ಸಾರಾಂಶ
ಅಂಗನವಾಡಿ ಕಾರ್ಯಕರ್ತರನ್ನು ಸಿ ದರ್ಜೆಯ ನೌಕರರಾಗಿ ನೇಮಿಸಿ ಅಥವಾ ಚುನಾವಣೆಯ ಬೂತ್ ಲೆವೆಲ್ ಆಫೀಸರ್ (ಬಿಎಲ್ಒ) ಕೆಲಸದಿಂದ ಮುಕ್ತಗೊಳಿಸಿ ಎಂದು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಅಂಗನವಾಡಿ ಕಾರ್ಯಕರ್ತರನ್ನು ಸಿ ದರ್ಜೆಯ ನೌಕರರಾಗಿ ನೇಮಿಸಿ ಅಥವಾ ಚುನಾವಣೆಯ ಬೂತ್ ಲೆವೆಲ್ ಆಫೀಸರ್ (ಬಿಎಲ್ಒ) ಕೆಲಸದಿಂದ ಮುಕ್ತಗೊಳಿಸಿ ಎಂದು ಬಂಟ್ವಾಳ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘ ಅಧ್ಯಕ್ಷೆ ವಿಜಯವಾಣಿ ಶೆಟ್ಟಿ ಆಗ್ರಹಿಸಿದ್ದಾರೆ.ಬಿ.ಸಿ.ರೋಡಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಆಶಾಕಾರ್ಯಕರ್ತೆಯರನ್ನು ಬಿಎಲ್ಒ ಕೆಲಸದಿಂದ ಮುಕ್ತರಾಗಿಸಿದ್ದೀರಿ, ಆದರೆ ನಮಗೆ ಒತ್ತಡ ನೀಡುತ್ತೀರಿ, ಅವರಿಗೊಂದು ನ್ಯಾಯ, ನಮಗೊಂದು ನ್ಯಾಯನಾ? ಎಂದು ಪ್ರಶ್ನಿಸಿದರು.ಸಿ ದರ್ಜೆ ನೌಕರರನ್ನು ಬಿಎಲ್ಒ ಮಾಡಿ ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಲ್ಲಿನ ಕಂದಾಯ ಅಧಿಕಾರಿಗಳು ಸಿ ದರ್ಜೆಯ ನೌಕರರನ್ನು ಕೈ ಬಿಟ್ಟು ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್ಒ ಜವಾಬ್ದಾರಿ ಹೊರಿಸುತ್ತಿದೆ. ಅಂಗನವಾಡಿ ಕಾರ್ಯಕರ್ತರು ಗೌರವಧನ ಪಡೆಯುವವರೆ ಹೊರತು ಸರ್ಕಾರಿ ಸಂಬಳ ಪಡೆಯುವ ನೌಕರರಲ್ಲ. ಹಾಗಾಗಿ ಸಿ ದರ್ಜೆಯ ನೌಕರರನ್ನೇ ಬಿಎಲ್ಒ ಮಾಡಿ ಎಂಬ ಮನವಿ ಮಾಡುತ್ತಿದ್ದೇವೆ, ತಪ್ಪಿದ್ದಲ್ಲಿ ನಮ್ಮನ್ನೂ ಸಿ ದರ್ಜೆಯ ನೌಕರರನ್ನಾಗಿ ಪರಿಗಣಿಸಿ ಎಂದವರು ಒತ್ತಾಯಿಸಿದರು. ಅಂಗನವಾಡಿಯ ಒತ್ತಡದ ಕಾರ್ಯದ ಮಧ್ಯೆ ಬಿಎಲ್ಒ ಕಾರ್ಯ ಕಷ್ಟವಾಗುತ್ತದೆ ಎಂದ ಅವರು, ಸರ್ವರ್ ಸಮಸ್ಯೆ ಒಂದೆಡೆಯಾದರೆ, ಪೋಷಣ್ ಟ್ರ್ಯಾಕರ್ ಎಂಬುದು ಇನ್ನೊಂದು ಸಮಸ್ಯೆಯಾಗಿದೆ ಎಂದರು.
ಗೌರವಾಧ್ಯಕ್ಷೆ ಯಮುನಾ, ಜಿಲ್ಲಾ ಕೋಶಾಧಿಕಾರಿ ರೇಣುಕಾ, ಜಿಲ್ಲಾ ಉಪಾಧ್ಯಕ್ಷೆ ಗುಲಾಬಿ, ತಾಲೂಕು ಕಾರ್ಯದರ್ಶಿ ಜಯಶ್ರೀ, ಉಪಾಧ್ಯಕ್ಷೆ ವಾಣಿ ಇದ್ದರು.