ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರೆಡ್‌ಕ್ರಾಸ್ ಚಟುವಟಿಕೆಗಳು ಮಾನವೀಯತೆಯ ತತ್ವಗಳನ್ನು ಎತ್ತಿ ಹಿಡಿಯುತ್ತವೆ. ರಕ್ತದಾನ ಮಾಡುವುದೇ ರೆಡ್‌ಕ್ರಾಸ್‌ನ ಹೆಮ್ಮೆಯ ಕೊಡುಗೆ ಎಂದು ಕುವೆಂಪು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ.ಆರ್.ತಿಮ್ಮರಾಯಪ್ಪ ಹೇಳಿದರು. ನಗರದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬುಧವಾರ ಕುವೆಂಪು ವಿವಿ. ಸಹ್ಯಾದ್ರಿ ಕಲಾ ಕಾಲೇಜು, ಯುವ ರೆಡ್‌ಕ್ರಾಸ್ ಘಟಕ, ಶಂಕರಘಟ್ಟ ರೋಟರಿ ರಕ್ತನಿಧಿ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಯುದ್ಧದ ಗಾಯಾಳುಗಳಿಗೆ ಸಹಾಯ ಮಾಡಲು 1863ರಲ್ಲಿ ಸ್ಥಾಪನೆಯಾದ ರೆಡ್‌ಕ್ರಾಸ್ ಸಂಸ್ಥೆ ಇಂದು ವಿಶ್ವದೆಲ್ಲೆಡೆ ತನ್ನ ಶಾಖೆಗಳನ್ನು ಹೊಂದಿದೆ. ಭಾರತದಲ್ಲೂ ಕೂಡ ಸಾವಿರಾರು ಶಾಖೆಗಳಿದ್ದು, ಕಾಲೇಜುಗಳಲ್ಲಿ ಘಟಕಗಳಿರುವುದು ಹೆಮ್ಮೆಯ ವಿಷಯವಾಗಿದೆ. ರೆಡ್‌ಕ್ರಾಸ್ ಸಂಸ್ಥೆಗೆ 4ಬಾರಿ ನೋಬಲ್ ಪಾರಿತೋಷಕ ಬಂದಿರುವುದು ಈ ಸಂಸ್ಥೆಯ ಮಹತ್ವವನ್ನು ತಿಳಿಸುತ್ತದೆ ಎಂದರು.

ರಕ್ತಕ್ಕೆ ಯಾವುದೇ ಜಾತಿ, ಬಣ್ಣ, ಧರ್ಮ, ದೇಶದ ಹಂಗಿಲ್ಲ. ರಕ್ತದಾನವೇ ಇಂದು ಪ್ರಮುಖ ದಾನವಾಗಿದೆ. ರಕ್ತವನ್ನು ತಯಾರಿಸಲು ಬರುವುದಿಲ್ಲ. ಆರೋಗ್ಯವಂತರು ದಾನ ಮಾಡಿದಾಗ ಮಾತ್ರ ಇದರ ಸಂಗ್ರಹ ಸಾಧ್ಯ. ಮುಖ್ಯವಾಗಿ ನಮ್ಮ ಯುವ ಜನಾಂಗ ರಕ್ತದಾನ ಮಾಡಬೇಕಾಗಿದೆ. ರಕ್ತದಾನದ ಬಗ್ಗೆ ಇರುವ ಮೂಡ ನಂಬಿಕೆಗಳು ಕೊನೆಯಾಗಬೇಕು. ಒಬ್ಬರ ರಕ್ತದಾನದಿಂದ ಮೂರು-ನಾಲ್ಕು ಜನರ ಜೀವ ಉಳಿಸಲು ಸಾಧ್ಯ ಎಂದರು.

ರೋಟರಿ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ.ಬಿ.ಆನಂದ್ ಮಾತನಾಡಿ, ರಕ್ತದಾನವೇ ಶ್ರೇಷ್ಠ, ರಕ್ತದಾನ ಮಾಡಲು ಯುವಕರಲ್ಲಿ ಆರೋಗ್ಯ ಮುಖ್ಯ. ಆರೋಗ್ಯವಂತರು ಮಾತ್ರ ರಕ್ತದಾನ ಮಾಡಲು ಸಾಧ್ಯ. 18ರಿಂದ 60ವರ್ಷದೊಳಗಿನ ಆರೋಗ್ಯವಂತರು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ಕನಿಷ್ಠ 50 ಕೆಜಿ ಇರಬೇಕು. ಮಹಿಳೆಯರು ತಮ್ಮ ಹಿಮೋಗ್ಲೋಬಿನ್ ಮಟ್ಟವನ್ನು 12ಕ್ಕೆ ಇರುವಂತೆ ನೋಡಿಕೊಳ್ಳಬೇಕು ಹಾಗಾಗಿ ಯುವತಿಯರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಸಿರಾಜ್ ಅಹ್ಮದ್, ಇಂದು ನಾವು ಕಲುಷಿತ ವಾತಾವರಣದಲ್ಲಿದ್ದೇವೆ. ಗಾಳಿಯಿಂದ ನೀರನ್ನು ನೀರನ್ನು ರಕ್ತದಿಂದ ತೊಳೆಯಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಚಟುವಟಿಕೆಗಳು ನಮ್ಮಲ್ಲಿ ಮಾನವೀಯತೆಯನ್ನು ಬೆಳೆಸುತ್ತವೆ. ಸೇವೆ ಮಾಡುವ ಗುಣ ನಮ್ಮ ರಕ್ತದಲ್ಲಿಯೇ ಬರಬೇಕು. ನಾನು ಕೂಡ ಇಂದು ರಕ್ತದಾನ ಮಾಡುವೆ ಎಂದರು.


ಕಾರ್ಯಕ್ರಮದಲ್ಲಿ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಎ.ಶ್ವೇತಾಶ್ರೀ, ಪ್ರೊ.ಡಾ.ಪ್ರಹ್ಲಾದಪ್ಪ, ಡಾ.ಪ್ರಸನ್ನಕುಮಾರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ನೋಡೆಲ್ ಅಧಿಕಾರಿ ಡಾ.ರವೀಂದ್ರೆಗೌಡ, ಡಾ. ಮಹದೇವಸ್ವಾಮಿ, ಡಾ.ಎಚ್.ಪಿ. ಮಂಜುನಾಥ್ ಸೇರಿದಂತೆ ಹಲವರಿದ್ದರು.

ಡಾ.ಮಹಾದೇವ ಸ್ವಾಮಿ 32ನೇ ಬಾರಿಗೆ ರಕ್ತದಾನ ಮಾಡಿದರು. ಇವರ ಜೊತೆಗೆ ಪ್ರೊ.ಸಿರಾಜ್ ಅಹ್ಮದ್ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗದವರು, ಸಿಬ್ಬಂದಿ, ವಿದ್ಯಾರ್ಥಿಗಳು, ರಕ್ತದಾನ ಮಾಡಿದರು. ಪ್ರಣತಿ ಪ್ರಾರ್ಥಿಸಿದರು, ಪವನ್‌ಕುಮಾರ್, ಸ್ವಾಗತಿಸಿದರು. ಡಿ.ವೆಂಕಟೇಶ್ ವಂದಿಸಿದರು.