ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ ಎಸ್ಸಿ ಎಸ್ಪಿ, ಟಿಎಸ್ಪಿ ಯೋಜನೆ ರೂಪಿಸಿಲ್ಲ. ಬಡ್ತಿಯಲ್ಲಿ ಮೀಸಲಾತಿಯನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ರಾಜ್ಯದಲ್ಲಿ ಸಮಿತಿ ರಚಿಸಿ ವರದಿ ಜಾರಿ ಮಾಡಲಾಯಿತು. ಊರ್ಜಿತವೂ ಆಯಿತು. ಕೇಂದ್ರ ಸರ್ಕಾರ ಏಕೆ ಇದನ್ನು ಜಾರಿ ಮಾಡಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಸಾಮಾಜಿಕ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಭಿನಂದನಾ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿವಕುಮಾರ್ ಅವರು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದಾರೆ. ಜಾತಿ ಮತ್ತು ಚಾತುರ್ವರ್ಣ ವ್ಯವಸ್ಥೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು. ಇವುಗಳನ್ನು ತಿಳಿದುಕೊಳ್ಳದೆ ಹೋದರೆ ವೈಚಾರಿಕ, ವೈಜ್ಞಾನಿಕ, ಐತಿಹಾಸಿಕ ಜ್ಞಾನ ಪಡೆದುಕೊಳ್ಳಲಾಗುವುದಿಲ್ಲ. ವೈಚಾರಿಕ, ವೈಜ್ಞಾನಿಕ ಶಿಕ್ಷಣ ಸಿಗದೇ ಹೋದರೆ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಕಂದಾಚಾರ ಹಾಗೂ ಮೌಢ್ಯಗಳಿಗೆ ದಾಸರಾಗುತ್ತೇವೆ ಎಂದರು.

ಶತಶತಮಾನಗಳಿಂದ ಅಸ್ಪೃಶ್ಯತೆ ಹಾಗೂ ಜಾತಿಯ ಕಾರಣಗಳಿಂದ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಮನೆ ಮಾಡಿದೆ, ಇದನ್ನು ಕಿತ್ತೊಗೆಯಬೇಕು. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಗಾಂಧಿ ಅವರ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ದಲಿತರು ಪತ್ರಕರ್ತರಾಗುವುದು ಬಹಳ ಅಪರೂಪ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮಾ ಗಾಂಧಿಯವರು ಪತ್ರಕರ್ತರಾಗಿದ್ದರು. ಎಲ್ಲರೂ ಅವರಂತಾಗಲು ಸಾಧ್ಯವಿಲ್ಲ. ಆದರೆ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಅದನ್ನು ಶಿವಕುಮಾರ್ ಅವರು ಮಾಡಿಕೊಂಡು ಬಂದಿದ್ದಾರೆ ಎಂದರು.

ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸಿ ಪರಿಹಾರ ಹುಡುಕುವ ಕೆಲಸವನ್ನು ಪತ್ರಕರ್ತರಾಗಿ ಶಿವಕುಮಾರ್ ಸದಾ ಮಾಡಿದ್ದಾರೆ. ಅವಕಾಶಗಳಿಂದ ವಂಚಿತರಾದವರ ಪರವಾಗಿ ಶಿವಕುಮಾರ್ ಕೆಲಸ ಮಾಡಲಿ ದಲಿತರ ಪರವಾಗಿ ವಿಧಾನ ಪರಿಷತ್ ನಲ್ಲಿ ಶಿವಕುಮಾರ್ ಕೆಲಸ ಮಾಡಬೇಕು. ಧ್ವನಿ ಇಲ್ಲದವರ ಅವಕಾಶಗಳಿಂದ ವಂಚಿತರಾದವರ ಪರವಾಗಿ ಶಿವಕುಮಾರ್ ಕೆಲಸ ಮಾಡಲಿ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಷ್ಟು ವರ್ಷಗಳಾದರೂ ಎಸ್ಸಿ ಎಸ್ಪಿ, ಟಿಎಸ್ಪಿ ಯೋಜನೆ ರೂಪಿಸಿಲ್ಲ. ಬಡ್ತಿಯಲ್ಲಿ ಮೀಸಲಾತಿಯನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ರಾಜ್ಯದಲ್ಲಿ ಸಮಿತಿ ರಚಿಸಿ ವರದಿ ಜಾರಿ ಮಾಡಲಾಯಿತು. ಊರ್ಜಿತವೂ ಆಯಿತು. ಕೇಂದ್ರ ಸರ್ಕಾರ ಏಕೆ ಇದನ್ನು ಜಾರಿ ಮಾಡಬಾರದು ಎಂದು ಪ್ರಶ್ನಿಸಿದರು.

ಮನರೇಗಾ ಯೋಜನೆಯ ಹೆಸರು ಬದಲಾಯಿಸಿ ವಿಬಿ ಜಿ ರಾಮ್ ಜಿ ಎಂದು ಹೆಸರಿಸಿದ್ದಾರೆ. ನಮ್ಮಲ್ಲಿ ಶೇ. 17ರಷ್ಟು ಎಸ್ಸಿ ಹಾಗೂ ಶೇ. 11ರಷ್ಟು ಎಸ್ಟಿ ಸಮುದಾಯದವರಿದ್ದರೂ ಈ ಬಗ್ಗೆ ಮಾತನಾಡಿಲ್ಲ ಎಂದರು.

ಜಿ.ಎಸ್.ಟಿ ಜಾರಿ ಮಾಡಿದ ಕೇಂದ್ರ ಸರ್ಕಾರ 6 ಸಾವಿರ ಕೋಟಿಯನ್ನು ರಾಜ್ಯಕ್ಕೆ ಕಡಿಮೆ ಮಾಡಿದೆ. ನರೇಗ ಯೋಜನೆಯಡಿ ಕಳೆದ 20 ವರ್ಷಗಳಿಂದ ಕೇಂದ್ರ ಸರ್ಕಾರವೇ ಅನುದಾನ ನೀಡುತ್ತಿತ್ತು. ಈಗ 60:40 ಅನುಪಾತ ನಿಗದಿ ಮಾಡಿದೆ. ಶೇ. 40ರಷ್ಟು ರಾಜ್ಯ ಸರ್ಕಾರ ಭರಿಸಬೇಕಿದ್ದು ಸುಮಾರು 2500 ಕೋಟಿ ರೂ. ನಷ್ಟವಾಗುತ್ತದೆ ಎಂದರು.

ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ. ರಾಜಕೀಯ ಸ್ವಾತಂತ್ರ್ಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮೇಲೆ ನಿಂತಿದೆ. ಎಲ್ಲರಿಗೂ ಇದು ದೊರೆಯುವವರೆಗೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾವಲಂಬನೆ ಅಗತ್ಯ ಎಂದು ಹೇಳಿದರು.

ಉತ್ಪಾದನಾ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಿ ಬಂದದ್ದನ್ನು ಎಲ್ಲರೂ ಹಂಚಿಕೊಳ್ಳುವುದೇ ಕಾಯಕ ಮತ್ತು ದಾಸೋಹದ ತತ್ವ ಎಂದರು.

ಮೈಸೂರು ವಿಶ್ವವಿದ್ಯಾಲಯಕ್ಕೆ ವಿಶೇಷ ಗಮನ:

ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿ ನೀಡಲು ಅನುದಾನ ಬಿಡುಗಡೆ ಮಾಡಿದೆ. ಮೈಸೂರು ವಿವಿ ಸರಿಪಡಿಸಲು ವಿಶೇಷ ಗಮನ ಹರಿಸಿ, ಕ್ರಮ ವಹಿಸಲಾಗುವುದು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ನಾನು ಪತ್ರಿಕೋದ್ಯಮ ಬಿಟ್ಟರೆ ಹೆಚ್ಚು ಇದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ. ಏಕೆಂದರೆ ಅವರಲ್ಲಿ ಸಾಮಾಜಿಕ ಬದ್ಧತೆ ಕಾರಣದಿಂದ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ದಲಿತರಿಗೆ ರೂಪಿಸಿರುವ ಯೋಜನೆಗಳು, ನೀಡಿರುವ ಕೊಡುಗೆಯನ್ನು ದಲಿತರೇ ಮುಖ್ಯಮಂತ್ರಿಯಾಗಿದ್ದರು ಕೊಡಲು ಸಾಧ್ಯವಾಗುತ್ತಿರಲಿಲ್ಲ. ಬೇಕಾದರೆ ನಾನು ಚಾಲೆಂಜ್ ಮಾಡುತ್ತೇನೆ. ಏಕೆಂದರೆ ನಾನು ದಲಿತ ನಾಯಕರನ್ನು ಹತ್ತಿರದಿಂದ ನೋಡಿ ಅರಿತುಕೊಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಂದಿಗೂ ಋಣಿಯಾಗಿ ಇರುತ್ತೇನೆ ಎಂದರು.

ದೇಶದ ಆರು ರಾಜ್ಯಗಳಲ್ಲಿ ವಿಧಾನ ಪರಿಷತ್ ಇದೆ. ಇಲ್ಲಿವರೆಗೂ ಸಾವಿರಾರು ಮಂದಿ ಸದಸ್ಯರಾಗಿದ್ದಾರೆ. ಆದರೆ, ಒಬ್ಬೇ ಒಬ್ಬ ದಲಿತ ಪತ್ರಕರ್ತ ವಿಧಾನ ಪರಿಷತ್ ಸದಸ್ಯನಾಗಿರಲಿಲ್ಲ. ವ್ಯವಸ್ಥೆ ಎಷ್ಟೊಂದು ಕ್ರೂರವಾಗಿದೆ ಎನ್ನುವುದಕ್ಕೆ ಸಾಕ್ಷಿ ಇದು. ಬಸವಲಿಂಗಪ್ಪ ಅವರ ಸಲಹೆಯ ಮೇರೆಗೆ ನಾನು ಪತ್ರಕರ್ತ ವೃತ್ತಿಗೆ ಸೇರಿದೆ. ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ದೇವನೂರು ಮಹಾದೇವ ಸಹಕಾರ ನೀಡಿದರು. ಇಂದಿಗೂ ಕಾಲೇಜು ದಾಖಲೆಗಳಲ್ಲಿ ಗಾರ್ಡಿಯನ್ ಜಾಗದಲ್ಲಿ ಸುಮಿತ್ರ ಬಾಯಿ ಅವರ ಹೆಸರು ಇರುವುದು ಎಂದು ಅವರು ಸ್ಮರಿಸಿದರು.

ಸಚಿವ ಕೆ.ವೆಂಕಟೇಶ್, ಶಾಸಕ ತನ್ವೀರ್ ಸೇಠ್, ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ರವಿಶಂಕರ್, ಡಾ.ಡಿ. ತಿಮ್ಮಯ್ಯ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ದಲಿತ ಮುಖಂಡ ಹರಿಹರ ಆನಂದ ಸ್ವಾಮಿ ಮೊದಲಾದವರು ಇದ್ದರು.

ಸರ್ಕಾರದಲ್ಲಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು. ರಾಜ್ಯದಲ್ಲಿರುವ ಶೇ. 80ರಷ್ಟು ಅಹಿಂದ ವರ್ಗದ ಜಮೀನುಗಳಿಗೆ ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ ನಿಮ್ಮ ಅವಧಿಯಲ್ಲಿ ದಾಖಲೆ ಮಾಡಿಕೊಡಲು ಅಭಿಯಾನ ನಡೆಸಬೇಕು. ನಿಮ್ಮನ್ನು (ಮುಖ್ಯಮಂತ್ರಿ ಸಿದ್ದರಾಮಯ್ಯ) ಬಿಟ್ಟರೆ ಬೇರೆ ಯಾರಿಂದಲೂ ಇದನ್ನು ಮಾಡಲು ಸಾಧ್ಯವಿಲ್ಲ.

- ಕೆ.ಶಿವಕುಮಾರ್, ವಿಧಾನ ಪರಿಷತ್‌ ಸದಸ್ಯ