ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪುಸ್ತಕ ಓದುವುದು ಮತ್ತು ಬರೆಯುವುದು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಶಿವಮೊಗ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ವರದರಾಜ್ ಹೇಳಿದರು.ಗುರುವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪುಸ್ತಕ-ಕೃತಿ ಸ್ವಾಮ್ಯ ದಿನಾಚರಣೆ ಹಾಗೂ ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಉಪನ್ಯಾಸ ನೀಡಿದರು.

ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ. ಪರೀಕ್ಷೆಗಾಗಿ ಕೇವಲ ನೋಟ್ಸ್, ಜೆರಾಕ್ಸ್ ಅವಲಂಭಿಸುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಕಾಲೇಜುಗಳ ಗ್ರಂಥಾಲಯ ಸಾಕಷ್ಟು ಪುಸ್ತಕ ಗಳಿಂದ ಶ್ರೀಮಂತವಾಗಿವೆ. ವಿದ್ಯಾರ್ಥಿಗಳು ಪುಸ್ತಕ ಓದುವ ಮೂಲಕ ಬೌದ್ಧಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ವಿಶ್ವವನ್ನು ತಿಳಿದು ಕೊಳ್ಳಲು, ಅರಿತು ಕೊಳ್ಳಲು ಕೇವಲ 2 ಮಾರ್ಗಗಳಿವೆ. ಕೋಶ ಓದಬೇಕು ಅಥವಾ ದೇಶ ಸುತ್ತಬೇಕು. ಪ್ರಪಂಚದಲ್ಲಿ ಅತಿಹೆಚ್ಚು ಪುಸ್ತಕ ಓದಿದ್ದು ಮತ್ತು ಬರೆದಿದ್ದು ಡಾ.ಬಿ.ಆರ್. ಅಂಬೇಡ್ಕರ್. ಅವರು ತಮ್ಮ ಆದಾಯದ ಶೇ. 75 ರಷ್ಟು ಭಾಗ ವನ್ನು ಪುಸ್ತಕ ಕೊಳ್ಳಲು ವಿನಿಯೋಗಿಸಿದ್ದರು. ಸ್ವಂತ ಗ್ರಂಥಾಲಯ ಹೊಂದಿದ್ದರು. ಡಾ.ಬಿ.ಆರ್.ಅಂಬೇಡ್ಕರ್ 2.16ಲಕ್ಷ ಪುಸ್ತಕ ಓದಿದ್ದಾರೆ. ಕೊಲಂಬಿಯ ವಿಶ್ವವಿದ್ಯಾಲಯದ 300 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಗ್ರಂಥಾಲಯದಿಂದ ಪಡೆದು ಓದಿದ ವ್ಯಕ್ತಿ ಅಂಬೇಡ್ಕರ್ ಅವರಾಗಿದ್ದರು. ಆದ್ದರಿಂದ ಅವರಿಗೆ ಜ್ಞಾನದ ಸಂಕೇತ ಎಂಬ ಬಿರುದು ನೀಡಲಾಗಿದೆ ಎಂದರು.

ಗ್ರಂಥಾಲಯ ವಿಭಾಗದ ಮುಖ್ಯಸ್ಥ ಎಂ.ಎಚ್.ಪ್ರಕಾಶ್ ಮಾತನಾಡಿ, ವಿಶ್ವದಾದ್ಯಂತ ಯುನೆಸ್ಕೋ 1995 ರಿಂದ ಏ. 23ನ್ನು ವಿಶ್ವಪುಸ್ತಕ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಓದುವ ಸಂಸ್ಕೃತಿ ಬೆಳೆಸುವುದು, ಬೌದ್ಧಿಕ ಸಾಮರ್ಥ್ಯದಿಂದ ರಚನೆಯಾದ ದಸ್ತಾವೇಜಿಗೆ ರಕ್ಷಣೆ ನೀಡುವುದು ಇದರ ಉದ್ದೇಶ. ಓದುವುದು ಮಾನವ ಸಂಸ್ಕೃತಿ ಅವಿಭಾಜ್ಯ ಅಂಗ. ಸಮಾಜದಲ್ಲಿ ಪ್ರಸಿದ್ಧ ವ್ಯಕ್ತಿಗಳ ಹಿನ್ನಲೆ ಓದುವುದಾಗಿದೆ. ಡಿಜಿಟಲ್ ಯುಗದಲ್ಲಿ ಓದುವುದು ಕಡಿಮೆಯಾಗುತ್ತಿದೆ. ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಿದರೆ ಜ್ಞಾನವಂತರಾಗಬಹುದು. ಓದುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಕಾಲೇಜಿನ ಗ್ರಂಥಾಲಯದಲ್ಲಿ ₹9 ಲಕ್ಷ ಅನುದಾನದಲ್ಲಿ ಎಲ್ಲಾ ರೀತಿ ಪರಾಮರ್ಶ ಗ್ರಂಥಗಳನ್ನು, ಪರೀಕ್ಷೆಗೆ ಉಪಯೋಗವಾಗುವ ಪುಸ್ತಕ ತರಿಸಲಾಗಿದೆ. ಸಂಪೂರ್ಣ ಗಣಕೀಕರಣ ಮಾಡಲಾಗಿದೆ ಎಂದರು.


ಸಭೆ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಧನಂಜಯ ವಹಿಸಿದ್ದರು. ಸಭೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ, ಐಕ್ಯೂಎಸಿ ಸಂಚಾಲಕ ಆರ್.ಕೆ.ಪ್ರಸಾದ್ , ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಡಿ.ಸತೀಶ್, ನಿರ್ವಹಣಾ ವಿಭಾಗದ ಮುಖ್ಯಸ್ಥ ವಿ.ಸತೀಶ್, ಕನ್ನಡ ವಿಭಾಗದ ಶಂಕರನಾಯ್ಕ ಇದ್ದರು.