ಸಾರಾಂಶ
ಚಿಕ್ಕಮಗಳೂರು : ಕಳೆದ ಡಿ. 22 ರಂದು ಬಾಬಾಬುಡನ್ಗಿರಿಯಲ್ಲಿ ಟಿಪ್ಪು ಸುಲ್ತಾನ್ ಸಂಘಟನೆಯ ಆಶ್ರಯದಲ್ಲಿ ಗ್ಯಾರವಿ ಹಬ್ಬದ ಆಚರಣೆ ನಡೆಯಿತು. ಇದು, ವಿವಾದದ ಸ್ವರೂಪ ಪಡೆದು ಕೂಡಲೇ ತಣ್ಣಾಗಾಯಿತು. ಇದೀಗ ಡಿ.29 ರಂದು ಇದೇ ಸ್ಥಳದಲ್ಲಿ ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥರು ರೋಟಿ ಬಾಜಿ ಫಾತೇಹ (ರೊಟ್ಟಿ, ತರಕಾರಿ ಬೇಯಿಸಿ ಪೂಜೆ ಸಲ್ಲಿಸುವುದು) ಸಲ್ಲಿಸಲು ಗುಹೆಯತ್ತ ತೆರಳುವಾಗ ಮುಜರಾಯಿ ಇಲಾಖೆಯವರು ಅವಕಾಶ ನೀಡಲು ನಿರಾಕರಿಸಿದೆ.
ಇದರಿಂದ ವಿಶ್ವಹಿಂದೂ ಪರಿಷತ್ ಹಾಗೂ ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥರ ನಡುವೆ ವಾದ ವಿವಾದಗಳು ಆರಂಭಗೊಂಡಿವೆ. ಉಭಯ ಸಂಘಟನೆಯವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಪರಸ್ಪರ ವಾಕ್ ಸಮರ ನಡೆಸಿದ್ದಾರೆ.
ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೈಯದ್ ಫಕ್ರುದ್ದೀನ್ ಶಾಖಾದ್ರಿ (ಅಜ್ಮತ್ ಪಾಶಾ) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.29 ರಂದು ಬಾಬಾಬುಡನ್ ದರ್ಗಾದಲ್ಲಿ ಪ್ರತಿ ವರ್ಷದಂತೆ ರೋಟಿ ಬಾಜಿ ಫಾತೇಹ ಮಾಡಲು ಹೋಗಿದ್ದಾಗ ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮನ್ನು ತಡೆಯುವ ಮೂಲಕ ನಮ್ಮ ಧಾರ್ಮಿಕ ಹಕ್ಕನ್ನು ಮೊಟಕುಗೊಳಿಸಿದ್ದಾರೆ. ಅಧಿಕಾರಿಗಳು ನಡೆದುಕೊಂಡಿರುವ ರೀತಿ ನಮ್ಮ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದರು.
ದರ್ಗಾದಲ್ಲಿ ಫಾತೇಹಗೆ ಹೋಗಬೇಕೆಂದರೆ ಹಿಂದೂ ಧರ್ಮ ಪ್ರಕಾರ ಹಣ್ಣು ಕಾಯಿ ತಂದ್ರೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳುವ ಮೂಲಕ ನಮ್ಮ ಮೊಹಮ್ಮದನ್ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಇಸ್ಲಾಂ ಧರ್ಮದ ನಂಬಿಕೆಗೆ ತಡೆ ಹಾಕಿ ಹಾಗೂ ನಮ್ಮ ಸಮುದಾಯದ ಪ್ರವಾದಿ ಮೊಹಮ್ಮದ್ ಅವರ ವಂಶಸ್ಥರಾದ ಶಾಖಾದ್ರಿ ಹಾಗೂ ಗುರುಗಳಾದ ತಮ್ಮನ್ನು ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಕಾನೂನು ಕ್ರಮ ಆಗಬೇಕು: ವಿಎಚ್ಪಿ
ದತ್ತಪೀಠಕ್ಕೆ ಕೆಲವರು ಪದೇ ಪದೇ ಹೋಗಿ ಅಶಾಂತಿ ಸೃಷ್ಟಿ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಢಿಯಲ್ಲಿ ಮಾತನಾಡಿ, ಪೀಠಕ್ಕೆ ಆಗಮಿಸಿದ ಕೆಲವು ಸಂಘಟನೆಯ ಮುಸ್ಲಿಮರು ರೋಟಿ ಬಾಜಿ ತಯಾರಿಸಿ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತ ದತ್ತಪೀಠದ ಗುಹೆ ಒಳಗೆ ಹೋಗಲು ಪ್ರಯತ್ನಿಸಿ ಮಾಮಾಜುಗ್ನಿಯವರಿಗೆ ಪಾತೇಹ ಪೂಜೆ ಸಲ್ಲಿಸಲು ಮುಂದಾಗಿದ್ದರು ಎಂದರು.
ಈ ವ್ಯಕ್ತಿಗಳು ತಮ್ಮದೇ ಇಚ್ಛಾನುಸಾರ ಪೂಜೆ ಮಾಡುವುದಾದಲ್ಲಿ ನಾಗೇನಹಳ್ಳಿಯ ಬಾಬಾ ಬುಡನ್ ದರ್ಗಾಕ್ಕೆ ಹೋಗಿ ಮಾಡಬಹುದು. ಇದಕ್ಕೆ ನಮ್ಮ ಆಕ್ಷೇಪವಿರುವುದಿಲ್ಲ. ಈ ವ್ಯಕ್ತಿಗಳು ಮುಜರಾಯಿ ಅಧಿಕಾರಿಗಳ ಜೂತೆ ಏರು ದನಿಯಲ್ಲಿ ಮಾತನಾಡಿದ್ದು ಇದು ತಪ್ಪು, ಈ ವ್ಯಕ್ತಿಗಳು ದತ್ತಪೀಠ ಎಲ್ಲಿದೆ ಹಾಗೂ ಬಾಬಾ ಬುಡನ್ ದರ್ಗಾ ಎಲ್ಲಿದೆ ಎಂಬುದನ್ನು ತಾಲ್ಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿಗಳಲ್ಲಿ ಹೋಗಿ ಕೇಳಿದರೆ ಅದರ ಬಗ್ಗೆ ಸೂಕ್ತ ಮಾಹಿತಿ ಮುಕ್ತವಾಗಿ ಪಡೆಯಬಹುದು ಎಂದು ಹೇಳಿದರು.
ನಮ್ಮ ದರ್ಗಾ ಸಂಸ್ಥೆ ಆಚರಣೆಗಳನ್ನು ನಿರ್ವಹಿಸಲು ಹಿಂದಿನಂತೆ ಶಾಖಾದ್ರಿಗಳ ಸಮಿತಿಯನ್ನು ರಚನೆ ಮಾಡಬೇಕು. ಇಲ್ಲವಾದರೆ ಕೋರ್ಟಿನ ತೀರ್ಮಾನ ಬರುವವರೆಗೆ ಜಾತ್ಯಾತೀತ ಕಾರ್ಯನಿರ್ವಹಕ ಅಧಿಕಾರಿ ಮತ್ತು ಸಮಿತಿಯನ್ನ ತಕ್ಷಣ ರಚನೆ ಮಾಡಬೇಕು.
ಅಜ್ಮತ್ ಪಾಶಾ, ಪ್ರಧಾನ ಕಾರ್ಯದರ್ಶಿ, ಸೈಯದ್ ಬುಡೇನ್ ಶಾಖಾದ್ರಿ ವಂಶಸ್ಥರು.
ತಮ್ಮದೇಯಾದ ಇಚ್ಚಾನುಸಾರ ಪೂಜೆ ಮಾಡುವುದಾದಲ್ಲಿ ನಾಗೇನಹಳ್ಳಿಯ ಬಾಬಾ ಬುಡನ್ ದರ್ಗಾಕ್ಕೆ ಹೋಗಿ ಮಾಡಬಹುದು. ಇದಕ್ಕೆ ನಮ್ಮ ಆಕ್ಷೇಪ ಇರುವುದಿಲ್ಲ. ದತ್ತಪೀಠಕ್ಕೆ ಪದೇ ಪದೇ ಹೋಗಿ ಗೊಂದಲ ಸೃಷ್ಟಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.
ಟಿ. ರಂಗನಾಥ್, ಜಿಲ್ಲಾ ಕಾರ್ಯದರ್ಶಿ, ವಿಎಚ್ಪಿ