ಕಾಲುವೆಗಳಿಗೆ ಸಮರ್ಪಕ ನೀರು ಬಿಡುಗಡೆ ಮಾಡಿ

| Published : Aug 07 2024, 01:05 AM IST

ಸಾರಾಂಶ

ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ೧೦ಕ್ಕೂ ಹೆಚ್ಚು ದಿನಗಳ ಗತಿಸಿದರೂ ಇನ್ನೂ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಉಪ ಕಾಲುವೆಗಳ ಕೆಳ ಭಾಗದ ರೈತರಿಗೆ ನೀರು ಸರಿಯಾಗಿ ತಲುಪಿಲ್ಲ ಎಂದು ರೈತರ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ರೈತರ ನಿಯೋಗ ಮನವಿ

ಕನ್ನಡಪ್ರಭ ವಾರ್ತೆ ಕಾರಟಗಿ

ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿ ೧೦ಕ್ಕೂ ಹೆಚ್ಚು ದಿನಗಳ ಗತಿಸಿದರೂ ಇನ್ನೂ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಉಪ ಕಾಲುವೆಗಳ ಕೆಳ ಭಾಗದ ರೈತರಿಗೆ ನೀರು ಸರಿಯಾಗಿ ತಲುಪಿಲ್ಲ ಎಂದು ರೈತರ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಸಿದ್ದಾಪುರದಲ್ಲಿ ನಡೆಯುತ್ತಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದ ರೈತರು, ನೀರಾವರಿ ಭಾಗದ ನೀರಿನ ಸಮಸ್ಯೆ ಮತ್ತು ಇದಕ್ಕೆ ನೀರಾವರಿ ಇಲಾಖೆಯ ೩೧ನೇ ವಿತರಣಾ ಕಾಲುವೆ ಅಧಿಕಾರಿಗಳ ಬೇಜವಬ್ದಾರಿಯೇ ಕಾರಣ ಎಂದು ಆರೋಪಿಸಿದರು.

ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಪಡೆಯುವುದು, ನೀರುಗಳ್ಳತನ ಹೆಚ್ಚಾಗಿದೆ. ಕೆಳಭಾಗದ ಉಪಕಾಲುವೆಗಳಿಗೆ ಇದರಿಂದ ನೀರು ಬರುತ್ತಿಲ್ಲ. ನೀರು ನಿರ್ವಹಣೆ ವೈಫಲ್ಯದಿಂದ ನಮಗೆ ನೀರಿನ ಬರ ಉದ್ಭವವಾಗಿದೆ. ಮೊದಲು ಸುಮಾರು ೧೫ಕ್ಕೂ ಹೆಚ್ಚು ಹಳ್ಳಿಗಳ ಜಮೀನುಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಿ ಎಂದು ನೀರಾವರಿ ಇಲಾಖೆ ಎಂಜಿನಿಯರ್ ನಾಗಪ್ಪ ಸಮ್ಮುಖದಲ್ಲಿಯೇ ರೈತರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ಗೆಜೆಟ್‌ನಲ್ಲಿರುವ ನೀರಾವರಿ ಪ್ರದೇಶಕ್ಕೂ ಉಳುಮೆ ಮಾಡುವ ಭೂಮಿ ದುಪ್ಪಟ್ಟಾಗಿದ್ದೆ ಸಮಸ್ಯೆಗೆ ಕಾರಣ. ಎಲ್ಲರೂ ನೀರು ಪಡೆದರೆ ಹೇಗೆ? ಎಂದ ಅವರು, ಇದಕ್ಕೆ ಅಧಿಕಾರಿಗಳು ಹೇಗೆ ಇಷ್ಟೊಂದು ಪ್ರದೇಶ ನೀರಾವರಿ ಮಾಡಿದರು? ಎಂದು ಮರು ಪ್ರಶ್ನಿಸಿದರು. ಬಳಿಕ ನೀರಾವರಿ ಇಲಾಖೆ ನಾಗಪ್ಪ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಸ್ಯೆ ಆಗದಂತೆ ಕ್ರಮವಹಿಸುತ್ತೇನೆ ಎಂದರು.

ಭತ್ತ ನಾಟಿ ಮಾಡಿದ ಡಿಸಿ:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ಬಸವರಾಜ ನೀರಗಂಟಿ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಯಾಂತ್ರಿಕೃತ ಭತ್ತ ನಾಟಿ ಕಾರ್ಯ ನಡೆಯಿತು. ಇದಕ್ಕೆ ಸ್ವತಃ ಜಿಲ್ಲಾಧಿಕಾರಿ ನಲೀನ್ ಅತುಲ್ ಯಂತ್ರದ ಮೂಲಕ ಚಾಲನೆ ಮಾಡಿ ಭತ್ತ ನಾಟಿ ಮಾಡಿದರು. ಜಿಪಂ ಸಿಇಒ ಸೇರಿ ಇತರ ಅಧಿಕಾರಿಗಳಿದ್ದರು.