ಸಾರಾಂಶ
ಯಲ್ಲಾಪುರ: ಪ್ರಕೃತಿಯ ಸಂಪತ್ತಾದ ಮರ- ಗಿಡಗಳನ್ನು ಸಂರಕ್ಷಿಸಿದರೆ ಅವು ನಮ್ಮನ್ನು ಕಾಯುತ್ತವೆ. ಇತ್ತೀಚೆಗೆ ಪರಿಸರ ಸಂಪತ್ತು ಅರಣ್ಯಚೋರರ ದುರಾಸೆಯಿಂದ ಕಣ್ಮರೆಯಾಗುತ್ತಿದ್ದು, ಪರ್ಯಾಯ ಅರಣ್ಯ ನಿರ್ಮಾಣದ ಕನಸು ನನಸಾಗಿಯೇ ಉಳಿದುಕೊಂಡಿದೆ ಎಂದು ಉಚಗೇರಿಯ ಉಪವಲಯಾರಣ್ಯಾಧಿಕಾರಿ ಜಗದೀಶ ಪಾಲಕನವರ ತಿಳಿಸಿದರು.ತಾಲೂಕಿನ ಮಜ್ಜಿಗೆಹಳ್ಳದ ಅಂಗನವಾಡಿಯ ಆವಾರದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಬ್ಬರೂ ವರ್ಷಕ್ಕೊಂದಾದರೂ ಗಿಡಗಳನ್ನು ನೆಟ್ಟು ಬೆಳೆಸಬೇಕು. ಅಲ್ಲದೇ, ದಿನವೂ ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿದರೆ ಅದು ಪ್ರಕೃತಿಯ ಸುರಕ್ಷಿತತೆಗೆ ಕೊಡುಗೆ ನೀಡಿದಂತಾಗುತ್ತದೆ. ಪ್ರತಿಯೊಬ್ಬರೂ ಮಕ್ಕಳಿಗೆ ಪರಿಸರ ಪ್ರಜ್ಞೆ ಕಲಿಸಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದರಗಿ ಗ್ರಾಪಂ ಸದಸ್ಯೆ ನಿರ್ಮಲಾ ನಾಯ್ಕ ಮಾತನಾಡಿ, ಅಂಗನವಾಡಿಯ ಬೆಳವಣಿಗೆ ನಮಗೆ ಖುಷಿ ನೀಡಿದೆ. ಇದು ಈ ಪ್ರದೇಶದ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಕಾರಣವಾಗಿದೆ ಎಂದರು.ಮತ್ತೋರ್ವ ಗ್ರಾಪಂ ಸದಸ್ಯ ಗಣೇಶ ಹೆಗಡೆ ಮಾತನಾಡಿ, ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯೂ ಆಗಿದ್ದು, ಈ ಮಾತಿಗೆ ಎಲ್ಲರೂ ಬದ್ಧರಾಗಿರಬೇಕು. ಸಾರ್ವಜನಿಕರ ಸಹಭಾಗಿತ್ವ ಮತ್ತು ಇಲಾಖೆಯ ಸಹಕಾರದೊಂದಿಗೆ ವನಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅಂಗನವಾಡಿಯ ಬೇಡಿಕೆಗಳನ್ನು ಈಡೇರಿಸಲು ಗ್ರಾಪಂ ಸದಾ ಸಿದ್ಧವಿದೆ ಎಂದರು. ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ಅಧ್ಯಕ್ಷತೆ ವಹಿಸಿದ್ದರು. ಬಾಲವಿಕಾಸ ಸಲಹಾ ಸಮಿತಿ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ ಸಾಂದರ್ಭಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಂಗನವಾಡಿ ಮೇಲ್ವಿಚಾರಕಿ ಸವಿತಾ ಪೂಜಾರಿ ಸ್ವಾಗತಿಸಿದರು. ಚಂದನ ಭಟ್ಟ ನಿರ್ವಹಿಸಿದರು. ವಿದ್ಯಾ ದೇವಡಿಗ ವಂದಿಸಿದರು.