ಹುಟ್ಟಿನಿಂದ ಜೊತೆಗಿರುವ ಧರ್ಮ, ಭಾಷೆಯನ್ನು ಗೌರವಿಸಬೇಕು: ತಮ್ಮಯ್ಯ

| Published : Mar 10 2024, 01:30 AM IST

ಹುಟ್ಟಿನಿಂದ ಜೊತೆಗಿರುವ ಧರ್ಮ, ಭಾಷೆಯನ್ನು ಗೌರವಿಸಬೇಕು: ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂತಹದ್ದೆ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಸಲ್ಲಿಸಲಾಗದು. ಹಾಗಾಗಿ ಹುಟ್ಟಿನಿಂದ ಜೊತೆಗಿರುವ ಧರ್ಮ ಹಾಗೂ ಮಾತೃ ಭಾಷೆಗೆ ಮೊದಲು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಇಂತಹದ್ದೆ ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಸಲ್ಲಿಸಲಾಗದು. ಹಾಗಾಗಿ ಹುಟ್ಟಿನಿಂದ ಜೊತೆಗಿರುವ ಧರ್ಮ ಹಾಗೂ ಮಾತೃ ಭಾಷೆಗೆ ಮೊದಲು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಉರ್ದು ಅದಬ್, ರಾಜ್ಯ ಅಂಜುಮಾನ್ ತಾರಕಿ ಉರ್ದು ಸಹಯೋಗದಲ್ಲಿ ಶನಿವಾರ ನಡೆದ ಉರ್ದು ಸಮ್ಮೇಳನ ಹಾಗೂ ಗಜಲ್-ಕವಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಧರ್ಮ ಹಾಗೂ ಭಾಷೆಗೆ ಆದ್ಯತೆ ನೀಡಬೇಕು. ಅದರಂತೆ ಇತರೆ ಧರ್ಮಕ್ಕೆ ಧಕ್ಕೆಯುಂಟಾಗದಂತೆ ನಡೆದು ಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಲು ಸಾಧ್ಯ. ಹಿಂದೂ, ಮುಸ್ಲೀಂ, ಕ್ರೈಸ್ತದ ಧರ್ಮ ಗ್ರಂಥಗಳಲ್ಲಿ ಮಹಾ ಪುರುಷರು ಇದೇ ಸಂದೇಶ ನೀಡಿದ್ದು, ಇದನ್ನು ಪರಿಪಾಲಿಸುವ ದಾರಿ ಹಿಡಿಯಬೇಕು ಎಂದು ಹೇಳಿದರು. ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಮೊದಲ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತಿದೆ. ಕೆಲವರು ಧರ್ಮವನ್ನು ಹತ್ತಿಕ್ಕುವ ಸಲುವಾಗಿ ಹಲವಾರು ತಪ್ಪು ಸಂದೇಶಗಳನ್ನು ನಾಗರಿಕರಲ್ಲಿ ಭಿತ್ತುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹೆಚ್ಚು ಕಿವಿ ಗೊಡದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಸಹಬಾಳ್ವೆಯೊಂದಿಗೆ ಮುನ್ನಡೆಯಬೇಕು ಎಂದು ತಿಳಿಸಿದರು. ಈಗಾಗಲೇ ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಬಹುತೇಕ ಮುಸ್ಲೀಂ ಸಮುದಾಯಕ್ಕೆ ತಲುಪಿಸುತ್ತಿರುವುದು ರಾಜ್ಯ ಸರ್ಕಾರ. ಜೊತೆಗೆ ಕ್ಷೇತ್ರದ ಮಸೀದಿ, ದರ್ಗಾಗಳ ಅಭಿವೃದ್ಧಿಗೆ 1.70 ಕೋಟಿ ರು. ಅನುದಾನವನ್ನು ವಕ್ಫ್ ಸಮಿತಿಗೆ ಒದಗಿಸುವ ಮೂಲಕ ಹೆಚ್ಚು ಒತ್ತು ನೀಡುತ್ತಿದೆ ಎಂದರು. ಸದ್ಯದಲ್ಲೇ ಮುಸ್ಲೀಮರು ರಂಜಾನ್ ಹಬ್ಬ ಸಮೀಪದಲ್ಲಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಉಪವಾಸ ಮಾಡಿ ಆಚರಣೆಗೆ ಮುಂದಾಗುತ್ತಾರೆ. ರಂಜಾನ್‌ಗೂ ತಮಗೂ ಅವಿಭಾವ ಸಂಬಂಧವಿದೆ. ಕಳೆದ ವರ್ಷದಲ್ಲಿ ರಂಜಾನ್‌ನಲ್ಲಿ ಅನೇಕ ಮುಸ್ಲೀಂ ಜನಾಂಗದವರು ತಮ್ಮ ಗೆಲುವಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿರುವುದು ಮರೆಯಲಾಗದು ಎಂದು ಹೇಳಿದರು.

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶೇ.50 ರಷ್ಟು ಮುಸ್ಲೀಂ ಸಮುದಾಯ ವಾಸಿಸುವ ಸ್ಥಳಗಳಿಗೆ ಸರ್ಕಾರ ವಿಶೇಷ ಅನುದಾನ ಒದಗಿಸುವ ಮೂಲಕ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಮುಂದಾಗಿದ್ದು ಸದ್ಯದಲ್ಲೇ ಎಲ್ಲಾ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷ ಮಹಮ್ಮದ್ ಶಾಹೀದ್ ರಜ್ವಿ ಮಾತನಾಡಿ, ರಾಜ್ಯ ಸರ್ಕಾರ ಈಗಾಗಲೇ ಜಿಲ್ಲೆಯ ಮಸೀದಿ, ದರ್ಗಾಗಳ ಮೂಲ ಸೌಕರ್ಯಕ್ಕೆ 6 ಕೋಟಿ ಅನುದಾನ ಬಿಡುಗಡೆಗೊಳಿಸಿದೆ. ತಾಲೂಕಿನಲ್ಲಿ ಮುಸ್ಲೀಂ ಸಮುದಾಯದ ಬೆಳವಣಿಗೆಗೆ ಉರ್ದು ಭವನ ನಿರ್ಮಿಸಲು ವಿಶೇಷ ಅನುದಾನಕ್ಕೆ ಶಾಸಕರಿಗೆ ಒತ್ತಾಯಿಸಿದ ಮೇರೆಗೆ ಪ್ರತಿಕ್ರಿಯಿಸಿ ಅವರು ಸದ್ಯದಲ್ಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಭವನ ನಿರ್ಮಿಸಲು ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಗಜಲ್ ಮತ್ತು ಕವಾಲಿ ಕಾರ್ಯಕ್ರಮ ನಡೆಯಿತು. ಕಳೆದ ಎರಡು ದಿನಗಳಿಂದ ಉರ್ದು ಶಿಕ್ಷಕರಿಗೆ ಉರ್ದು ಭಾಷಾ ಬೆಳವಣಿಗೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರು ದಾರುಲ್ ಉಲೂಮ್ ಯನಿವರ್ಸಿಟಿ ಮುಖ್ಯಸ್ಥ ಡಾ.ಹಜೀಕ್ ನದ್ವಿ, ಅಂಜುಮಾನ್ ತಾರಕಿ ಉರ್ದು ಸಂಸ್ಥೆ ರಾಜ್ಯ ಸದಸ್ಯ ಮುನೀರ್ ಅಹ್ಮದ್, ಜಿಲ್ಲಾ ಉರ್ದು ಅದಬ್ ಸಂಸ್ಥೆಯ ಅಧ್ಯಕ್ಷ ಜಂಶೀದ್‌ಆಲಿ, ಉಪಾಧ್ಯಕ್ಷ ಫೈರೋಜ್, ರೆಹಮಾನ್, ಕಾರ್ಯದರ್ಶಿ ನಜ್ಮಾ, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಖಲಂದರ್, ಜಾವೀದ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಮುಖಂಡರಾದ ಜಂಶೀದ್‌ಖಾನ್ ಹಾಜರಿದ್ದರು. 9 ಕೆಸಿಕೆಎಂ 4ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಉರ್ದು ಸಮ್ಮೇಳನ ಹಾಗೂ ಗಜಲ್-ಕವಾಲಿ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಉದ್ಘಾಟಿಸಿದರು.