ಶ್ರಾವಣ ಚಿಂತನದಿಂದ ಧಾರ್ಮಿಕ ಅರಿವು

| Published : Aug 18 2024, 01:45 AM IST

ಸಾರಾಂಶ

ಶಿವಮೊಗ್ಗದ ಕೃಷಿನಗರದ ರೋಟರಿ ರಿವರ್‌ಸೈಡ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶ್ರಾವಣ ಚಿಂತನ’ ಕಾರ್ಯಕ್ರಮದಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂಗೀತಕ್ಕೆ ಹೆಚ್ಚು ಪಾವಿತ್ರ್ಯತೆ ತಂದುಕೊಟ್ಟವರು ಪಂಚಾಕ್ಷರಿ ಗವಾಯಿಗಳು, ಅವರ ಸಾಧನೆಯಿಂದ ಪ್ರೇರೇಪಿತರಾದ ಅನೇಕ ಜನರು ನಾಡಿನ ಆದರ್ಶಪ್ರಾಯ ಸಂಗೀತಗಾರರಾಗಿದ್ದಾರೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಕೃಷಿನಗರದ ರೋಟರಿ ರಿವರ್‌ಸೈಡ್ ಸಭಾಂಗಣದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮುರುಘರಾಜೆಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್‌ನ ಗುರುಬಸವ ಅಧ್ಯಯನ ಪೀಠದಿಂದ ಶಿವಗಂಗಾ ಯೋಗಕೇಂದ್ರ ಕೃಷಿನಗರ ಶಾಖೆ ಮತ್ತು ರೋಟರಿ ರಿವರ್‌ಸೈಡ್ ಸಹಯೋಗದಲ್ಲಿ ಆಯೋಜಿಸಿದ್ದ ಶ್ರಾವಣ ಚಿಂತನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರಾವಣ ಚಿಂತನದಿಂದ ಮನೆ ಮನಗಳು ಬೆಳಗುತ್ತವೆ. ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಒಳ್ಳೆಯ ವಿಚಾರಗಳ ಅರಿವು ಮೂಡುತ್ತದೆ ಎಂದು ತಿಳಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಾ.ಎಂ.ಬಸವರಾಜಪ್ಪ ಮಾತನಾಡಿ, ಪಂಚಾಕ್ಷರಿ ಗವಾಯಿಗಳ ಸಾಧನೆ ಬದುಕು ಬರಹ ಕುರಿತು ಮಾತನಾಡಿ ದರು. ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ ಭಾವೇಶ್ ಅವರು ಸೇನೆಯ ಅನುಭವಗಳ ಕುರಿತು ಹಾಗೂ ಜೀವನ್ಮರಣ ಹೋರಾಟದ ರೋಮಾಂಚನ ಅನುಭವಗಳನ್ನು ಹಂಚಿಕೊಂಡರು.

ರೋಟರಿ ಕ್ಲಬ್ ರಿವರ್‌ಸೈಡ್ ಅಧ್ಯಕ್ಷ ಎಂ.ಆರ್.ಬಸವರಾಜ ಮಾತನಾಡಿ, ಗುರುಗಳು ನಡೆಸುವ ಶ್ರಾವಣ ಚಿಂತನದಂತಹ ಕಾರ್ಯಕ್ರಮಗಳು ಧಾರ್ಮಿಕ ಅರಿವಿನ ಜತೆ ಹೊಸ ವಿಷಯಗಳ ತಿಳಿವಳಿಕೆ ಮೂಡಿಸುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಕುಟುಂಬ ಸದಸ್ಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಆಕಾಶವಾಣಿ ಹಿರಿಯ ಕಲಾವಿದೆ ನಾಗರತ್ನಮ್ಮ ಚಂದ್ರಶೇಖರ್ ಹಾಗೂ ಯೋಗ ಶಿಬಿರಾರ್ಥಿಗಳಿಂದ ಭಕ್ತಿ ಸಂಗೀತ ಸೇವೆ ಹಾಗೂ ವಚನ ಕಾರ್ಯಕ್ರಮ ಸುಂದರ ವಾಗಿ ನೆರವೇರಿತು. ಜಿ.ವಿಜಯಕುಮಾರ್, ಯೋಗ ಶಿಕ್ಷಕರಾದ ಚಂದ್ರಶೇಖರಯ್ಯ, ನೀಲಕಂಠರಾವ್, ಜಯಣ್ಣ, ಮಹೇಶ್ವರಪ್ಪ, ಚಿದಾನಂದ, ಕುಸುಮಾ, ಬಿಂದು ವಿಜಯಕುಮಾರ್, ವಿನೋದಮ್ಮ, ಕೃಷ್ಣಮೂರ್ತಿ, ಮಹಾಬಲೇಶ್ವರ ಹೆಗಡೆ, ಸುರೇಶ್, ವಕೀಲ ಮಲ್ಲೇಶ್, ರೇವಣಪ್ಪ, ಕುಸುಮಾ, ಅರುಣಾ, ಭಾಗ್ಯ ಹಾಗೂ ಯೋಗಬಂಧುಗಳು ಉಪಸ್ಥಿತರಿದ್ದರು.