ಅಕ್ರಮ ಶೆಡ್‌ಗಳ ‌ತೆರವಿಗೆ ಕೋರ್ಟ್‌ ಆದೇಶ

| Published : Jun 07 2025, 12:05 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಕ್ರಮ ವಾಣಿಜ್ಯ ಶೆಡ್‌ಗಳಲ್ಲಿ ವ್ಯಾಪಾರ ನಡೆಸುತ್ತಿದ್ದು ಇದಕ್ಕೆ ತಹಸೀಲ್ದಾರ್‌, ನ್ಯಾಯಾಲಯ ಬ್ರೇಕ್‌ ಹಾಕಿದ್ದು, ೧೫ ದಿನಗಳೊಳಗೆ ತೆರವು ಮಾಡಬೇಕು ಎಂದು ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅಕ್ರಮ ವಾಣಿಜ್ಯ ಶೆಡ್‌ಗಳಲ್ಲಿ ವ್ಯಾಪಾರ ನಡೆಸುತ್ತಿದ್ದು ಇದಕ್ಕೆ ತಹಸೀಲ್ದಾರ್‌, ನ್ಯಾಯಾಲಯ ಬ್ರೇಕ್‌ ಹಾಕಿದ್ದು, ೧೫ ದಿನಗಳೊಳಗೆ ತೆರವು ಮಾಡಬೇಕು ಎಂದು ಆದೇಶ ನೀಡಿದೆ.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ೧೪ ಮಂದಿ ಅಕ್ರಮ ಶೆಡ್‌ ನಿರ್ಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದು, ಪರಿಸರಕ್ಕೆ ಧಕ್ಕೆ ಆಗುತ್ತದೆ ಎಂದು ಅರಣ್ಯ ಇಲಾಖೆ ತಹಸೀಲ್ದಾರ್‌ಗೆ ಪತ್ರ ಬರೆದು ಮನವಿ ಮಾಡಿತ್ತು.

ಆದೇಶ ಇಂತಿದೆ:

ತಾಲೂಕಿನ ಕಳ್ಳೀಪುರ ಸ.ನಂ.೫೨ ರ ಸರ್ಕಾರಿ ಜಮೀನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿದೆ. ಸದರಿ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ಕಲಂ ೧೦೪ ೫ ಪ್ರಕಾರ ಸದರಿ ವಾಣಿಜ್ಯ ಮಳಿಗೆಗಳನ್ನು ಕಳೆದ ಜೂ.೩ ರಿಂದ ೧೫ ದಿನಗಳೊಳಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪೊಲೀಸ್‌ ಬಂದೋ ಬಸ್ತ್‌ ಪಡೆದುಕೊಂಡು ತೆರವು ಮಾಡಲು ಆದೇಶವನ್ನು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹೊರಡಿಸಿದ್ದಾರೆ.

ಅರಣ್ಯ ಇಲಾಖೆ ದೂರು:ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಗೇಟಿಗೆ ಹೊಂದಿಕೊಂಡಂತೆ ಸುಮಾರು ೩೦೦ ಮೀ. ಅಂತರದವರೆಗೆ ರಸ್ತೆ ಬದಿಯಲ್ಲಿ ಸೀಟ್‌ನಿಂದ ನಿರ್ಮಿತ ಅಂಗಡಿ ಮಳಿಗೆಗಳಿವೆ. ಸದರಿ ಅಂಗಡಿಗಳನ್ನು ತೆರೆಯಲು ಅರಣ್ಯ ಇಲಾಖೆ ಅನುಮತಿ ಪಡೆದಿರುವುದಿಲ್ಲ. ಸೂಕ್ಷ್ಮ ಪರಿಸರ ವಲಯಕ್ಕೆ ಸೇರಿದೆ. ಅನಧಿಕೃತ ಅಂಗಡಿ ಮಳಿಗೆಗೆನ್ನು ತೆರೆದು ಪ್ಲಾಸ್ಟಿಕ್‌ ಬಾಟಲ್‌ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳನ್ನು ಬೀಸಾಡಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಸೂಕ್ಷ್ಮ ಪರಿಸರ ವಲಯದಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆಗಳನ್ನುನಡೆಸುವುದು ಹಾಗೂ ಅಂಗಡಿ ತೆರೆಯವುದುದು ಕಾನೂನು ಬಾಹಿರವಾಗುತ್ತದೆ.

ಅಲ್ಲದೆ, ಅನುಮತಿ ಹೆಸರಲ್ಲಿ ಹೆಚ್ಚು ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಿರುವ ಹೋಂ ಸ್ಟೇ, ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಅಕ್ರಮ ಕಟ್ಟಡ ಕೆಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕು. ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ವ್ಯಾಪಾರಕ್ಕೆ ಬ್ರೇಕ್‌ ಹಾಕಿಸಲು ಮುಂದಾದ ಅರಣ್ಯ ಇಲಾಖೆಯ ಕ್ರಮ ಸರಿಯಾಗಿದೆ. ಆದರೆ ಗೋಪಾಲಸ್ವಾಮಿ ಬೆಟ್ಟದ ವಲಯ ಕಚೇರಿ ಸಮೀಪವೇ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿ ಬದಿಗಳಲ್ಲಿ ಅಕ್ರಮವಾಗಿ ವ್ಯಾಪಾರ ನಡೆಯುತ್ತಿದೆ ಇದಕ್ಕೂ ಅರಣ್ಯ ಇಲಾಖೆ ಬ್ರೇಕ್‌ ಹಾಕಲಿ ಎಂಬುದು ಸಾರ್ವಜನಿಕರ ಮಾತಾಗಿದೆ.