ಸಾರಾಂಶ
ಮೇ ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ಹೈದರಾಬಾದ್ನ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ವಿದ್ಯಮಾನಗಳು ನಡೆದಿದ್ದವು.
ರಾಮಮೂರ್ತಿ ನವಲಿ
ಗಂಗಾವತಿ:ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 7 ವರ್ಷ ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದ ಗಾಲಿ ಜನಾರ್ದನ ರೆಡ್ಡಿ ಶಿಕ್ಷೆಗೆ ಹೈಕೋರ್ಟ ತಡೆಯಾಜ್ಞೆ ನೀಡಿ ಜಾಮೀನು ಮಂಜೂರಾಗಿರುವುದು ಉಪಚುನಾವಣೆಯ ಕನವರಿಕೆಯಲ್ಲಿದ್ದ ಆಕಾಂಕ್ಷಿಗಳಿಗೆ ಆಘಾತ ನೀಡಿದೆ.
ಮೇ ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿಗೆ ಹೈದರಾಬಾದ್ನ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಹೀಗಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ವಿದ್ಯಮಾನಗಳು ನಡೆದಿದ್ದು. ಅದರಲ್ಲೂ ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹೈಕಮಾಂಡ್ ಸಹ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿತ್ತು. ಇದೀಗ ರಾಜಕೀಯ ಲೆಕ್ಕಾಚಾರ ಬುಡಮೇಲಾಗಿದೆ.ಕಾಂಗ್ರೆಸ್ಗೆ ಆಘಾತ:
ಉಪಚುನಾವಣೆ ಭರ್ಜರಿ ಸಿದ್ಧತೆ ಆರಂಭಿಸಿದ್ದ ಕಾಂಗ್ರೆಸ್ಗೆ ನ್ಯಾಯಾಲಯದ ಆದೇಶ ಓಡುವ ಕುದುರೆಗೆ ಲಗಾಮು ಹಾಕಿದಂತೆ ಆಗಿದೆ. ಉಪಚುನಾವಣೆ ಘೋಷಣೆಯಾದರೆ ತಮಗೆ ಟಿಕೆಟ್ ನೀಡಬೇಕೆಂದು ಹಿಟ್ನಾಳ ಕುಟುಂಬ ಹೈಕಮಾಂಡ್ ಬಳಿ ಕೇಳಿಕೊಂಡಿತ್ತು. ಇತ್ತ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಹ ಮತ್ತೊಮ್ಮೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದರ ನಡುವೆ ಕೊಪ್ಪಳ ನಗರಸಭೆ ಅಧ್ಯಕ್ಷ ಸೇರಿದಂತೆ ಕೆಲವರ ಹೆಸರು ಮುನ್ನೆಲೆಗೆ ಬಂದಿದ್ದವು. ಇವರೊಂದಿಗೆ ಮಾಜಿ ಸಂಸದ ಸಂಗಣ್ಣ ಕರಡಿ ಸಹ ತಮಗೆ ಟಿಕೆಟ್ ನೀಡಬೇಕೆಂದು ಹಿರಿಯ ನಾಗಕರಿ ಬಳಿ ಕೇಳಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಯಾವ ಪರ ಜನರ ಒಲವು ಇದೆ ಎಂದು ಅಭಿಪ್ರಾಯ ಸಂಗ್ರಹಿಸಲು ಶುರು ಮಾಡಿತ್ತು. ಇದೀಗ ರೆಡ್ಡಿಗೆ ವಿಧಿಸಿರುವ ಶಿಕ್ಷೆಗೆ ತಡೆಯಾಜ್ಞೆ ಹಾಗೂ ಜಾಮೀನು ಮಂಜೂರು ಮಾಡಿರುವುದರಿಂದ ಅನರ್ಹತೆಯಿಂದ ಪಾರಾಗುವ ಸಾಧ್ಯತೆ ಇರುವುದರಿಂದ ರಾಜಕೀಯ ಲೆಕ್ಕಾಚಾರವೇ ಇದೀಗ ತಲೆ ಕೇಳಗಾಗಿದೆ.ಹೊರಬರುವ ವಿಶ್ವಾಸ:
ಇತ್ತೀಚೆಗೆ ಗಂಗಾವತಿಯಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆ ನಡೆಸಿದ್ದ ಜರ್ನಾದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ, ರೆಡ್ಡಿ ಅವರು ಶಿಕ್ಷೆಯಿಂದ ಹೊರಬರಲಿದ್ದು ಮತ್ತೆ ಶಾಸಕರಾಗಿ ಮುಂದುವರಿಯುತ್ತಾರೆ. ಹೀಗಾಗಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿಲ್ಲ. ಕಾರ್ಯಕರ್ತರು ಎದೆಗೊಂದದೆ ಗೊಂದಲಗಳಿಗೆ ಕಿವಿಗೋಡಬಾರದು ಎಂದು ಹೇಳಿದ್ದರು. ಇದೀಗ ಅವರ ಮಾತು ನಿಜವಾಗಿದೆ.ಗಾಲಿ ಜನಾರ್ದನ ರೆಡ್ಡಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ನ್ಯಾಯಾಲಯ ತಡೆಯಾಜ್ಞೆ ನೀಡುವ ಜತೆಗೆ ಜಾಮೀನು ನೀಡಿದೆ. ಹೀಗಾಗಿ ಅವರು ಶಾಸಕರಾಗಿ ಮುಂದುವರಿಯುತ್ತಾರೆ. ಚುನಾವಣೆ ಬಯಿಸಿದವರಿಗೆ ನಿರಾಸೆಯಾಗಿದೆ.ಮನೋಹರಗೌಡ ಹೇರೂರು, ಗಾಲಿ ಜನಾರ್ದನ ರೆಡ್ಡಿ ಆಪ್ತ