ಸಾರಾಂಶ
ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ಮಕರ ಸಂಕ್ರಮಣದ ಅಂಗವಾಗಿ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ, ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿಮನೆ ಉಪನ್ಯಾಸ ನೀಡಿದರು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೂ ಸಂಸ್ಕಾರಗಳು ವಿಷಯದ ಕುರಿತು ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಹಿಂದೆ ಪಠ್ಯಗಳಲ್ಲಿ ನೈತಿಕ ಮೌಲ್ಯಗಳನ್ನು ಬೋಧಿಸಲಾಗುತ್ತಿತ್ತು. ಆದರೆ ಈಗ ಜಾತ್ಯಾತೀತತೆಯ ಹೆಸರಲ್ಲಿ ಅವುಗಳನ್ನು ಬದಲಾಯಿಸಲಾಗಿದೆ. ಧಾರ್ಮಿಕ ಕೇಂದ್ರಗಳು ಹಿಂದೂ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸುವ ಮೂಲಕ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಯಕ್ಷಗಾನ ಅರ್ಥಧಾರಿ, ಉಪನ್ಯಾಸಕ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ಮಕರ ಸಂಕ್ರಮಣದ ಅಂಗವಾಗಿ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ಏರ್ಪಡಿಸಲಾದ ವಿಶೇಷೋಪನ್ಯಾಸ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೂ ಸಂಸ್ಕಾರಗಳು ವಿಷಯದ ಕುರಿತು ಅವರು ಮಾತನಾಡಿದರು.
ಬದಲಾವಣೆಯೆಂಬುದು ಬದುಕಿಗೆ ಬರಸಿಡಿಲಾಗಬಾರದು. ತಂಗಾಳಿಯಾಗಬೇಕು. ಬೆಳದಿಂಗಳಾಗಬೇಕು. ಪಠ್ಯಗಳಲ್ಲಿ ಅನ್ಯಮತಗಳನ್ನು ವೈಭವೀಕರಿಸಲಾಗುತ್ತಿದೆ. ಜೊತೆಗೆ ಹಿಂದೂ ಶ್ರದ್ಧಾಕೇಂದ್ರಗಳನ್ನು ಶಿಥಿಲಗೊಳಿಸುವ ಕಾರ್ಯವೂ ಸದ್ದಿಲ್ಲದೆ ನಡೆಯುತ್ತಿದೆ. ಹಿಂದೂಗಳಲ್ಲಿರುವ ಬಡತನ ಮತ್ತಿತರ ದೌರ್ಬಲ್ಯಗಳನ್ನು ಬಂಡವಾಳವನ್ನಾಗಿಸಿಕೊಂಡು ಮತಾಂತರಗೊಳಿಸುವ ಮೂಲಕ ಹಿಂದೂಗಳನ್ನು ದುರ್ಬಲಗೊಳಿಸುವ ಷಡ್ಯಂತ್ರವೂ ನಡೆಯುತ್ತಿದೆ. ಇದನ್ನು ತಡೆಯಬೇಕಾದರೆ ಪ್ರತೀ ಮನೆಗಳಲ್ಲಿ ಹಬ್ಬಗಳನ್ನು ಮಕ್ಕಳೆದುರು ಆಚರಿಸಬೇಕು, ಅದರ ಮಹತ್ವ ತಿಳಿಸಬೇಕು. ಭಾರತೀಯ ಉಡುಗೆ ತೊಡುಗೆಗಳನ್ನು ತೊಡಲು ಪ್ರೇರೇಪಿಸಬೇಕು ಎಂದರು.ಕ್ಷೇತ್ರದ ಆಡಳಿತ ಮೊಕ್ತೇಸರ ಜಯಕರ ಆಚಾರ್ಯ ಉದ್ಘಾಟಿಸಿದರು. ಮೊಕ್ತೇಸರರಾದ ಬಾಲಕೃಷ್ಣ ಆಚಾರ್ಯ, ಶಿವರಾಮ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ ಉಪಸ್ಥಿತರಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ದೀಪಾ ರಾಜೇಶ್ ಆಚಾರ್ಯ ಅತಿಥಿಗಳನ್ನು ಪರಿಚಯಿಸಿದರು. ರಶ್ಮಿತಾ ಅರವಿಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಕರ ಸಂಕ್ರಮಣದ ಅಂಗವಾಗಿ ಉದಯರಾಗ ನಡೆಯಿತು ಹಾಗೂ ಭಕ್ತರಿಗೆ ಎಳ್ಳುಬೆಲ್ಲ ಹಂಚಲಾಯಿತು.