ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಕೆ. ರಾಮಚಂದ್ರಪ್ಪ

| Published : Jun 13 2024, 12:46 AM IST

ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಕೆ. ರಾಮಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿ ನಿರ್ದಿಷ್ಟ ಗುರಿ ಹೊಂದುವ ಮೂಲಕ ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸಿ ಭವಿಷ್ಯದ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಕೆ. ರಾಮಚಂದ್ರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಪ್ರತಿಯೊಬ್ಬ ವಿದ್ಯಾರ್ಥಿ ನಿರ್ದಿಷ್ಟ ಗುರಿ ಹೊಂದುವ ಮೂಲಕ ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸಿ ಭವಿಷ್ಯದ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಶೋಷಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಕೆ. ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ನಾಗರಮಡವು ಗ್ರಾಮದಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೭೫ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಹಾಗೂ ಪುರಸ್ಕಾರ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸಮಯಕ್ಕೆ ಮಹತ್ವ ನೀಡಿ ಸತತ ಪರಿಶ್ರಮದಿಂದ ಅಭ್ಯಾಸ ಮಾಡಿ ಕಲಿತ ಶಾಲೆ, ಸಮಾಜಕ್ಕೆ ಕೀರ್ತಿ ತರಬೇಕು ಎಂದರು.

ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಛಲ ಇದ್ದರೆ ಸಾಧನೆ ಮಾಡಬಹುದು. ಕಷ್ಟಪಟ್ಟು ಅಭ್ಯಾಸ ಮಾಡದೇ ಇಷ್ಟಪಟ್ಟು ಅಭ್ಯಾಸ ಮಾಡಬೇಕು. ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಗುರಿ ಮುಟ್ಟಬೇಕು. ಶಿಕ್ಷಣ ರಂಗದಲ್ಲಿ ದಿನೇ ದಿನೇ ಪೈಪೋಟಿ ನಡೆಯುತ್ತಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪಾಲಕರು, ಪೋಷಕರು ಸಮಯ ಮೀಸಲಿಡಬೇಕು. ತಾಯಂದಿರ ನಿರ್ಧಾರ ಅಚಲವಾಗಿರದಿದ್ದರೆ, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದರೆ ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿ ನೀಡಬೇಕು. ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಟೀವಿ, ಮೊಬೈಲ್‌ನಿಂದ ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಟೀವಿ, ಮೊಬೈಲ್‌ನಿಂದ ದೂರವಿರಿಸಿ ಶಿಕ್ಷಣದ ಕಡೆ ಆಸಕ್ತಿ ವಹಿಸುವಂತೆ ಮಾಡಬೇಕು. ಕಲಿತ ಜ್ಞಾನ ಸದ್ಬಳಕೆ ಮಾಡಿಕೊಂಡರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಬೇರೆಡೆ ಆಕರ್ಷಣೆಗೆ ಒಳಗಾಗದಂತೆ ಬೆಳೆಸಬೇಕು ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಮಾತನಾಡಿ, ಆಧುನಿಕ ಶಿಕ್ಷಣದಲ್ಲಿ ನೈತಿಕ ಮೌಲ್ಯ ಕಡಿಮೆಯಾಗುತ್ತಿದೆ. ಗರಿಷ್ಠ ಅಂಕಗಳಿಗಷ್ಟೇ ಶಿಕ್ಷಣ ಎಂಬ ಸ್ಥಿತಿಗೆ ತಲುಪಿದ್ದೇವೆ. ಮಕ್ಕಳಿಗೆ ಇದನ್ನೇ ಓದಬೇಕು, ಇಷ್ಟೇ ಅಂಕ ಗಳಿಸಬೇಕು ಎಂಬ ಒತ್ತಡ ಹಾಕಬಾರದು. ವಿದ್ಯಾರ್ಥಿಗಳಲ್ಲಿ ಭಗವಂತ ನೆಲೆ ನಿಂತಿರುತ್ತಾನೆ. ವಿದ್ಯಾರ್ಥಿಗಳ ಬುದ್ಧಿಮಟ್ಟ ಅತ್ಯುನ್ನತವಾಗಿದ್ದು, ಎಲ್ಲವನ್ನೂ ತಿಳಿದುಕೊಳ್ಳುವ ಹುಮ್ಮಸ್ಸು ಇರುತ್ತದೆ. ಇಂಥವರ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸುವುದು, ಕಲಿಕೆಗೆ ಪ್ರೋತ್ಸಾಹ ನೀಡುವ ಗುಣ ಮೈಗೂಡಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕಾದರೆ ಮುಂದೆ ಮಾಡುವ ಕೆಲಸದ ಬಗ್ಗೆ ಸ್ಪಷ್ಟ ಗುರಿ ಹೊಂದಿರಬೇಕು. ಆಗ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ಜೀವನ ಶ್ರೇಷ್ಠವಾದುದು ಹಾಗೂ ವಿಶೇಷತೆಯಿಂದ ಕೂಡಿರುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರ ಅತ್ಯುತ್ತಮ ಜೀವನವನ್ನು ರೂಪಿಸುತ್ತದೆ ಎಂದು ಹೇಳಿದರು.

ಸೋಮಶೇಖರ ಚೆನ್ನಯ್ಯಸ್ವಾಮಿ ಆಮೋಘಿಮಠ ಸಾನಿಧ್ಯ ವಹಿಸಿದ್ದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನಪ್ಪ ಪೋಟಿ ಅಧ್ಯಕ್ಷತೆ ವಹಿಸಿದ್ದರು. ಮಹೇಶ ಹಾರೋಗೇರಿ, ಬಾಗಲಕೋಟೆ ಪಿಎಸ್‌ಐ ಪ್ರಕಾಶ ಬಣಕಾರ, ಶಶಿಧರ ರೊಳ್ಳಿ, ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಹುಮಾಯೂನ ಮಾಗಡಿ, ಮಂಜುನಾಥ ಘಂಟಿ, ಮೈಲಾರೆಪ್ಪ ಹಾದಿಮನಿ, ಅನಂದ ಮಾಳೆಕೊಪ್ಪ, ಡಿ.ಕೆ. ಹೊನ್ನಪ್ಪನವರ ಮಾತನಾಡಿದರು.

ಮುತ್ತಣ್ಣ ಚವಡಾಳ, ಸುರೇಶ ತಳ್ಳಳ್ಳಿ, ಶಂಕರ ಬಾವಿ, ದೇವಪ್ಪ ಬಟ್ಟೂರ, ಶೇಖಣ್ಣ ಕಾಳೆ, ಈಶ್ವರಪ್ಪ ಹೊನ್ನಪ್ಪನವರ, ಜಡಿಯಪ್ಪ ಹೊನ್ನಪ್ಪನವರ, ವಸಂತ ಜಗ್ಗಲರ, ಮಹೇಂದ್ರ ಉಡಚಣ್ಣವರ, ಯಲ್ಲಪ್ಪ ಸೂರಣಗಿ, ತಿಪ್ಪಣ್ಣ ಸಂಶಿ, ರಾಜು ಮಡಿವಾಳ, ಅಣ್ಣಪ್ಪ ರಾಮಗೇರಿ, ಪ್ರಕಾಶ ಹೋರಿ, ಈರಣ್ಣ ಆನೆಪ್ಪನವರ, ಪ್ರಕಾಶ ಆನೆಪ್ಪನವರ, ಮಲ್ಲಮ್ಮ ಆನೆಪ್ಪನವರ, ಜಗದೀಶ ತಳ್ಳಳ್ಳಿ, ಹನಮಂತ ಗೊಜನೂರ, ಮಂಜಪ್ಪ ಹಮಗಿ, ನೀಲಪ್ಪ ಬೂದಿಹಾಳ, ಮಹೇಶ ಹುರಕಣ್ಣವರ, ಶಂಕರಪ್ಪ ಸುಗ್ನಳ್ಳಿ ಹಾಲನಗೌಡ ಪಾಟೀಲ ಇದ್ದರು.