ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕುಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಬೆಂಗಳೂರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಮೀನಾಕ್ಷಿ ಘಾಟ್. ವ್ಯವಸ್ಥಾಪಕರಾದ ವಿಜಯಶ್ರೀ ಸಮ್ಮುಖ ಇತ್ತೀಚೆಗೆ ಸಭೆ ನಡೆಸಲಾಯಿತು.

- ಬೆಂಗಳೂರಿನ ಆರ್‌ಬಿಐ ಸಭಾಂಗಣದಲ್ಲಿ ರೈತ ಸಂಘಟನೆಗಳು, ಅಧಿಕಾರಿಗಳ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರ ಹಣಕಾಸಿನ ನಿರ್ವಹಣೆ ಬಗ್ಗೆ ಬ್ಯಾಂಕುಗಳಲ್ಲಿ, ಹಣಕಾಸು ಸಂಸ್ಥೆಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಬೆಂಗಳೂರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಮೀನಾಕ್ಷಿ ಘಾಟ್. ವ್ಯವಸ್ಥಾಪಕರಾದ ವಿಜಯಶ್ರೀ ಸಮ್ಮುಖ ಇತ್ತೀಚೆಗೆ ಸಭೆ ನಡೆಸಲಾಯಿತು.

ರೈತ ಮುಖಂಡ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಮಾತನಾಡಿ, ಸಂಕಷ್ಟದ ಕಾಲದಲ್ಲಿ ಕೃಷಿ ಚಟುವಟಿಕೆ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಮುಂಜಿ, ಆಸ್ಪತ್ರೆ ವೆಚ್ಚ ಮುಂತಾದ ತುರ್ತು ಅಗತ್ಯಗಳಿಗಾಗಿ ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಟ್ಟು ಸಾಲ ಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದು ಖಾಸಗಿ ಫೈನಾನ್ಸ್‌ಗಳು ಹಾಗೂ ಮನಿಲೆಂಡರ್ಸ್‌ಗೆ ಅನುಕೂಲ ಕಲ್ಪಿಸಲು. ಏಪ್ರಿಲ್ 1ರಿಂದ ಜಾರಿ ತಂದಿರುವ ರಿಸರ್ವ್ ಬ್ಯಾಂಕ್ ನಿಯಮ ಪಾಲನೆಯಿಂದ ಬ್ಯಾಂಕುಗಳು ರೈತರನ್ನ ಸಂಕಷ್ಟಕ್ಕೆ ಈಡುಮಾಡಿದೆ ಎಂದು ಹೇಳಿದರು.

ಬ್ಯಾಂಕುಗಳಲ್ಲಿ ಚಿನ್ನ ಗಿರವಿ ಇಡುವ ವ್ಯಕ್ತಿಯ ಸಿಬಿಲ್ ಸ್ಕೋರ್ ತಾಳೆ ಹಾಕುತ್ತಾರೆ. ಆದಾಯ ಪತ್ರ, ಪ್ಯಾನ್ ಕಾರ್ಡ್ ಬೇಕು ಎನ್ನುತ್ತಾರೆ. ಇಷ್ಟು ಕಠಿಣ ನಿಯಮಗಳನ್ನು ಜಾರಿಗೆ ತಂದಿರುವುದರಿಂದ ರೈತರಿಗೆ ಆಪತ್ಕಾಲದಲ್ಲಿ ಚಿನ್ನ ಗಿರವಿಯಿಟ್ಟು ಸಾಲದ ಹಣ ಪಡೆಯಲು ಕಷ್ಟವಾಗುತ್ತಿದೆ. ಈ ನಿಯಮಗಳು ಕೂಡಲೇ ರದ್ದಾಗಬೇಕು ಎಂದರು.

ಚಿನ್ನ ಗಿರವಿ ಇಡುವ ವ್ಯಕ್ತಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆ ಇರಬೇಕು. ಸಿಬಿಲ್ ಸ್ಕೋರ್ ಸರಿಯಾಗಿರಬೇಕು. ಅವರ ಆದಾಯದ ಮೂಲ ದೃಢೀಕರಣ ಪತ್ರ ಇರಬೇಕು ಎನ್ನುವ ನಿಯಮಗಳು ವಿಶೇಷ, ತುರ್ತು ಸಂದರ್ಭದಲ್ಲಿ ರೈತರಿಗೆ ಸಾಲ ಸಿಗದಿರಲು ಕಾರಣವಾಗುತ್ತಿವೆ. ಕೂಡಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ನಿರ್ದೇಶನ ಕೊಟ್ಟು ಜಾರಿಯಲ್ಲಿರುವ ನಿಯಮಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದರು.

ಈ ಸಂದರ್ಭ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬೇಡಿಕೆಗಳು, ಸಮಸ್ಯೆಗಳ ಬಗ್ಗೆ ಕೇಂದ್ರ ಕಚೇರಿಗೆ ಕಳುಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕಿನ ಅಧಿಕಾರಿಗಳು ಭರವಸೆ ನೀಡಿದರು.

ರೈತ ಸಂಘದ ದಾವಣಗೆರೆಯ ಬಲ್ಲೂರು ರವಿಕುಮಾರ, ಶಿವಮೊಗ್ಗ ದೇವುಕುಮಾರ, ತುಮಕೂರು ಶಿವಕುಮಾರ, ಮೈಸೂರು ಜಿಲ್ಲೆಯ ಅತ್ತಹಳ್ಳಿ ದೇವರಾಜ, ಬರಡನಪುರ ನಾಗರಾಜ ಇತರರು ಇದ್ದರು.

- - -

-7ಕೆಡಿವಿಜಿ38:

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದಿಂದ ಬೆಂಗಳೂರಿನ ರಿಜರ್ವ್‌ ಬ್ಯಾಂಕ್ ಆಫ್‌ ಇಂಡಿಯಾದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.