ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು- ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿಕೆ

| Published : Jun 21 2025, 12:49 AM IST

ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು- ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಿಂದ ಬದುಕು ರೂಪಿಸಲು ಸಾಧ್ಯ. ಆದ್ದರಿಂದ ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು. ಇದು ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯವನ್ನು ರೂಪಿಸುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಶಿಕ್ಷಣದಿಂದ ಬದುಕು ರೂಪಿಸಲು ಸಾಧ್ಯ. ಆದ್ದರಿಂದ ಓದು ನಮ್ಮ ಪ್ರಥಮ ಆಯ್ಕೆಯಾಗಬೇಕು. ಇದು ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯವನ್ನು ರೂಪಿಸುತ್ತದೆ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು. ಶ್ರೀ ಜಗದ್ಗುರು ಫಕೀರೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಹಟ್ಟಿ ವತಿಯಿಂದ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ, ೨೦೨೪-೨೫ನೇ ಸಾಲಿನ ಪಠ್ಯೇತರ ಚಟುವಟಿಕೆಗಳ ಸಮಾರೋಪ ಹಾಗೂ ಅಂತಿಮ ವರ್ಷದ ಬಿ.ಎ. ಮತ್ತು ಬಿಕಾಂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಧಿಸುವ ಛಲ, ದೂರದೃಷ್ಟಿ ಮತ್ತು ದೃಢ ಸಂಕಲ್ಪ ಅಳವಡಿಸಿಕೊಂಡರೆ ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಬಹುದು. ಕಾಲೇಜು ವಿದ್ಯಾರ್ಥಿಗಳಲ್ಲಿ ಸಮಯಪ್ರಜ್ಞೆ ಮತ್ತು ಗುರಿ ಸ್ಪಷ್ಟವಾಗಿರಬೇಕು. ಆಗ ಮಾತ್ರ ಬದುಕಿನಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಸಮಯ ಮತ್ತು ಅವಕಾಶ ಯಾರಿಗೂ ಕಾಯುವುದಿಲ್ಲ. ಆದ್ದರಿಂದ ನೀವೇನಾಗಬೇಕು ಎಂಬುದನ್ನು ನಿಶ್ಚಯಿಸಿಕೊಳ್ಳಬೇಕು. ಇದರಿಂದ ನಿಮ್ಮ ಮುಂದಿನ ಭವಿಷ್ಯ ಸುಭದ್ರವಾಗಿರುತ್ತದೆ ಎಂದರು. ಶಿಕ್ಷಣ ಎಂದರೆ ಕೇವಲ ಅಂಕಗಳಿಕೆಗೆ ಸೀಮಿತವಾಗಬಾರದು. ಉತ್ತಮ ವ್ಯಕ್ತಿತ್ವ ರೂಪಿಸುವ ಶಿಕ್ಷಣ ಎಲ್ಲರೂ ಪಡೆಯುವಂತಾಗಬೇಕು. ಆ ದಿಸೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಪ್ರಯತ್ನ ಮುಂದುವರೆಸಬೇಕು. ಬಡತನದಲ್ಲಿ ಸಾಕಷ್ಟು ಕಷ್ಟ ನೋವು ಅನುಭವಿಸಿ ಅದ್ಭುತ ಸಾಧನೆ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು ನಿಮಗೆಲ್ಲ ಸ್ಫೂರ್ತಿ ಆಗಬೇಕು ಎಂದು ಕರೆ ನೀಡಿದರು.

ಶಿಕ್ಷಣ ಹರಿಯುವ ನೀರಿನಂತೆ ನಿತ್ಯ ನೂತನವಾಗಿರುತ್ತದೆ. ವಿದ್ಯಾರ್ಥಿಗಳು ಪ್ರತಿದಿನ ಶೈಕ್ಷಣಿಕ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಸಂಶೋಧನೆ, ಅನ್ವೇಷಣೆ ಕುರಿತು ತಿಳಿದುಕೊಂಡು ಜ್ಞಾನದ ಹರಿವು ಹೆಚ್ಚಿಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಗೈಯಲು ಅಚಲ ವಿಶ್ವಾಸ, ದೃಢ ನಂಬಿಕೆ, ಸಂಸ್ಕಾರವಂತ ಶಿಕ್ಷಣ ಅವಶ್ಯವಾಗಿದೆ ಎಂದರು.

ಭೂಗೋಳಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಧಾರವಾಡ ಮುಖ್ಯಸ್ಥರಾದ ಡಾ. ಎಲ್.ಟಿ. ನಾಯಕ ಮಾತನಾಡಿ, ವಿದ್ಯಾರ್ಥಿಗಳಿಗೆ ವಿದ್ಯೆ ಜೊತೆಗೆ ವಿನಯ ಬಹಳ ಮುಖ್ಯವಾಗಿದ್ದು, ಆತ್ಮಸ್ಥೈರ್ಯ ಹಾಗೂ ಛಲದೊಂದಿಗೆ ನಿಮ್ಮ ಮುಂದಿನ ವಿದ್ಯಾರ್ಜನೆಯನ್ನು ಯಶಸ್ವಿಯಾಗಿ ಮುನ್ನೆಡಸಿ ಎಂದರು. ಸತತ ಪರಿಶ್ರಮ ಹಾಗೂ ಹೋರಾಟ ಮನೋಭಾವ ಅತ್ಯಗತ್ಯ. ಮುಖ್ಯವಾಗಿ ಮೊಬೈಲ್ ಹಾಗೂ ದೃಶ್ಯ ಮಾಧ್ಯಮದಿಂದ ದೂರವಿರಬೇಕು. ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು. ಬಹುತೇಕ ಮಕ್ಕಳು ಮೊಬೈಲ್‌ಗಳಿಂದ ಅನವಶ್ಯಕವಾಗಿ ಸಮಯ ವ್ಯರ್ಥ ಮಾಡಿಕೊಂಡು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು. ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗಿಷ್ಟವಾದ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಅವರಿಗೆ ಪ್ರೋತ್ಸಾಹ ನೀಡುವದು ಪಾಲಕರ ಆದ್ಯ ಕರ್ತವ್ಯವಾಗಿದ್ದು, ಅವರ ಆಸೆಗಳಿಗೆ ತಣ್ಣಿರೆರಚುವ ಕೆಲಸವಾಗಬಾರದು. ಪಾಲಕರ ಹಿತಾಸಕ್ತಿ ಅಡಗಿರುವದು ಮಕ್ಕಳ ಭವಿಷ್ಯವನ್ನು ರೂಪಿಸುವದರಲ್ಲಿ ಎಂಬುದನ್ನು ಮರೆಯಬಾರದು ಎಂದು ಹೇಳಿದರು. ಕಾಲೇಜ್‌ ಪ್ರಾಂಶುಪಾಲ ಡಾ. ಉಮೇಶ ಅರಹುಣಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ಸಿನ ಸಾಧನೆ ಕಟ್ಟಿಟ್ಟ ಬುತ್ತಿ. ನಮ್ಮ ಜೀವನದ ಗುರಿ ಸಾಧಿಸುವುದು ಕಷ್ಟಕರ. ಹಾಗೆ ಸಾಧಿಸಿದ ಯಶಸ್ಸನ್ನು ಕಾಪಾಡಿಕೊಳ್ಳುವುದು, ಯಶಸ್ಸು ಬಂದಾಗ ಸಾಗಿಬಂದ ದಾರಿಯನ್ನು ನಾವು ಎಂದಿಗೂ ಮರೆಯಬಾರದು. ಪರಿಶ್ರಮ, ಶ್ರದ್ದೆ, ಆಸಕ್ತಿ ನಿರಂತರ ಅಭ್ಯಾಸ ನಡೆಸಿದರೆ ಪರೀಕ್ಷೆ ಫಲಿತಾಂಶ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆಬಹುದು ಎಂದು ತಿಳಿಸಿದರು. ಶಿಕ್ಷಣದ ಗುಣಮಟ್ಟ ಹಾಗೂ ಪರಿಣಾಮಕಾರಿ ಬೋಧನೆ ಸಹ ಮಕ್ಕಳಿಗೆ ಅವಶ್ಯಕವಾಗಿದೆ. ಜಾಗತಿಕ ಪೈಪೋಟಿ ಎದುರಿಸಲು ಅದಕ್ಕೆ ಪೂರಕವಾದ ಶಿಕ್ಷಣ ಅಗತ್ಯವಿದೆ. ಕಾಟಾಚಾರದ ಶಿಕ್ಷಣ ಸಲ್ಲದು. ಅದಕ್ಕೆ ಅನುಗುಣವಾಗಿ ಸರ್ಕಾರ ಸಹ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಅದರ ಸದ್ಬಳಕೆ ಮಾಡಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಪ್ರಕಾಶ ಹೆಚ್. ಹೊಸಮನಿ ಮಾತನಾಡಿದರು. ಬಿಇಓ ಎಚ್. ನಾಣಕೀ ನಾಯಕ, ಚಂದ್ರಕಾಂತ ನೂರಶೆಟ್ಟರ, ಎಚ್.ಎಂ. ದೇವಗೀರಿ, ಕೆ.ಎ. ಬಳಿಗೇರ, ಫಕೀರೇಶ ರಟ್ಟಿಹಳ್ಳಿ, ಅಶೋಕ ವರವಿ, ನಂದಾ ಪಲ್ಲೇದ, ಸಂದೀಪ ಕಪ್ಪತ್ತನವರ, ಮಂಜುನಾಥ ಸೊಂಟನೂರ, ನಂದಾ ಕಪ್ಪತ್ತನವರ ಸೇರಿ ಕಾಲೇಜ ಉಪನ್ಯಾಸಕರು, ಸಿಬ್ಬಂದಿ ಇದ್ದರು.