ಸಾರಾಂಶ
ಕೆರೆ ಜಾಗದಲ್ಲಿನ ಕೊಳಗೇರಿ ಜನರಿಗೆ ಪುನರ್ವಸತಿ: ತುಷಾರ್ ಗಿರಿನಾಥ್
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಲ ಕೆರೆ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿರುವ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ ಕಾರಣಕ್ಕಾಗಿ ಬಿಬಿಎಂಪಿ ಅವರಿಗೆ ಬದಲಿ ನಿವೇಶನ ಅಥವಾ ಪುನರ್ವಸತಿ ಕಲ್ಪಿಸಿ ಒತ್ತುವರಿ ತೆರವು ಕಾರ್ಯಾಚರಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಗಂಗಶೆಟ್ಟಿ ಕೆರೆ, ಕಾಚರಕನಹಳ್ಳಿ ಕೆರೆ ಸೇರಿದಂತೆ ಕೆಲವು ಕೆರೆಗಳನ್ನು ಒತ್ತುವರಿ ಮಾಡಿ ಅವುಗಳಲ್ಲಿ ಕೊಳಗೇರಿ ನಿರ್ಮಿಸಲಾಗಿದೆ. ಅಲ್ಲದೆ, ಅಲ್ಲಿನ ನಿವಾಸಿಗಳಿಗೆ ಈ ಹಿಂದೆ ಬಿಬಿಎಂಪಿಯಿಂದಲೇ ಹಕ್ಕುಪತ್ರ ವಿತರಿಸಲಾಗಿದೆ. ಅಲ್ಲದೆ, ಕೆಲವೆಡೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕೊಳಗೇರಿ ಎಂದು ಘೋಷಿಸಲಾಗಿದೆ. ಹೀಗಾಗಿ ಅವರಿಗೆ ಪುನರ್ವಸತಿ ಮಾಡಿದ ನಂತರವಷ್ಟೇ ಒತ್ತುವರಿ ತೆರವು ಮಾಡಬೇಕಾಗಿದೆ ಎಂದರು.
ಕೆರೆ ಒತ್ತುವರಿ ತೆರವು ಕುರಿತಂತೆ ಹೈಕೋರ್ಟ್ ಹಲವು ಸೂಚನೆ ನೀಡಿದೆ. ಅದರಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದೆ. ಅದರ ಜತೆಗೆ ಕೆಲ ಕೆರೆಗಳ ಜಾಗದಲ್ಲಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿರುವ ಕೊಳಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವ ಕುರಿತು ನ್ಯಾಯಾಲಯದ ಆದೇಶವಿದೆ. ಅದರ ಜತೆಗೆ ಮಾನವೀಯತೆ ದೃಷ್ಟಿಯಿಂದಾಗಿ ಮತ್ತು ಪರಿಸರ ಸಂರಕ್ಷಣೆಗಾಗಿ ಒತ್ತುವರಿ ಜಾಗದಲ್ಲಿನ ನಿವಾಸಿಗಳಿಗೆ ಬದಲಿ ವ್ಯವಸ್ಥೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.