ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ / ತೀರ್ಥಹಳ್ಳಿ
ರಕ್ತದ ಬೆಲೆ ಗೊತ್ತಾಗುವುದು ನಮ್ಮವರಿಗೆ ತುರ್ತು ಅಗತ್ಯವಿದ್ದಾಗ ಮಾತ್ರ. ಜೀವ ಉಳಿಸುವ ಮಹತ್ತರ ಕಾರ್ಯ ಮಾಡುವ ರಕ್ತದಾನಿಗಳು ನಮ್ಮೆಲ್ಲರಿಗೂ ಮಾದರಿ ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಮಾಜಿ ಅಧ್ಯಕ್ಷ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್ ಹೇಳಿದರು.ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಾಜೇಂದ್ರನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ರಕ್ತದಾನಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಸಂಘ ಸಂಸ್ಥೆಗಳ ದೊಡ್ಡ ಪಾತ್ರವಿದೆ. ಇದರಿಂದ ನೂರಾರು ಜನರಿಗೆ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
115 ರಕ್ತದಾನ ಮಾಡಿರುವ ಧರಣೇಂದ್ರ ದಿನಕರ್ ಮಾತನಾಡಿ, ಜೂನ್ 14ರಂದು ವಿಶ್ವಾದ್ಯಂತ ರಕ್ತದಾನಿಗಳ ಆಚರಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲೂ ರಕ್ತದಾನಿ ಇರಬೇಕು. ಆರೋಗ್ಯವಂತ ಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಐಎಂಎ ಮಾಜಿ ಅಧ್ಯಕ್ಷ ಡಾ. ಪರಮೇಶ್ವರ್ ಶಿಗ್ಗಾವ್ ಮಾತನಾಡಿ, ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ರಕ್ತದಾನ ಮಾಡಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
75 ಬಾರಿ ರಕ್ತದಾನ ಮಾಡಿರುವ ಪ್ರಿಯದರ್ಶಿನಿ ಕಾಲೇಜಿನ ಪ್ರಾಚಾರ್ಯ ವೀರೇಶ್, 93 ಬಾರಿ ರಕ್ತದಾನ ಮಾಡಿರುವ ಪರ್ಫೆಕ್ಟ್ ಅಲಾಯ್ಸ್ನ ಮಂಜುನಾಥ್ ಹಾಗೂ ಧರಣೇಂದ್ರ ದಿನಕರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.ನಿಯೋಜಿತ ಅಧ್ಯಕ್ಷ ಅರುಣ್ ದೀಕ್ಷಿತ್, ಮಾಜಿ ಅಧ್ಯಕ್ಷರಾದ ಎನ್.ಎಚ್.ಶ್ರೀಕಾಂತ್, ಕಾರ್ಯದರ್ಶಿ ಕಿಶೋರ್ ಕುಮಾರ್, ನಿವೃತ್ತ ಅಧಿಕಾರಿ ಚಂದ್ರಶೇಖರಯ್ಯ, ಮುಕುಂದೇಗೌಡ, ಸಂಜೀವ್ ಕುಮಾರ್ ರೋಟರಿ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ದಾನಗಳಲ್ಲೇ ಅತ್ಯಂತ ಶ್ರೇಷ್ಠವಾದ್ದು ರಕ್ತದಾನ: ಆರಗ ಜ್ಞಾನೇಂದ್ರ
ತೀರ್ಥಹಳ್ಳಿ: ದಾನಗಳಲ್ಲೇ ಅತ್ಯಂತ ಶ್ರೇಷ್ಠವಾಗಿದ್ದು ರಕ್ತದಾನ. ಪ್ರತಿಫಲಾಪೇಕ್ಷೆ ಇಲ್ಲದೇ ಮಾಡುವ ಒಂದು ಯೂನಿಟ್ ರಕ್ತ ನಾಲ್ಕು ಮಂದಿಯ ಪ್ರಾಣವನ್ನು ನೀಡುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ತಾಲೂಕಿನ ಅರಳಸುರುಳಿ ಬಿಜೆಪಿ ಯುವ ಮೋರ್ಚಾ ಘಟಕದ ವತಿಯಿಂದ ಶನಿವಾರ ಅರಳಸುರುಳಿಯಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ವ್ಯಕ್ತಿಯ ಜೀವ ಉಳಿಸಲು ನೀಡುವ ರಕ್ತದಾನ ಪರರಿಗಾಗಿ ಸಂಕಷ್ಟದಲ್ಲಿ ತೋರುವ ಮಾನವೀಯ ಪ್ರತೀಕವಾಗಿದೆ ಎಂದು ಹೇಳಿದರು.ಭಾರತ ಭೌಗೋಳಿಕವಾಗಿಯೂ ವಿಸ್ತಾರವಾಗಿದ್ದು, ಅತ್ಯಂತ ಎತ್ತರದ ಸ್ಥಾನದಲ್ಲಿದ್ದು ಹೃದಯವಂತಿಕೆಯಲ್ಲೂ ಮಾತೃಸ್ಥಾನವನ್ನು ಹೊಂದಿದೆ. ನಮ್ಮ ಪೂರ್ವಿಕರು ಹಾಕಿಕೊಟ್ಟಿರುವ ಸತ್ಸಂಪ್ರದಾಯ ಮತ್ತು ಅವರ ಕನಸನ್ನು ನನಸಾಗಿಸುವ ಹೊಣೆಗಾರಿಕೆ ಇಂದಿನ ಯುವಕರ ಮೇಲಿದೆ. ನರೇಂದ್ರ ಮೋದಿ ನೇತೃತ್ವದ ಆಡಳಿತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈ ದೇಶ ಉನ್ನತ ಸ್ಥಾನಕ್ಕೇರುತ್ತಿದೆ ಎಂದೂ ಹೇಳಿದರು.