ಕೆರೆಯಿಂದ ಸತ್ತು ಬಿದ್ದ ಮೀನುಗಳ ತೆರವು

| Published : Apr 29 2025, 12:52 AM IST

ಸಾರಾಂಶ

ಶಿಕಾರಿಪುರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಸಂಬಂಧಿಸಿದ ನೀರಾವರಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸತ್ತು ಬಿದ್ದ ಮೀನುಗಳನ್ನು ಕೆರೆಯಿಂದ ತೆರವುಗೊಳಿಸಿ ಸ್ವಚ್ಛತೆ ಮೂಲಕ ಪರಿಸರದಲ್ಲಿನ ದುರ್ವಾಸನೆಯನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಂಡರು.

ಶಿಕಾರಿಪುರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಮೀನುಗಳು ಸಾವನ್ನಪ್ಪುತ್ತಿರುವ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ಸಂಬಂಧಿಸಿದ ನೀರಾವರಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸತ್ತು ಬಿದ್ದ ಮೀನುಗಳನ್ನು ಕೆರೆಯಿಂದ ತೆರವುಗೊಳಿಸಿ ಸ್ವಚ್ಛತೆ ಮೂಲಕ ಪರಿಸರದಲ್ಲಿನ ದುರ್ವಾಸನೆಯನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಂಡರು.

ಪಟ್ಟಣದ ಭ್ರಾಂತೇಶ ಉದ್ಯಾನವನದಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಕಳೆದ ಕೆಲ ದಿನದಿಂದ ಅಸಂಖ್ಯಾತ ಮೀನುಗಳು ನಿತ್ಯ ಸಾವನ್ನಪ್ಪುತ್ತಿದ್ದು, ಇದರಿಂದಾಗಿ ವಾಯುವಿಹಾರಿಗಳು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಸವಿಸ್ತಾರವಾಗಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಹಾಗೂ ನೀರಾವರಿ ಇಲಾಖೆ ಎಂಜಿನೀಯರ್ ಸವಿತಾ ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕೆರೆಯಲ್ಲಿ ಸತ್ತುಬಿದ್ದಿದ್ದ ಹಲವು ಮೀನುಗಳನ್ನು ಮೀನುಗಾರರ ಮೂಲಕ ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಕೆರೆಯ ಸ್ವಚ್ಛತೆ ಕಾಪಾಡಲು ಸೂಚನೆ

ಕೆರೆಯಲ್ಲಿ ಕಳೆದ ಕೆಲ ದಿನದಿಂದ ಮೀನುಗಳು ಸಾವನ್ನಪ್ಪುತ್ತಿದ್ದು, ಕೆರೆಯ ಸುತ್ತಮುತ್ತಲಿನ ಸುಂದರ ಪರಿಸರಕ್ಕೆ ಈ ದಿಸೆಯಲ್ಲಿ ಹಾನಿಯಾಗದಂತೆ ಕೂಡಲೇ ಸ್ವಚ್ಛಗೊಳಿಸಲಾಗುತ್ತಿದೆ. ಸ್ಥಳೀಯ ಕುಮದ್ವತಿ ಮೀನುಗಾರರ ಸ್ವಸಹಾಯ ಸಂಘಕ್ಕೆ ಮೀನುಗಾರಿಕೆಗೆ ಹಕ್ಕನ್ನು ಗುತ್ತಿಗೆ ನೀಡಲಾಗಿದ್ದು, ಕೆರೆಯ ಸ್ವಚ್ಛತೆಯನ್ನು ಕಾಪಾಡಲು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ತಿಳಿಸಿದ್ದಾರೆ.ಪಟ್ಟಣ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ಸಾರ್ವಜನಿಕರು ಉಪಯೋಗಿಸಿದ ಪ್ಲಾಸ್ಟಿಕ್ ಬಾಟಲ್ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಬಿಸಾಡುವ ಜತೆಗೆ ಕೆರೆಗೆ ಒಳ ಹರಿಯುತ್ತಿರುವ ಕೊಳಚೆ ನೀರಿನಿಂದಾಗಿ ಮಲಿನವಾಗಿರುವ ಶಂಕೆಯಿದ್ದು, ನೀರಿನ ಕೆರೆಯ ಸ್ವಚ್ಛತೆ ಬಗ್ಗೆ ಕಟ್ಟುನಿಟ್ಟಿನ ತುರ್ತು ಕ್ರಮ ಕೈಗೊಳ್ಳಲು ಪುರಸಭೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.