ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲಇಂಡಿಯಾ ಮೈತ್ರಿಕೂಟ ಮಾಡಿಕೊಂಡು ಈ ಬಾರಿ ಲೋಕಸಭೆ ಚುನಾವಣೆಗೆ ಉತ್ಸಾಹದಿಂದ ಸಜ್ಜಾಗಿದ್ದ ಕಾಂಗ್ರೆಸ್ ಸಾಮರ್ಥ್ಯ ಏನು ಎಂಬುದು ತಿಳಿದ ಕೂಡಲೇ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ದೂರ ಸರಿಯುತ್ತಿವೆ. ಆದರೂ ಕೇಂದ್ರದಲ್ಲಿ ಸರ್ಕಾರ ರಚಿಸಿ ಅಧಿಕಾರ ನಡೆಸುತ್ತೇವೆ ಎಂದು ಹುಚ್ಚು ಹೇಳಿಕೆ ನೀಡುತ್ತಿದ್ದಾರೆ ಎಂದು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
ತಾಲೂಕಿನ ದೊಡವಾಡದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದಿಂದ ಆಯೋಜಿಸಿದ್ದ ಲೋಕಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕೇವಲ 230 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಿರುವ ಕಾಂಗ್ರೆಸ್ನವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಕೇವಲ 35 ರಿಂದ 40 ಸ್ಥಾನ ಗೆಲ್ಲಲಿದೆ ಎಂದು ಸ್ವತಃ ಮೈತ್ರಿಕೂಟದ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಒಂದು ಸಮರ್ಥ ಪ್ರತಿಪಕ್ಷವಾಗುವಷ್ಟು ಸ್ಥಾನ ಗೆಲ್ಲುವ ಸಾಮರ್ಥ್ಯ ಸಹ ಇಲ್ಲ ಎಂದು ವ್ಯಂಗ್ಯವಾಡಿದರು.ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ. ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಬಿಜೆಪಿ ಮುಖಂಡ ನಿಂಗಪ್ಪ ಚೌಡಣ್ಣವರ ಮಾತನಾಡಿದರು. ಪ್ರಮುಖರಾದ ಗುರುಪಾದ ಕಳ್ಳಿ, ಎಫ್.ಎಸ್. ಸಿದ್ದನಗೌಡರ, ಗುರು ಮೆಟಗುಡ್ಡ, ವೀರೇಂದ್ರ ಸಂಗೊಳ್ಳಿ, ಮುದಕಪ್ಪ ಮಾಡಲಗಿ, ಸಂಗಯ್ಯ ದಾಭಿಮಠ, ಅಜ್ಜಪ್ಪ ಪಟಾತ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಇದ್ದರು. ಸಂತೋಷ ಚೌಡಣ್ಣವರ ಕಾರ್ಯಕ್ರಮ ನಿರೂಪಿಸಿದರು.
ದೇಶಾದ್ಯಂತ ಎನ್ಡಿಎ ಪರ ಅಲೆ: ಶೆಟ್ಟರ್ಬೈಲಹೊಂಗಲ: ದೇಶಾದ್ಯಂತ ಎನ್ಡಿಎ ಪರ ಅಲೆ ಇದ್ದು, ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗುವುದು ನಿಶ್ಚಿತ. ಜನತೆ ಬಿಜೆಪಿಗೆ ಆಶೀರ್ವದಿಸಬೇಕೆಂದು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಮನವಿ ಮಾಡಿದರು.
ಪಟ್ಟಣದ ವಕೀಲರ ಸಂಘಕ್ಕೆ ಮಂಗಳವಾರ ಭೇಟಿ ನೀಡಿ ವಕೀಲರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ವಕೀಲ ವೃತ್ತಿ ಗರಡಿ ಮನೆಯಾಗಿದ್ದು, ಆ ವೃತ್ತಿಯ ನೈಪುಣ್ಯತೆಯಿಂದ ರಾಜ್ಯದಲ್ಲಿ ದಾಖಲೆಯ 10 ವರ್ಷ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಬೆಳಗಾವಿ ಸಂಸದನಾಗಿ ಆಯ್ಕೆ ಮಾಡಿ, ನಿಮ್ಮೆಲ್ಲರ ಸೇವೆ ಮಾಡಲು ಆಶೀವರ್ದಿಸಬೇಕು ಎಂದು ಮನವಿ ಮಾಡಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವೆಂಕಿ ಮಾತನಾಡಿ, ನರೇಂದ್ರ ಮೋದಿ ಅವರ ಜನಪರ ಆಡಳಿತ, ವಿಶ್ವದಲ್ಲಿ ಭಾರತವನ್ನು ಅಗ್ರಸ್ಥಾನ ಕೊಂಡಯ್ಯದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರನ್ನು 3ನೇ ಬಾರಿ ಪ್ರಧಾನಿಯನ್ನಾಗಿಸಲು ಬಿಜೆಪಿಯನ್ನು ಬೆಂಬಲಿಸಬೇಕು. ಜಗದೀಶ ಶೆಟ್ಟರ್ ಅವರನ್ನು ಬಹುಮತದಿಂದ ಗೆಲ್ಲಿಸಿ ತರಬೇಕೆಂದು ಮನವಿ ಮಾಡಿದರು.ವಿವಿಧ ಗ್ರಾಮಗಳಿಗೆ ಭೇಟಿ: ಮತಕ್ಷೇತ್ರದ ಸುತಗಟ್ಟಿ, ಮುಗಬಸವ, ಏಣಗಿ, ಉಡಕೇರಿ, ಬೂದಿಹಾಳ ಗ್ರಾಮಗಳಿಗೆ ತೆರಳಿ ಭರ್ಜರಿ ಪ್ರಚಾರ ನಡೆಸಿ, ಮತ ಯಾಚಿಸಿದರು.