ಬರ ನಿರ್ವಹಣೆ ಗಂಭೀರತೆ ಅರಿತು ಸಮರ್ಥವಾಗಿ ನಿಭಾಯಿಸಿ

| Published : Mar 27 2024, 01:02 AM IST

ಸಾರಾಂಶ

ಕುಡಿವ ನೀರಿನ ಸಮಸ್ಯೆ ಎದುರಾದ ವಾರ್ಡ ಅಥವಾ ಗ್ರಾಮಗಳಲ್ಲಿ ಬೊರ್‌ವೇಲ್‌ ಕೊರೆಸುವ ಬದಲಾಗಿ ಖಾಸಗಿ ಬೋರವೇಲ್‌ಗಳಲ್ಲಿ ನೀರಿನ ಲಭ್ಯತೆ ಇದ್ದಲ್ಲಿ ಅವರಿಂದ ನೀರನ್ನು ಪಡೆಯಲು ಮುಂದಾಗಬೇಕು

ಗದಗ: ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬರ ನಿರ್ವಹಣೆ ಗಂಭೀರತೆ ಅರಿತು ಸಮರ್ಥವಾಗಿ ನಿಭಾಯಿಸಬೇಕು. ಸಾರ್ವಜನಿಕರಿಗೆ ಕುಡಿವ ನೀರಿನ ಪೂರೈಕೆಗೆ ಪ್ರಥಮಾದ್ಯತೆ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಮಟ್ಟದಲ್ಲಿ ತಹಸೀಲ್ದಾರರ ನೇತೃತ್ವದಲ್ಲಿ ವಾರಕ್ಕೊಂದು ಸಲ ಬರ ನಿರ್ವಹಣೆ ಕುರಿತು ಸಭೆ ಜರುಗಿಸಬೇಕು. ಸಭೆಯಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯನ್ನು ಸಮರ್ಪಕವಾಗಿ ಮಾಡಲು ಆದ್ಯತೆ ನೀಡಬೇಕು ಎಂದರು.

ಕುಡಿವ ನೀರಿನ ಸಮಸ್ಯೆ ಎದುರಾದ ವಾರ್ಡ ಅಥವಾ ಗ್ರಾಮಗಳಲ್ಲಿ ಬೊರ್‌ವೇಲ್‌ ಕೊರೆಸುವ ಬದಲಾಗಿ ಖಾಸಗಿ ಬೋರವೇಲ್‌ಗಳಲ್ಲಿ ನೀರಿನ ಲಭ್ಯತೆ ಇದ್ದಲ್ಲಿ ಅವರಿಂದ ನೀರನ್ನು ಪಡೆಯಲು ಮುಂದಾಗಬೇಕು. ಹತ್ತಿರದಲ್ಲಿ ನೀರಿನ ಲಭ್ಯತೆ ಇಲ್ಲದಿದ್ದರೆ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

ಸ್ಥಳೀಯ ಸಂಸ್ಥೆಯ ಮುಖ್ಯಸ್ಥರು ವಾಲ್‍ಮನ್‍ಗಳ ಸಭೆ ಕರೆದು ನೀರಿನ ಅಪವ್ಯಯವಾಗದಂತೆ ನಿಗಾ ವಹಿಸಲು ಸೂಚನೆ ನೀಡಬೇಕು. ನೀರನ್ನು ವೃಥಾಕಾರಣ ವ್ಯರ್ಥ ಮಾಡದೇ ಮಿತವಾಗಿ ಬಳಸುವಂತೆ ಜೀವಜಲದ ಮಹತ್ವ ಕುರಿತು ರೈತರು ಸೇರಿದಂತೆ ಸಾರ್ವಜನಿಕರಿಗೆ ತಿಳಿಹೇಳಬೇಕು.

ಜಿಲ್ಲೆಯಲ್ಲಿ ಜೂನ್ ಅಂತ್ಯದವರೆಗೆ ಕುಡಿವ ನೀರಿನ ಸಮರ್ಪಕ ಪೂರೈಕೆ ಇರುವ ನೀರಿನ ಲಭ್ಯತೆಗನುಸಾರ ಅಧಿಕಾರಿಗಳು ಹಂಚಿಕೆ ಮಾಡಿ ಬರನಿರ್ವಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಬರನಿರ್ವಹಣೆಯಲ್ಲಿ ನಿಷ್ಕಾಳಜಿ ಹಾಗೂ ನಿಧಾನಗತಿ ಕಾರ್ಯ ಸಹಿಸಲಾಗದು. ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್.ಮಾತನಾಡಿ, ಬರನಿರ್ವಹಣೆ ಕುರಿತು ಖಾಸಗಿ ಬೋರ್‌ವೇಲ್‌ ಗುರುತಿಸಿದ, ಹೊಸದಾಗಿ ಬೋರ್‌ವೇಲ್‌ ಕೊರೆಸಲು ಗುರುತಿಸಿದ ಪ್ರದೇಶಗಳ ಮಾಹಿತಿ, ಪೈಪ್‍ಲೈನ್ ದುರಸ್ತಿಗೆ ಸಂಬಂಧಿಸಿದ ವಿವರವಾದ ವರದಿ ವಾಟ್ಸ್‌ ಆ್ಯಪ್‌ ಮುಖಾಂತರ ಸಲ್ಲಿಸಬೇಕು. ತಮ್ಮ ಹಂತದಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು.

ಎಸ್ಪಿ ಬಿ.ಎಸ್. ನೇಮಗೌಡ ಮಾತನಾಡಿ, ಜಿಲ್ಲಾಧಿಕಾರಿಗಳು ಸೂಚಿಸಿದಂತೆ ನದಿ ದಡದಲ್ಲಿ ಹಾಗೂ ಕೆರೆಗಳಲ್ಲಿನ ನೀರನ್ನು ರೈತರು ತಮ್ಮ ಬೆಳೆಗಳಿಗೆ ಮೋಟರ್ ಮೂಲಕ ನೀರೆತ್ತುವುದನ್ನು ತಡೆಯಬೇಕು. ಅದಕ್ಕಾಗಿ ಈಗಾಗಲೇ ಶಿರಹಟ್ಟಿ, ಲಕ್ಷ್ಮೇಶ್ವರ ಹಾಗೂ ಮುಂಡರಗಿಯಲ್ಲಿ ಪೊಲೀಸ್‌ ಇಲಾಖೆಯ ಜಿಲ್ಲಾ ಮೀಸಲು ಪಡೆಯ ತುಕಡಿಯನ್ನು ತಾಲೂಕುವಾರು ನೀಡಲಾಗಿದೆ. ಅವುಗಳನ್ನು ಬಳಸಿಕೊಂಡು ರೈತರ ನೀರೆತ್ತುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು. ಇನ್ನೂ ಹೆಚ್ಚಿನ ಪೊಲೀಸ್‌ ಅಗತ್ಯವಿದ್ದಲ್ಲಿ ಒದಗಿಸಲಾಗುವುದು ಎಂದರು.

ಅನುದಾನದ ವಿವರ: ಬರ ನಿರ್ವಹಣೆಗಾಗಿ ಸರ್ಕಾರ ಅನುದಾನ ನೀಡಿದ್ದು, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ₹ 2421.01 ಲಕ್ಷ ಅನುದಾನ ಬರ ನಿರ್ವಹಣೆಗಾಗಿ ಲಭ್ಯವಿದ್ದು, ತಾಲೂಕುವಾರು ಎಲ್ಲ ತಹಸೀಲ್ದಾರರ ಖಾತೆಯಲ್ಲಿ ಒಟ್ಟಾರೆ ₹274.74 ಲಕ್ಷ ಅನುದಾನ ಲಭ್ಯವಿದ್ದು, ಗದಗ 41.81, ಗಜೇಂದ್ರಗಡ 21.06, ಲಕ್ಷ್ಮೇಶ್ವರ 7.53, ಮುಂಡರಗಿ 52.05, ನರಗುಂದ 67.64, ರೋಣ 34.39, ಶಿರಹಟ್ಟಿ-50.26.

ಪರಿಹಾರ ವಿತರಣೆ: ಜಿಲ್ಲೆಯಲ್ಲಿ 2023 ರ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ (ಬರಗಾಲದಿಂದ) ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹಾನಿಗೆ 113778 ಫಲಾನುಭವಿಗಳಿಗೆ ತಲಾ ಎರಡು ಸಾವಿರಗಳಂತೆ ಒಟ್ಟು ₹224178565 ಪರಿಹಾರ ವಿತರಿಸಲಾಗಿದೆ. ನರಗುಂದ ತಾಲೂಕಿನಲ್ಲಿ 25988, ರೋಣ 10703, ಗದಗ 13818, ಶಿರಹಟ್ಟಿ 17325, ಮುಂಡರಗಿ 12905, ಗಜೇಂದ್ರಗಡ 18680, ಲಕ್ಷ್ಮೇಶ್ವರ 14269.

ಮೇವು ಬ್ಯಾಂಕ್ : ಜಾನುವಾರುಗಳಿಗೆ ಮೇವಿನ ಅಭಾವ ತಲೆದೂರದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲೆಯ 11 ಗ್ರಾಮಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಗದಗ ತಾಲೂಕಿನ ಬಿಂಕದಕಟ್ಟಿ, ಕುರ್ತಕೋಟಿ, ಮುಳಗುಂದ, ಗಜೇಂದ್ರಗಡ ತಾಲೂಕಿನ ರಾಜೂರು, ಲಕ್ಷ್ಮೇಶ್ವರ, ಬಾಲೆಹೊಸೂರು, ಶಿಗ್ಲಿ, ಬಟ್ಟೂರು,ಅಡರಕಟ್ಟಿ, ಮುಂಡರಗಿ ತಾಲೂಕಿನ ಡಂಬಳ, ರೋಣ ತಾಲೂಕಿನ ಕೊತಬಾಳಗಳಲ್ಲಿ ಮೇವು ಬ್ಯಾಂಕು ತೆರೆಯಲಾಗಿದೆ.

ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮ, ನಗರ ಪ್ರದೇಶ: ಜಿಲ್ಲೆಯ ಒಟ್ಟು 76 ಗ್ರಾಮಗಳನ್ನು ಕುಡಿವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳಾಗಿವೆ. ಗದಗ ತಾಲೂಕಿನ 14 , ಗಜೇಂದ್ರಗಡ 4, ಲಕ್ಷ್ಮೇಶ್ವರ 8, ಮುಂಡರಗಿ 7, ನರಗುಂದ 18, ರೋಣ 17, ಶಿರಹಟ್ಟಿ 8 ಗ್ರಾಮಗಳು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ವಾರ್ಡುಗಳನ್ನು ಗುರುತಿಸಲಾಗಿದ್ದು, ಒಟ್ಟು 81 ವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾಗಿದೆ. ಬೆಟಗೇರಿ ನಗರಸಭೆಯ 21 ವಾರ್ಡುಗಳು, ಗಜೇಂದ್ರಗಡ ಪುರಸಭೆ- 14, ಲಕ್ಷ್ಮೇಶ್ವರ ಪುರಸಭೆಯ 5,ಮುಂಡರಗಿ ಪುರಸಭೆ11, ನರಗುಂದ ಪುರಸಭೆಯ 7, ರೋಣ ಪುರಸಭೆಯ 7, ಮುಳಗುಂದ-5, ನರೇಗಲ್ ಪಪಂ 5, ಶಿರಹಟ್ಟಿ ಪಪಂ 6 ವಾರ್ಡುಗಳಲ್ಲಿ ಮುಂದಿನ ದಿನಮಾನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಗುರುತಿಸಲಾಗಿದೆ.

ಅಂತರ್ಜಲ ಮಟ್ಟ: ಬರಗಾಲದಿಂದ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಅಧೋಗತಿಗೆ ಸಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಇನ್ನೂ ಅಧಿಕ ಆಗಬಹುದಾಗಿದೆ. ಗದಗ 9.84 ಮೀಟರ್, ಮುಂಡರಗಿ 7.12 ಮೀಟರ್, ಶಿರಹಟ್ಟಿ 13.58 ಮೀಟರ್, ಲಕ್ಷ್ಮೇಶ್ವರ 19.60 ಮೀಟರ್, ರೋಣ 13.07 ಮೀಟರ್, ಗಜೇಂದ್ರಗಡ 20.97 ಮೀಟರ್, ನರಗುಂದ 8.40 ಮೀಟರ್.