ಕನ್ನಡಪ್ರಭ ವಾರ್ತೆ ತುಮಕೂರುಎನ್ ಪಿಎಸ್ ಸಂಚಯ್ ಯೋಜನೆಯ ಮೂಲಕ ನಾಗರಿಕರು ತಮ್ಮ ಆದಾಯಕ್ಕೆ ಅನುಗುಣವಾಗಿ ನಿಯಮಿತವಾಗಿ ಉಳಿತಾಯ ಮಾಡಿ, ನಿವೃತ್ತಿಯ ನಂತರ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು. ಹೆಚ್ಚಿನ ಜನರು ಈ ಯೋಜನೆಗೆ ನೋಂದಾಯಿಸಿಕೊಳ್ಳುವಂತೆ ಆರ್ಥಿಕ ತಜ್ಞ ಶುಭಂ ಕಂಡಲ್ಮಾಲ್ ಮನವಿ ಮಾಡಿದ್ದಾರೆತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶನದಂತೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಎನ್‌ಪಿಎಸ್ ಸಂಚಯ್ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದ್ದು ಈ ಯೋಜನೆಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಸ್ವಯಂ ಉದ್ಯೋಗಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಪಿಂಚಣಿ ಯೋಜನೆಯಾಗಿದೆ ಎಂದರು.ಪಿಎಫ್‌ಆರ್‌ಡಿಎ ಸಚಿನ್ ಪ್ರಾತಿ ಅವರು ಪ್ರಾತ್ಯಕ್ಷಿಕೆ ಮೂಲಕ ಎನ್‌ಪಿಎಸ್ ಸಂಚಯ್ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಎಸ್‌ಎಲ್‌ಬಿಸಿ ಡಿವಿಜನಲ್ ಮ್ಯಾನೇಜರ್ ಆನಂದ ನಾಯಕ ಯೋಜನೆ ಕುರಿತು ವಿವರವಾದ ಮಾಹಿತಿ ನೀಡಿ ಕನಿಷ್ಠ ಮೊತ್ತದ ಕೊಡುಗೆಯೊಂದಿಗೆ ಯಾವುದೇ ಅರ್ಹ ಭಾರತೀಯ ನಾಗರಿಕರು ಈ ಯೋಜನೆಗೆ ನೋಂದಾಯಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿಕೊಳ್ಳಬಹುದು. ಈ ಯೋಜನೆ ಎಲ್ಲರಿಗೂ ಸಾಮಾಜಿಕ ಭದ್ರತೆ ಎಂಬ ಗುರಿ ಸಾಧಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಯೋಜನೆಯ ಸದುಪಯೋಗವನ್ನು ಎಲ್ಲರೂ ಕೂಡ ಪಡೆದುಕೊಂಡು ತಮ್ಮ ನಿವೃತ್ತಿಯ ಸಮಯದಲ್ಲಿ ಆರ್ಥಿಕ ಸುಭದ್ರತೆಗಾಗಿ ಯಾರನ್ನೂ ಅವಲಂಬಿಸದೆ ಸ್ವಾವಲಂಬಿಗಳಾಗಿ ಬದುಕಲು ಕರೆಕೊಟ್ಟರು.

ಎಸ್‌ಎಲ್‌ಬಿಸಿ ಕೆನರಾ ಬ್ಯಾಂಕ್ ಕರ್ನಾಟಕದ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ಸಂಚಯ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಸರಳ ಮತ್ತು ಸುಲಭ ರೂಪವಾಗಿದ್ದು, ನಿವೃತ್ತಿಯ ನಂತರ ನಿಯಮಿತ ಆದಾಯದ ಮೂಲವಿಲ್ಲದ ನಾಗರಿಕರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಗಂಗೇಶ್ ಗುಂಜನ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ರೂಪೇಶ್ ಕುಮಾರ್ ಕಾರ್ಯ ಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬ ನಾಗರಿಕರು ಸದರಿ ಯೋಜನೆಯ ಮಹತ್ವ ಅರಿತು ಸಂಪೂರ್ಣ ಪ್ರಯೋಜನ ಪಡೆದು ಕೊಂಡು ವೃದ್ಧಾಪ್ಯದಲ್ಲಿ ಆರ್ಥಿಕವಾಗಿ ಸಬಲರಾಗಬೇಕೆಂದು ಮನವಿ ಮಾಡಿದರು. ನಬಾರ್ಡ್ ಅಧಿಕಾರಿ ಮೋಹನ್ ಸಾಯಿ ಗಣೇಶ್ ಮಾತನಾಡಿ, ಹೆಚ್ಚಿನ ಅಸಂಘಟಿತ ವಲಯದ ಕಾರ್ಮಿಕರು, ಕುಶಲ ಕರ್ಮಿಗಳು ಮುಖ್ಯವಾಗಿ ರೈತರು, ಮಹಿಳೆಯರು, ಸ್ವಸಹಾಯ ಸಂಘದ ಸದಸ್ಯರು, ಸಣ್ಣ ಉದ್ದಿಮೆದಾರರು ಇದರ ಪ್ರಯೋಜನವನ್ನು ಪಡೆಯಬೇಕೆಂದು ತಿಳಿಸಿದರು. ತುಮಕೂರು ಜಿಲ್ಲೆಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚೈತನ್ಯ ಕಂಚಿಬೈಲ್ ಮಾತನಾಡಿ, ಜಿಲ್ಲೆಯಾದ್ಯಂತ ತಾಲೂಕು ಮಟ್ಟದಲ್ಲಿ ಎಲ್ಲಾ ಬ್ಯಾಂಕಿನ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಯೋಜನೆಯನ್ನು ವಿಸ್ತರಿಸಿ ಸೌಲಭ್ಯವನ್ನು ಎಲ್ಲರಿಗೂ ತಲುಪಿಸಬೇಕೆಂದು ಮನವಿ ಮಾಡಿದರು. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ವಾದಿರಾಜ್ ನಿರೂಪಿಸಿದರು. ಕಾರ್ಯಾಕ್ರಮದಲ್ಲಿ ವಿವಿಧ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.