ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರು
ಮಠಮಾನ್ಯಗಳ ಪರಂಪರೆಯಿಂದ ಮಾತ್ರ ಸಂಸ್ಕೃತಿ ಧರ್ಮ ಉಳಿದಿದೆ. ಜೊತೆಗೆ ಮನುಷ್ಯನಲ್ಲಿ ಸನ್ಮಾರ್ಗದ ಗುಣಗಳನ್ನು ಬೆಳೆಸುತ್ತಿವೆ ಎಂದು ಬಾಳೆಹೊನ್ನೂರು ಮಠದ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.ಹೋಬಳಿಯ ನಾಗರನವಿಲೆ ಗ್ರಾಮದಲ್ಲಿ ಶಿವಾನುಗ್ರಹ ಸೇವಾ ಪ್ರತಿಷ್ಠಾನದ ವತಿಯಿಂದ ಅಡ್ಡ ಪಲ್ಲಕ್ಕಿ ಮಹೋತ್ಸವ, ಸುವರ್ಣ ಪೂಜಾ ಮಂಟಪ ಸಮರ್ಪಣಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿ ದೇವರ ಅನುಗ್ರಹವಿಲ್ಲದೆ ಏನೂ ನಡೆಯಲು ಸಾಧ್ಯವಿಲ್ಲ ಎಂಬುದನ್ನು ಮನುಷ್ಯ ಅರ್ಥಮಾಡಿಕೊಳ್ಳಬೇಕು, ವಿಜ್ಞಾನ ಬೆಳೆದಂತೆ ಮನುಷ್ಯನ ಮನಸ್ಥಿತಿಯು ಬದಲಾಗುತ್ತಿದೆ. ತಾನು ನಡೆದು ಬಂದ ಪರಂಪರೆಯನ್ನು ಮರೆಯುತ್ತಿರುವ ಪರಿಣಾಮದಿಂದಲೇ ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗಿ ಅವಘಡಗಳು ಹೆಚ್ಚಾಗಲು ಕಾರಣವಾಗಿದೆ ಎಂದರು. ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರ ಸಿಂಹಾಸನ ಪೀಠವು ಹಲವು ವರ್ಷಗಳ ದಿನನಿತ್ಯದ ಪೂಜೆಯ ಬಳಕೆಯಿಂದ ಹೆಚ್ಚು ಶಿಥಿಲಗೊಂಡಿತು ಅದನ್ನು ಪುನರ್ ನವೀಕರಣ ಮಾಡಲು ನವಿಲೆ ಗ್ರಾಮದ ಶಿವಾನುಗ್ರಹ ಸೇವಾ ಪ್ರತಿಷ್ಠಾನ ಮುಂದೆ ಬಂದು ಬಹಳ ಅದ್ಭುತವಾಗಿ ಸುವರ್ಣ ಪೂಜಾ ಮಂಟಪವನ್ನು ಚಿನ್ನ ಲೇಪಿತದಿಂದ ನವೀಕರಣ ಮಾಡಿದ್ದಾರೆ. ಪ್ರತಿಷ್ಠಾನದ ಕೆಲಸವನ್ನು ಶ್ರೀ ಮಠ ಎಂದಿಗೂ ಮರೆಯುವುದಿಲ್ಲ. ನವಿಲೆ ನಾಗೇಶ್ವರ ಕ್ಷೇತ್ರ ಕೇವಲ ಭಾರತ ದೇಶವಲ್ಲದೆ ವಿಶ್ವಮಟ್ಟದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿರುವ ಶಕ್ತಿ ದೇಗುಲವಾಗಿದೆ. ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು ಸಂಕಷ್ಟಗಳಿಂದ ಪರಿಹಾರ ಪಡೆದು ರಾಜಕೀಯದಲ್ಲಿ ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.ದೇವಾಲಯಗಳ ಪುನರ್ ಪ್ರತಿಷ್ಠಾಪನೆ:ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಡಾ. ಕರಿ ವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಬಾಳೆಹೊನ್ನೂರು ರಂಭಾಪುರಿ ಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶ್ರೀ ಮಠದ ಪೀಠಾಧ್ಯಕ್ಷರ ಧರ್ಮ ಜಾಗೃತಿ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಭಾವನೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತಿವೆ. ಚನ್ನರಾಯಪಟ್ಟಣದ ವ್ಯಾಪ್ತಿಯಲ್ಲಿ ವೀರಶೈವ ಲಿಂಗಾಯತ ಜನಾಂಗಕ್ಕೆ ಸೇರಿರುವ ಜಾಗವಿದ್ದು, ಶ್ರೀ ಕಾಡು ಸಿದ್ದೇಶ್ವರ ಹಾಗೂ ಬಸವಣ್ಣನವರ ದೇಗುಲಗಳು ಶಿಥಿಲಗೊಂಡಿದ್ದು ದೇವಾಲಯಗಳ ಪುನರ್ ಪ್ರತಿಷ್ಠಾಪನೆ ಕೆಲಸವನ್ನು ಸಮಾಜದ ಎಲ್ಲರ ಸಹಕಾರದೊಂದಿಗೆ ನೆರವೇರಿಸಲಾಗುತ್ತದೆ. ಕ್ಷೇತ್ರದ ಶಾಸಕರು ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದು ಸದ್ಯದಲ್ಲೇ ದೇವಾಲಯ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದರು.
ಕೃತಿ ಬಿಡುಗಡೆ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್ ಮಾತನಾಡಿ, ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿಕಾಂತ ದೇವಾಲಯ ಜೀರ್ಣೋದ್ಧಾರಕ್ಕೆ ಬಾಳೆಹೊನ್ನೂರು ಶ್ರೀಗಳು ಗೌರಿಗದ್ದೆ ವಿನಯ್ ಗುರೂಜಿ ಸೇರಿದಂತೆ ಕ್ಷೇತ್ರದ ಶಾಸಕರು ಸಹಕಾರ ನೀಡುವಂತೆ ಮನವಿ ಮಾಡಿದರು. ಸಾಹಿತಿ ಗುರುಪಾದಯ್ಯ ಸಾಲಿಮಠ ಅವರು ಹೊರತಂದಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವ್ರತಂ ಕೃತಿಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಬಿಡುಗಡೆಗೊಳಿಸಿದರು. ಶಿವಾನುಗ್ರಹ ಸೇವಾ ಟ್ರಸ್ಟ್ ವತಿಯಿಂದ ಯೋಗೇಶ್ ಮತ್ತು ಲೋಕೇಶ್ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಸೇವ ರತ್ನ ಎಂಬ ಬಿರುದು ನೀಡಿ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠ ಡಾ. ಮಹೇಶ್ವರ ಸ್ವಾಮೀಜಿ, ಬಾಳೆಹೊನ್ನೂರು ಶಾಖ ಮಠದ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಮುಜರಾಯಿ ತಹಸೀಲ್ದಾರ್ ಎಚ್ ಎಮ್ ಲತಾ, ಶಿವಾನುಗ್ರಹ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ಶಾಸ್ತ್ರಿ, ಸದಸ್ಯರಾದ ಪವನ್ ಕುಮಾರ್, ಸಂದೀಪ್ ಕೆ, ಚನ್ನರಾಯಪಟ್ಟಣ ನಗರ ಅಧಿಕಾರದ ಮಾಜಿ ಅಧ್ಯಕ್ಷ ಎ.ಸಿ. ಆನಂದ್ ಕುಮಾರ್, ಉದ್ಯಮಿ ಭುವನಹಳ್ಳಿ ಯೋಗೇಶ್, ತಾಲೂಕು ಟಿಎಪಿಎಂಎಸ್ ಅಧ್ಯಕ್ಷ ಮರಗೂರು ಅನಿಲ್, ಸಾಹಿತಿ ಗುರುಪಾದಯ್ಯ ಸಾಲಿಮಠ, ಪ್ರಾಧ್ಯಾಪಕಿ ಮಮತಾ ಸಾಲಿಮಠ, ನವಿಲೆ ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಶಿವಾನುಗ್ರಹ ಸೇವಾ ಪ್ರತಿಷ್ಠಾನದ ಸರ್ವ ಸದಸ್ಯರು ನವಿಲೆ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತರು ಹಾಜರಿದ್ದರು.
*ಹೇಳಿಕೆ-1ನಾನು ಬಾಳೆಹೊನ್ನೂರು ಮಠದ ಪರಮ ಭಕ್ತನಾಗಿದ್ದು, ಜಗದ್ಗುರುಗಳ ಆಶೀರ್ವಾದದಿಂದ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚು ಸಮಯ ಕಾರ್ಯ ನಿರ್ವಹಿಸುತ್ತಿದ್ದೇನೆ. ದೇವರನ್ನು ಪರಿಪೂರ್ಣವಾಗಿ ಭಕ್ತಿಯಿಂದ ಪೂಜಿಸಿದರೆ ಮಾತ್ರ ಅವನಲ್ಲಿ ಏನಾದರೂ ನಿರೀಕ್ಷಿಸಲು ಸಾಧ್ಯ. ನವಿಲೆ ನಾಗೇಶ್ವರ ಕ್ಷೇತ್ರಕ್ಕೆ ಹೆಚ್ಚು ಶಕ್ತಿ ಇದ್ದು ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೂ ನವಿಲೆ ನಾಗೇಶ್ವರ ದೇವಾಲಯಕ್ಕೂ ಧಾರ್ಮಿಕವಾಗಿ ಇತಿಹಾಸವಿದೆ. ಆದರೆ ಇದು ಎಲ್ಲರಿಗೂ ತಿಳಿದಿಲ್ಲ. - ವಿನಯ್ ಗುರೂಜಿ, ಗೌರಿಗದ್ದೆ - ಚಿಕ್ಕಮಗಳೂರು ಅವಧೂತ ಆಶ್ರಮ*ಹೇಳಿಕೆ 2
ನವಿಲೆ ನಾಗೇಶ್ವರ ಕ್ಷೇತ್ರದಲ್ಲಿ ಬರುವ ಭಕ್ತರ ಅನುಕೂಲಕ್ಕಾಗಿ ಪ್ರಮುಖ ನಾಲ್ಕು ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಜೊತೆಗೆ ಹೆಚ್ಚಿನ ಬಸ್ ವ್ಯವಸ್ಥೆ ಮತ್ತು ಪ್ರತಿನಿತ್ಯ ಅನ್ನದಾಸೋಹವನ್ನು ನಡೆಸಲಾಗುತ್ತಿದೆ. ದೇವಾಲಯದ ಮುಂಭಾಗ ಈ ಭಾಗದಲ್ಲಿ ಶುಭ ಕಾರ್ಯಗಳನ್ನು ನಡೆಸಲು ನೂತನ ಕಲ್ಯಾಣ ಮಂಟಪವನ್ನು ಸುಮಾರು 5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಲೋಕಾರ್ಪಣೆಯನ್ನು ರಂಭಾಪುರಿ ಜಗದ್ಗುರುಗಳಿಂದ ನೆರೆವೇರಿಸಲಾಗುತ್ತದೆ. - ಸಿ.ಎನ್. ಬಾಲಕೃಷ್ಣ, ಶಾಸಕ