡಿದರೆ ಮಾತ್ರ ಜ್ಞಾನದ ಕೊರತೆ ಹೋಗಲಾಡಿಸಬಹುದು. ಸಮಾಜದ ವಿದ್ಯಾರ್ಥಿಗಳು ಕೆಎಎಸ್ ಹಾಗೂ ಐಎಎಸ್ ಪರೀಕ್ಷೆಗೆ ಸಿದ್ಧರಾಗಲು ಬಯಸಿದಲ್ಲಿ ಸಹಕಾರ ನೀಡಲು ಸಿದ್ಧ. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಶ್ರಮವಹಿಸುತ್ತಾರೆ. ಅದರ ಋಣ ತೀರಿಸುವ ಜತೆಗೆ ಈ ನಾಡಿನ ಗೌರವ, ಘನತೆಯನ್ನು ಹೆಚ್ಚಿಸುವ ಕೆಲಸ ನಿಮ್ಮಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ಪಾಲಕರ ಶ್ರಮದ ಫಲವಾಗಿ ಮಕ್ಕಳು ಸಾಧನೆ ಮಾಡುತ್ತಿದ್ದಾರೆ, ಅವರಿಗೆ ಪ್ರೋತ್ಸಾಹ ನೀಡುವುದು ಸಮಾಜದ ಕರ್ತವ್ಯವಾಗಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಈ ನಾಡಿಗೆ ಅತ್ಯಂತ ದೊಡ್ಡ ಕೊಡುಗೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಕೆಎಎಸ್ ಹಾಗೂ ಐಎಎಸ್ ಓದಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಸಹಾಯ-ಸಹಕಾರ ನೀಡುವುದು ಸಮಾಜದ ಕರ್ತವ್ಯವಾಗಿದೆ. ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲಿದ್ದು ಸಂತೋಷದ ಸಂಗತಿಯಾಗಿದೆ. ಅವರಿಗೆ ಮಹಾಸಭಾ ಅಭಿನಂದಿಸಿ ಗೌರವಿಸುವ ಜತೆಗೆ ಸಹಾಯ-ಸಹಕಾರ ನೀಡಲಿದೆ ಎಂದರು.ಉಪಾಧ್ಯಕ್ಷರಾದ ವಿ.ಸಿ. ಸವಡಿ, ಡಾ. ಪಾರ್ವತಿ ಹಾಲಭಾವಿ, ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಕೋಶಾಧ್ಯಕ್ಷ ಮಡಿವಾಳಪ್ಪ ಶಿರಿಯಣ್ಣವರ, ರಾಜ್ಯ ಉಪಾಧ್ಯಕ್ಷೆ ಸವಿತಾ ಅಮರಶೆಟ್ಟಿ, ಕಾರ್ಯದರ್ಶಿ ಪ್ರಕಾಶ ಭಾವಿಕಟ್ಟಿ, ಡಾ. ಸುವರ್ಣಾ ಬಿರಾದಾರ ಇದ್ದರು. ಜಯಶ್ರೀ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಮನಗುಂಡಿ ಸ್ವಾಗತಿಸಿದರು. ಆನಂದ ಗಡೇಕಾರ ಪ್ರಾಸ್ತಾವಿಕ ಮಾತನಾಡಿದರು. ನಾಗರತ್ನಾ ಹಡಗಲಿ ವಂದಿಸಿದರು.