ಸಾರಾಂಶ
ಕೊಟ್ಟೂರು : ಕೋವಿಡ್ ಸಂದರ್ಭ ಸಚಿವ ಸ್ಥಾನದಲ್ಲಿದ್ದ ನಾನು ಭ್ರಷ್ಟಾಚಾರ ನಡೆಸಿರುವುದು ಸಾಬೀತಾದರೆ ಜೈಲಿಗೆ ಹೋಗಲು ಸಿದ್ಧ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಬಿ. ನಾಗೇಂದ್ರ ಅವರು ನನ್ನನ್ನು ಜೈಲಿಗೆ ಕಳಿಸುವುದಾಗಿ ಹೇಳಿರುವುದು ಇದೇ ಮೊದಲ ಬಾರಿ ಅಲ್ಲ. ಈಗಲೂ ಅವರದೇ ಸರ್ಕಾರವಿದೆ, ನನ್ನ ವಿರುದ್ಧ ಸೂಕ್ತ ತನಿಖೆ ನಡೆಸಿ ಭ್ರಷ್ಟಾಚಾರ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.
ಸಂಡೂರು ವಿಧಾನಸಭೆಯ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಮುಖ್ಯಮಂತ್ರಿಗಳು ಹಲವು ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಮುಲು ಅವರನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರು. ಆದರೆ ಈವರೆಗೂ ತನಿಖೆಗೆ ಮುಂದಾಗಿಲ್ಲ. ಯಾರೇ ತಪ್ಪು ಮಾಡಿದರೆ ಕಾನೂನು ಅವರನ್ನು ಸುಮ್ಮನೆ ಬಿಡುವುದಿಲ್ಲ. ಕೋವಿಡ್ ಸಂದರ್ಭ ಆರೋಗ್ಯ ಸಚಿವನಾಗಿದ್ದ ನಾನು ಕೋವಿಡ್ ಭಯವಿಲ್ಲದೇ ಆಸ್ಪತ್ರೆಗಳಿಗೆ ತೆರಳಿ ಸೋಂಕಿತರನ್ನು ಭೇಟಿ ಮಾಡಿ ಮಾತನಾಡಿಸಿದ್ದೆ. ಸೋಂಕಿತರ ಹಾಗೂ ಆಸ್ಪತ್ರೆಗಳಲ್ಲಿ ಅವಶ್ಯವಿರುವ ಔಷಧಿ, ಪಿಪಿ ಕಿಟ್ಗಳ ಕುರಿತು ಸ್ವತಃ ಅನುಭವಕ್ಕೆ ತೆಗೆದುಕೊಂಡು ಖರೀದಿಸಲಾಗಿತ್ತು. ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದರು.
ಪಕ್ಷದ ಹಿತದೃಷ್ಟಿಯಿಂದ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕಾರಣಕ್ಕೆ ನಾನು- ಜನಾರ್ದನ ರೆಡ್ಡಿ ಮಾತ್ರವಲ್ಲ ಎಲ್ಲರೂ ಒಂದಾಗುವುದು ಅವಶ್ಯವಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಸಂಡೂರು ಉಪ ಚುನಾವಣೆ ಬಳಿಕ ತುಸು ಮನಸ್ತಾಪವಾಗಿದ್ದು ಬಿಟ್ಟರೆ ಯಾವುದೇ ದೊಡ್ಡ ಕಂದಕ ಇರಲಿಲ್ಲ. ಈಗ ಒಂದಾಗಿರುವುದು ಕಾರ್ಯಕರ್ತರಲ್ಲಿಯೂ ಹುಮ್ಮಸು ಮೂಡಿಸಿದೆ. ನಾವಿಬ್ಬರೂ ಒಟ್ಟಾಗಿ ಪಕ್ಷ ಸಂಘಟನೆಯೊಂದಿಗೆ ಅಧಿಕಾರಕ್ಕೆ ತರುವ ಕಾರ್ಯ ಮಾಡುತ್ತೇವೆ ಎಂದರು.
ಹೈಕಮಾಂಡ್ ನನಗೆ ಜವಾಬ್ದಾರಿ ವಹಿಸಿದರೆ ಅಸಮಾಧಾನಗೊಂಡಿರುವ ಜಿ.ಎಂ. ಸಿದ್ಧೇಶ್ವರ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ ಸೇರಿ ಎಲ್ಲ ನಾಯಕರೊಂದಿಗೆ ಮಾತುಕತೆ ನಡೆಸಿ ಒಗ್ಗಟ್ಟಾಗಿಸಲು ಸಿದ್ಧನಿದ್ದೇನೆ. ಈ ಕುರಿತು ಪಕ್ಷದ ರಾಷ್ಟ್ರಾಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತಾಡಿರುವೆ. ಕಾದು ನೋಡುವುದಾಗಿ ಹೇಳಿದ್ದಾರೆ. ಅವರು ಜವಾಬ್ದಾರಿ ವಹಿಸಿದರೆ ಖಂಡಿತ ಪಕ್ಷಕ್ಕಾಗಿ ಕಾರ್ಯ ನಿರ್ವಹಿಸಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಮುಂದಾಗುವೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮುಂದುವರೆಯುತ್ತಾರೆ. ಅವರೊಂದಿಗೆ ಸಹ ಎಲ್ಲರನ್ನೂ ಒಗ್ಗೂಡಿಸುವ ಕುರಿತು ಮಾತಾಡಿರುವೆ ಎಂದು ಹೇಳಿದರು.