ಸಾರಾಂಶ
ಕನಕಗಿರಿಯಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿಕೆಕನ್ನಡಪ್ರಭ ವಾರ್ತೆ ಕನಕಗಿರಿ
ರಾಮಜನ್ಮಭೂಮಿ ಹಾಗೂ ಹನುಮ ಜನಿಸಿದ ನಾಡಿನಲ್ಲಿ ಬಿಜೆಪಿ ಸೋತಿದ್ದು, ಧರ್ಮಕ್ಕೆ ಜಯ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.ಸೋಮವಾರ ತಮ್ಮ ೫೩ನೇ ಹುಟ್ಟು ಹಬ್ಬದ ನಿಮಿತ್ತ ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯವರು ಚುನಾವಣೆಯಲ್ಲಿ ಶ್ರೀರಾಮ, ಹನುಮನ ಹೆಸರು ಬಳಸಿ ಮತಗಿಟ್ಟಿಸಿಕೊಳ್ಳಲು ಯತ್ನಸಿದ್ದರು. ಆದರೆ ದೇಶದ ಜನ ಬಿಜೆಪಿಗೆ ಸರಿಯಾದ ಉತ್ತರ ನೀಡಿದ್ದಾರೆ. ಇದೇ ಮುಂದುವರಿದರೆ ಮತದಾರರ ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ ಎಂದರು.ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರುವ ಪಕ್ಷಗಳು ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೆಲವೇ ತಿಂಗಳಲ್ಲಿ ಪತನವಾಗಲಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬ ಮಾತುಗಳು ಈ ಸರ್ಕಾರದಲ್ಲಿ ಬರುವುದಿಲ್ಲ. ಮೋದಿಯವರು ಈ ಹಿಂದೆ ನೀಡಿದ ಆಡಳಿತವನ್ನು ಈ ಬಾರಿ ಮಾಡಲು ಸಾಧ್ಯವಿಲ್ಲ. ಬಿಜೆಪಿ ಲೆಕ್ಕಾಚಾರಗಳೆಲ್ಲವೂ ಲೋಕಸಭಾ ಚುನಾವಣೆಯಲ್ಲಿ ತಲೆಕೆಳಗಾಗಿದ್ದು, ದೇಶದ ಜನ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ ಎಂದು ತಂಗಡಗಿ ಅಭಿಪ್ರಾಯಪಟ್ಟರು.
ಎಸ್ಟಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ವಿಚಾರವಾಗಿ ಮಾತನಾಡಿದ ಸಚಿವ ತಂಗಡಗಿ, ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು. ಮುಖ್ಯಮಂತ್ರಿಗಳು ಎಸ್ಟಿ ನಿಗಮದ ಹೊಣೆ ನೀಡಿದರೆ ನಾನು ನಿಭಾಯಿಸುವೆ ಎಂದ ಅವರು, ರಾಹುಲ್ ಗಾಂಧಿ ಅವರನ್ನು ಪಪ್ಪು-ಅಪ್ಪು ಅಂತೆಲ್ಲ ಟೀಕೆ ಮಾಡುತ್ತಿದ್ದವರಿಗೆ ಜನ ಸರಿಯಾದ ಉತ್ತರ ಕೊಟ್ಟಿದ್ದಾರೆ ಎಂದರು.ವೀರೇಶ ಸಮಗಂಡಿ, ಗಂಗಾಧರಸ್ವಾಮಿ, ಶರಣಪ್ಪ ಭತ್ತದ, ಬಸವಂತಗೌಡ, ಸಂಗಪ್ಪ ಸಜ್ಜನ, ಹುಲುಗಪ್ಪ ವಾಲೇಕಾರ, ಶರಣೇಗೌಡ, ರವಿ ಪಾಟೀಲ್, ಹೊನ್ನೂರುಸಾಬ ಉಪ್ಪು, ಪ್ರಶಾಂತ ತೆಗ್ಗಿನಮನಿ, ಗಂಗಾಧರ ಚೌಡ್ಕಿ, ಕನಕಪ್ಪ ತಳವಾರ, ಶಿವಶಂಕರ ಚನ್ನದಾಸರ, ಖಾಜಸಾಬ ಗುರಿಕಾರ ಇತರರು ಇದ್ದರು.