ಸಾರಾಂಶ
ಉಡುಪಿಯ ಶ್ರೀ ಉತ್ತರಾದಿ ಮಠದಲ್ಲಿ ಶ್ರೀಮನ್ಯಾಯಸುಧಾ ಗ್ರಂಥದ ಪಾರಾಯಣ ಕಾರ್ಯಕ್ರಮ ನಡೆಯಿತು. ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ ಆನಂದತೀರ್ಥಾಚಾರ್ ಪಗಡಾಲ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಮಧ್ವಾಚಾರ್ಯರ ಭವ್ಯ ಪರಂಪರೆಯಲ್ಲಿ ಬೆಳಗಿದ ಇಂದ್ರಾಂಶ ಸಂಭೂತರಾದ ಶ್ರೀಜಯತೀರ್ಥರು ಬ್ರಹ್ಮಸೂತ್ರ - ಅನುವ್ಯಾಖ್ಯಾನಗಳಿಗೆ ಶ್ರೀಮನ್ಯಾಯಸುಧಾ ಎನ್ನುವ ಉತ್ಕೃಷ್ಟ ಗ್ರಂಥವನ್ನು ರಚಿಸಿದರು. ಮಾಧ್ವ ಪ್ರಪಂಚದಲ್ಲಿ ಶ್ರೀಮನ್ಯಾಯಸುಧಾ ಗ್ರಂಥವನ್ನು ಅಧ್ಯಯನ ಮಾಡಿದವರಿಗೆ ಸರ್ವಶ್ರೇಷ್ಠ ಮನ್ನಣೆ ನೀಡಲಾಗುತ್ತಿದೆ. ಭಗವಂತನ ಸರ್ವೋತ್ತಮತ್ವವನ್ನು ಪ್ರತಿಪಾದಿಸುವ ಇಂಥಹ ಮಹೋನ್ನತ ಗ್ರಂಥವನ್ನು ಪಾರಾಯಣ ಮಾಡುವುದರಿಂದ ವಿಶ್ವಕ್ಕೆ ಸಕಲವಿಧವಾದ ಸನ್ಮಂಗಳವಾಗುವುದು ಎಂದು ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ ಆನಂದತೀರ್ಥಾಚಾರ್ ಪಗಡಾಲ್ ಇವರು ತಿಳಿಸಿದರು.ಅವರು ಶ್ರೀಮನ್ಯಾಯಸುಧಾ ಗ್ರಂಥದ ಪಾರಾಯಣ ಕಾರ್ಯಕ್ರಮವನ್ನು ಉಡುಪಿಯ ಶ್ರೀ ಉತ್ತರಾದಿ ಮಠದಲ್ಲಿ ಉದ್ಘಾಟಿಸಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಉತ್ತರಾದಿ ಮಠದ ಅಧಿಕಾರಿಗಳಾದ ಪಂ. ಪ್ರಕಾಶಾಚಾರ್, ಪಂ. ಆನಂದತೀರ್ಥಾಚಾರ್ ಮಠದ, ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ. ಗೋಪಾಲಾಚಾರ್, ತತ್ವಸಂಶೋಧನ ಸಂಸತ್ತಿನ ನಿರ್ದೇಶಕರ ಡಾ. ವಂಶಿ ಕೃಷ್ಣಾಚಾರ್, ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ವಿಭಾಗದ ಮುಖ್ಯಸ್ಥ ಪಂ. ಷಣ್ಮುಖ ಹೆಬ್ಬಾರ್ ಭಾಗವಹಿಸಿದರು. ಈ ಸಂದರ್ಭ ಗುಲ್ಬರ್ಗ ಪ್ರಾಂತದ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಸಂಯೋಜಕ ಡಾ. ಶ್ರೀನಿವಾಸ ಪದಕಿ ಇವರು ಜೊತೆಗಿದ್ದರು.ಒಟ್ಟು ಐದು ದಿನಗಳ ಕಾಲ ಈ ಪಾರಾಯಣ ನಡೆಯುತ್ತದೆ. ಶ್ರೀಮನ್ಯಾಯಸುಧಾ ಗ್ರಂಥವನ್ನು ಪ್ರತಿವರ್ಷವೂ ಪಾರಾಯಣ ಮಾಡಿಸುವ ವಿಶೇಷ ಯೋಜನೆಯನ್ನು ದಾಸಸಾಹಿತ್ಯ ಪ್ರಾಜೆಕ್ಟ್ ನ ವಿಶೇಷಾಧಿಕಾರಿಗಳಾದ ಪಂ. ಆನಂದತೀರ್ಥಾಚಾರ್ ಪಗಡಾಲ್ ಇವರ ಪರಿಶ್ರಮದ ಫಲವಾಗಿ ಕಳೆದ ಅನೇಕ ವರ್ಷಗಳಿಂದ ತಿರುಮಲ ತಿರುಪತಿ ದೇವಸ್ಥಾನಗಳ ದಾಸಸಾಹಿತ್ಯ ಪ್ರಾಜೆಕ್ಟ್ ನಿಂದ ಆಯೋಜಿಸಲಾಗುತ್ತಿದೆ. ಪ್ರತಿವರ್ಷವೂ ಏಕಕಾಲದಲ್ಲಿ ತಿರುಮಲದ ಶ್ರೀನಿವಾಸನ ದಿವ್ಯ ಸನ್ನಿಧಿಯಲ್ಲಿ, ಮಳಖೇಡದ ಶ್ರೀ ಜಯತೀರ್ಥರ ಮೂಲವೃಂದಾವನದ ದಿವ್ಯ ಸನ್ನಿಧಿಯಲ್ಲಿ, ಶ್ರೀಜಯತೀರ್ಥರ ಮೃತ್ತಿಕಾವೃಂದಾವನದ ಸನ್ನಿಧಾನದ ಉಡುಪಿಯ ಶ್ರೀಮದುತ್ತರಾದಿ ಮಠದಲ್ಲಿ ಆಯೋಜಿಸಲಾಗುತ್ತಿದೆ.