ಸಾರಾಂಶ
ನೀರು ಪೋಲಾಗದಂತೆ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಿ: ಸಚಿವ ಜಾರಕಿಹೊಳಿ ಸೂಚನೆ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ, ಘಟಪ್ರಭ ಬಲದಂಡೆ, ಎಡದಂಡೆ ಕಾಲುವೆಗೆ ಮೇ 25 ರಿಂದ ಜೂನ್ 4ರವರೆಗೆ 5.578 ಟಿಎಂಸಿ ನೀರು ಹರಿಸಲಾಗುತ್ತಿದೆ. ಹೀಗಾಗಿ ನೀರು ಪೋಲಾಗದಂತೆ, ನೀರನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ರೈತರಿಗೆ, ಸಾರ್ವಜನಿಕರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಪ್ರಸ್ತುತ ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ಜನ- ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದೆ. ಮೇ 25 ರಿಂದ ಜೂನ್ 4ರವರೆಗೆ ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ, ಘಟಪ್ರಭ ಬಲದಂಡೆ, ಎಡದಂಡೆ ಕಾಲುವೆಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ಬಲದಂಡ ಕಾಲುವೆಗೆ ಪ್ರತಿ ದಿನ 2100 ಕ್ಯೂಸೆಕ್ನಂತೆ 1.814 ಟಿ.ಎಂ.ಸಿ, ಘಟಪ್ರಭಾ ಎಡದಂಡೆ ಕಾಲುವೆಗೆ ಪ್ರತಿ ದಿನ 2650 ಕ್ಯೂಸೆಕ್ನಂತೆ 2.289 ಟಿ.ಎಂ.ಸಿ ಹಾಗೂ ಚಿಕ್ಕೋಡಿ ಉಪ ಕಾಲುವೆಗೆ ಪ್ರತಿ ದಿನ 550 ಕ್ಯೂಸೆಕ್ನಂತೆ 0.475 ಟಿ.ಎಂ.ಸಿ, ಜೂನ್ 4ರಿಂದ ಜೂನ್ 10ರವರೆಗೆ ರಾಯಬಾಗ ತಾಲೂಕಿನ ಘಟಪ್ರಭಾ ಎಡದಂಡೆ ಕಾಲುವೆ ಮುಖಾಂತರ ಕೃಷ್ಣಾ ನದಿ ಕೂಡುವಂತೆ 1 ಟಿಎಂಸಿ ನೀರನ್ನು ಹಿಡಕಲ್ ಜಲಾಶಯದಿಂದ ಬಿಡುಗಡೆಗೊಳಿಸಲಾಗುವುದು ಎಂದಿದ್ದಾರೆ.ಹಿಡಕಲ್ ಜಲಾಶಯದಿಂದ ಬಿಟ್ಟಿರುವ ನೀರು ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಪೋಲಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.