ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಾಂತಿ ಸೌಹಾರ್ಧತೆಗೆ ಹೆಸರಾಗಿರುವ ಶಿವಮೊಗ್ಗದಲ್ಲಿ ನಡೆಯುವ ಯಾವುದೇ ಧರ್ಮದ ಧಾರ್ಮಿಕ ವಿಧಿಗಳು, ಹಬ್ಬದ ಆಚರಣೆಗಳು ಶಾಂತಿಯುತವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿಯೂ ಸದಾ ಕೂಡಿ ಬಾಳುವ, ನಾಡಿಗೆ ಏಕತೆ, ಭಾವೈಕ್ಯತೆಯ ಸಂದೇಶ ಸಾರುವ ನೆಲ ನಮ್ಮದಾಗಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಬಕ್ರೀದ್ ಸಂಭ್ರಮಾಚರಣೆಯ ಕುರಿತು ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಏರ್ಪಡಿಸಿದ್ದ ಶಾಂತಿ ಸೌಹಾರ್ದ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಹಬ್ಬಗಳು ಸಡಗರ, ಸಂಭ್ರಮಗಳಿಂದ ಆಚರಿಸಬೇಕು. ಶಾಂತಿ ಸಂದೇಶದಲ್ಲಿ ಜಿಲ್ಲೆಯಲ್ಲಿನ ಎಲ್ಲಾ ಕುಟುಂಬಗಳ ನೆಮ್ಮದಿಯ ಬದುಕಿದೆ. ವೈಯಕ್ತಿಗೆ ಏಳಿಗೆ ಅಡಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಶಿವಮೊಗ್ಗ ಜಿಲ್ಲೆ ಅಭಿವೃಧ್ಧಿಯ ಪಥದಲ್ಲಿ ನಾಗಾಲೋಟದಲ್ಲಿದೆ. ನಿರೀಕ್ಷಿಸುವ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಕಂಡುಬರುತ್ತಿದೆ. ಇಂತಹ ಪರ್ವಕಾಲದಲ್ಲಿ ಎಲ್ಲರೂ ನಿರ್ಭಯವಾಗಿ ಆತಂಕ ರಹಿತ ಜೀವನ ನಿರ್ವಹಿಸುವಂತಾಗಬೇಕು ಎಂದ ಅವರು, ಎಲ್ಲರೂ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು. ನಡೆಯುವ ಸಂಭಾವ್ಯ ಅಹಿತಕರ ಘಟನೆಗಳ ಸಂದರ್ಭದಲ್ಲಿ ಜಿಲ್ಲಾಡಳಿತ ತಮ್ಮ ನೆರವಿಗೆ ಧಾವಿಸಲಿದೆ ಎಂದು ಹೇಳಿದರು.ಒಬ್ಬ ವ್ಯಕ್ತಿಯ ನೋವಿನಲ್ಲಿ ಮತ್ತೊಬ್ಬರು ಸಂಭ್ರಮಿಸುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಪರಸ್ಪರರಲ್ಲಿ ಸಾಮರಸ್ಯ, ಸೌಹಾರ್ಧತೆ ಮೂಡಬೇಕು. ಅಂತಹ ವಾತಾವರಣವನ್ನು ನಾವೇ ಸೃಜಿಸಿಕೊಳ್ಳಬೇಕು. ವದಂತಿಗಳನ್ನು ನಂಬಬೇಡಿ ಹಾಗೂ ಅವುಗಳನ್ನು ಹರಡಬೇಡಿ. ಯುವಜನತೆ ತಾಳ್ಮೆಯಿಂದ ವರ್ತಿಸುವಂತೆ ಹಿರಿಯರು ಸಕಾಲಿವಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ಎಲ್ಲರೂ ಕಾನೂನನ್ನು ಗೌರವಿಸಿ, ಅಂತೆಯೇ ಪಾಲಿಸಿ. ಆಕಸ್ಮಿಕ ಘಟನೆಗಳು ನಡೆದಾಗ ತಕ್ಷಣದ ಅಗತ್ಯಗಳಿಗಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಮೀಪದ ಅಧಿಕಾರಿಗಳನ್ನು ಸಂಪರ್ಕಿಸಿ, ಚರ್ಚಿಸಿ. ತಕ್ಷಣದ ಪರಿಹಾರಕ್ಕಾಗಿ ಏಕಪಕ್ಷೀಯವಾದ ಆತುರದ ನಿರ್ಧಾರಗಳು ಬೇಡ ಎಂದು ಸಲಹೆ ನೀಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಧರ್ಮದ ಬಾಂಧವರು ಸಹಕರಿಸಬೇಕು. ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ. ನಗರದಲ್ಲಿನ ಸ್ವಚ್ಚತೆಗೆ ಮಹಾನಗರಪಾಲಿಕೆ ವತಿಯಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಅಲ್ಲದೇ ನಿರಂತರ ವಿದ್ಯುತ್ ಪೂರೈಕೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಕ್ರೀದ್ ಹಬ್ಬದ ದಿನದಂದು ತಮ್ಮ ಗಲ್ಲಿ, ಮೊಹಲ್ಲಾಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಅನ್ಯಕೋಮಿನವರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮವಹಿಸಬೇಕು. ಸ್ವಚ್ಚತೆಯ ವಿಷಯದಲ್ಲಿ ಮಹಾನಗರಪಾಲಿಕೆಯ ಸಹಕಾರ ನಿರಂತರವಾಗಿದೆ. ಯಾವುದೇ ಧರ್ಮದ ಹಬ್ಬಗಳು ಯಾವುದೇ ಆತಂಕಗಳಿಲ್ಲದೆ ಸಡಗರ-ಸಂಭ್ರಮದಿಂದ ನಡೆಯುವಂತಾಗಬೇಕು ಎಂದರು.ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ , ಕಾರಿಯಪ್ಪ, ಮಹಾನಗರಪಾಲಿಕೆಯ ಎಂಜಿನಿಯರ್ ಭರತ್ಕುಮಾರ್ ಸೇರಿದಂತೆ ವಿವಿಧ ಎಲ್ಲಾ ಧರ್ಮಗಳ ಮುಖಂಡರು ಭಾಗವಹಿಸಿದ್ದರು.
-----------------------ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಧರ್ಮಗಳ ಮುಖಂಡರು ತಮ್ಮ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು.
ರಮೇಶ್, ಶಿವಮೊಗ್ಗ.