ಸಾರಾಂಶ
ಪುಸ್ತಕವೆಂದರೆ ಕೇವಲ ಅಕ್ಷರಗಳ ಗುಚ್ಚವಲ್ಲ. ಪುಸ್ತಕ ಓದುವುದರಿಂದ ಏಕಾಗ್ರತೆ , ಸ್ಮರಣೆ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಾಹಿತಿ ಸಿ.ಬಿ. ಶೈಲ ಹೇಳಿದರು.
ಕನ್ನಡಪ್ರಭಾರ್ತೆ ಚಿತ್ರದುರ್ಗಪುಸ್ತಕವೆಂದರೆ ಕೇವಲ ಅಕ್ಷರಗಳ ಗುಚ್ಚವಲ್ಲ. ಪುಸ್ತಕ ಓದುವುದರಿಂದ ಏಕಾಗ್ರತೆ , ಸ್ಮರಣೆ ಶಕ್ತಿ ವೃದ್ಧಿಯಾಗುತ್ತದೆ ಎಂದು ಸಾಹಿತಿ ಸಿ.ಬಿ. ಶೈಲ ಹೇಳಿದರು.ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ರೋಟರಿ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೂರು ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜ್ಞಾನದ ಕಣಜ ಪುಸ್ತಕಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವುದಲ್ಲದೆ ಒತ್ತಡ ನಿವಾರಿಸುತ್ತದೆ. ಪದಸಂಪತ್ತು, ಬರಹ, ಕೌಶಲ್ಯ ಮೂಡುತ್ತದೆ. ಓದಿನಿಂದ ಮನಸ್ಸು ವಿಕಾಸಗೊಂಡು ಶಾಂತಿ ನೆಲೆಸುತ್ತದೆ. ಸ್ವರ್ಗ ಎನ್ನುವುದು ನಮ್ಮ ಕೈಯಲ್ಲಿಲ್ಲ, ಓದುವ ಪುಸ್ತಕದಲ್ಲಿದೆ. ಏ.23 ನ್ನು ಪುಸ್ತಕ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಬಳಿ ಸಾವಿರಾರು ಪುಸ್ತಕಗಳಿದ್ದವು ಎಂದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಆರ್. ಮಂಜುನಾಥ್, ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿ ಮೂಡಿಸುವ ಜವಾಬ್ದಾರಿ ಶಿಕ್ಷಕರುಗಳ ಮೇಲಿದೆ ಎಂದು ತಿಳಿಸಿದರು.ಪಠ್ಯದ ಜತೆಗೆ ಮಕ್ಕಳಿಗೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಪರಿಚಯಿಸಬೇಕು. ಸಣ್ಣ ಕಥೆ, ನೀತಿ ಪಾಠ, ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳಿವೆ. ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿಯುವ ಬದಲು ಪುಸ್ತಕ ಹಿಡಿಯಬೇಕು . ಮಹಾತ್ಮಗಾಂಧಿ ಸತ್ಯಹರಿಶ್ಚಂದ್ರ ನಾಟಕ ನೋಡಿ ಜೀವನದಲ್ಲಿ ಒಮ್ಮೆಯೂ ಸುಳ್ಳು ಹೇಳಲಿಲ್ಲ ಎಂದರು. ಮೊಬೈಲ್, ಟಿ.ವಿ ಕಂಪ್ಯೂಟರ್ ಹಾವಳಿ ನಡುವೆ ಸಣ್ಣ ಸಣ್ಣ ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸಾಹಿತ್ಯ, ಸಂಗೀತ, ಜಾನಪದ, ನೃತ್ಯಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕಿದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಆಸಕ್ತ ಕ್ರಿಯಾಶೀಲರೆಲ್ಲಾ ಸೇರಿಕೊಂಡು 2003 ರಿಂದ ಪುಸ್ತಕಗಳನ್ನು ನೀಡುವ ಕೆಲಸ ಆರಂಭಿಸಿದೆವು. ಹನ್ನೆರಡರಿಂದ ಹದಿಮೂರು ಸಾವಿರ ಪುಸ್ತಕಗಳನ್ನು ಸಂಗ್ರಹಿಸಿದ್ದೇವೆ. 900 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಇದುವರೆವಿಗೂ 90 ಸಾವಿರ ಪುಸ್ತಕಗಳನ್ನು ಕೊಟ್ಟಿದ್ದೇವೆ. ಚಿತ್ರದುರ್ಗ ಒಂಬತ್ತನೆ ಜಿಲ್ಲೆ. ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸುವುದು ನಮ್ಮ ಉದ್ದೇಶ ಎಂದು ಹೇಳಿದರು.ಮಕ್ಕಳಿಗೆ ಮೊಬೈಲ್ ಬಿಡಿಸಿ ಕೈಗೆ ಪುಸ್ತಕಗಳನ್ನು ಹಿಡಿಸುವ ಕೆಲಸ ಮಾಡುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಇದುವರೆವಿಗೂ 36 ಮಂದಿಗೆ ಪ್ರಶಸ್ತಿಗಳನ್ನು ನೀಡಿದ್ದೇವೆ. ಜ್ಞಾನ ಹಂಚುವ ಕೆಲಸ ಮಾಡುತ್ತಿದ್ದರೂ ಸರ್ಕಾರಗಳು ನಮ್ಮನ್ನು ನಗಣ್ಯವಾಗಿ ಕಾಣುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಮಂಜುನಾಥ ಭಾಗವತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಚಿಕ್ಕಮಗಳೂರು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್, ನಾಗರಾಜ್ ವೇದಿಕೆಯಲ್ಲಿದ್ದರು. ಕಸಾಪ ಕಾರ್ಯದರ್ಶಿ ಶ್ರೀನಿವಾಸ್ ವಿ. ಮಳಲಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹುರಳಿ ಎಂ. ಬಸವರಾಜ್ ಉಪಸ್ಥಿತರಿದ್ದರು.