ಸಾರಾಂಶ
ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಕೂಡಲೇ ಪರವಾನಿಗೆ ನೀಡಬೇಕು ಮತ್ತು ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆರ್ಟಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹೊಸದಾಗಿ ಖರೀದಿಸಿ ನೋಂದಣಿಯಾದ ಆಟೋರಿಕ್ಷಾಗಳಿಗೆ ಕೂಡಲೇ ಪರವಾನಿಗೆ ನೀಡಬೇಕು ಎಂದು ಪರವಾನಗಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಆರ್ಟಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಟೋರಿಕ್ಷಾ ಪರವಾನಗಿ ನೀಡುವ ಕುರಿತು ಏರ್ಪಡಿಸಿದ್ದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿ, ನಗರದಲ್ಲಿ ಅನೇಕ ನೋಂದಾಯಿತ ಆಟೋರಿಕ್ಷಾಗಳಿಗೆ ಪರವಾನಗಿ ಬಾಕಿ ಇದ್ದು, ಇವುಗಳಿಗೆ ಪರವಾನಗಿ ನೀಡಬೇಕು. ನಿಯಮದನ್ವಯ 15 ವರ್ಷಗಳಿಗೂ ಮೇಲ್ಪಟ್ಟ ವಾಹನಗಳ ನವೀಕರಣ ಸಾಧ್ಯವಿಲ್ಲ.
ಆನ್ಲೈನ್ನಲ್ಲಿ ಪರವಾನಗಿ ಬಾಕಿ ಕಡಿಮೆ ತೋರಿಸುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಪರವಾನಗಿ ನೀಡಲಾಗುವುದು. ಪರವಾನಗಿ ಪಡೆಯದ ಆಟೋಗಳ ನೋಂದಣಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಹಾಕಿಸುವುದು ಒಳ್ಳೆಯದು. ಸ್ಟಿಕ್ಕರ್ ಅಳವಡಿಕೆ ಕುರಿತಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆದೇಶದಲ್ಲಿನ ಗೊಂದಲದ ಬಗ್ಗೆ ಸಂಬಂಧಿಸಿದ ಆಯುಕ್ತರಿಗೆ ಪತ್ರ ಬರೆದು ಸ್ಪಷ್ಪನೆ ಪಡೆಯಲಾಗುವುದು.
ಹಳೇ ಸ್ಟಿಕ್ಕರ್ ಇರುವವರು ಹೊಸದಾಗಿ ಹಾಕಿಸುವ ಅವಶ್ಯಕತೆ ಇಲ್ಲ ಎಂದರು.ಸಭೆಯಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ನಗರದಲ್ಲಿ ಸುಮಾರು 1200 ನೋಂದಾಯಿತ ಆಟೋಗಳಿದ್ದು, ಅವುಗಳಿಗೆಲ್ಲ ಪರವಾನಗಿ ನೀಡಬೇಕು. ಶೋ ರೂಮ್ನವರು ಆಟೋ ಖರೀದಿ ವೇಳೆ ಪರವಾನಗಿ ಕೊಡಿಸುತ್ತೇವೆಂದು 30 ರಿಂದ 40 ಸಾವಿರದವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಆಟೋ ಚಾಲನೆ ವ್ಯಾಪ್ತಿಯನ್ನು 20 ಕಿಮೀ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಬಿ.ಶಂಕರಪ್ಪ ಮಾತನಾಡಿ, ನಗರದಲ್ಲಿ ಸುಮಾರು 4 ಸಾವಿರ ಆಟೋಗಳು ಚಾಲನೆ ಯಲ್ಲಿವೆ. ಸುಮಾರು 2 ಸಾವಿರ ಆಟೋಗಳ ನವೀಕರಣ ಬಾಕಿ ಇದೆ ಎಂದರು. ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಗರದಲ್ಲಿ ಹೊಸದಾಗಿ ಆಟೋರಿಕ್ಷಾಗಳನ್ನು ಖರೀದಿಸಿ ನೋಂದಣಿ ಮಾಡಿಸಿಕೊಂಡವರಿಗೆ ಪರವಾನಗಿ ನೀಡಬೇಕು ಹಾಗೂ ನವೀಕರಣಕ್ಕೆ ಅರ್ಹರಾದವರಿಗೆ ನವೀಕರಣ ಮಾಡಬೇಕು ಎಂದು ತಿಳಿಸಿದರು. ಆಟೋಗಳಿಗೆ ರೆಟ್ರೊ ಎಲೆಕ್ಟ್ರಿಕ್ ಸ್ಟಿಕ್ಕರ್ ಅಳವಡಿಕೆ ಮಾಡಬೇಕೆಂಬ ನಿಯಮವನ್ನು ತರಲಾಗಿದೆ. ಇದರಿಂದ ಚಾಲಕರಿಗೆ 2000 ರು. ವರೆಗೆ ಖರ್ಚು ಬರುತ್ತದೆ. ಎಫ್ಸಿ ವೇಳೆ ಇದರ ಬಿಲ್ಲನ್ನು ಕೇಳಲಾಗುವುದರಿಂದ ತೊಂದರೆ ಆಗುತ್ತಿದ್ದು, ಸ್ಟಿಕ್ಕರ್ನಿಂದ ವಿನಾಯಿತಿ ಕೊಡಬೇಕು ಎಂದು ಕೆಲ ಆಟೋಚಾಲಕರು ಮನವಿ ಮಾಡಿದರು.
ಡಾ.ಶ್ರೀನಿವಾಸನ್ ಮಾತನಾಡಿ, ರೈಲ್ವೇ ನಿಲ್ದಾಣದಲ್ಲಿ ಆಟೋ ಪಾಥ್ ಇದ್ದರೂ ಅಲ್ಲಿ ನಿಲುಗಡೆ ಮಾಡುತ್ತಿಲ್ಲ. ಬದಲಾಗಿ ಒಂದೆಡೆ ಆಟೋಗಳನ್ನು ಗುಡ್ಡೆ ಹಾಕಿಕೊಳ್ಳುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗಿದೆ. ಬಸ್ಸು, ಲಾರಿ ಇತರೆ ವಾಹನಗಳು ಜೋರಾಗಿ ಹಾರ್ನ್ ಮಾಡುತ್ತಿರುವುದರಿಂದ ಕೆಲವು ರಸ್ತೆಗಳಲ್ಲಿ ಅತ್ಯಂತ ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ಬೆಳಗ್ಗಿನ ಜಾವ 5ರ ನಂತರ ಸಹ ಆಟೋದವರು ಒಂದು ಅರ್ಧ ಚಾರ್ಜ್ ಮಾಡುತ್ತಿದ್ದಾರೆ. ಮೀಟರ್ ಹಾಕುವುದಿಲ್ಲವೆಂದು ದೂರಿದರು.
ಬಸ್ ಬಿಡಲು ಸೂಚನೆ : ರೈಲು ನಿಲ್ದಾಣದಿಂದ ಬಸ್ಸ್ಟ್ಯಾಂಡ್ ಕಡೆ ತೆರಳಲು ಕೆಎಸ್ಆರ್ಟಿಸಿ ಬಸ್ ಕಾರ್ಯಾಚರಣೆಯನ್ನು 10 ದಿನಗಳ ಒಳಗೆ ಆರಂಭಿಸಸಬೇಕು. ಬಸ್ ನಿಲ್ದಾಣ ಸ್ಥಳ ನಿಗದಿ ಕುರಿತು ಆರ್ಟಿಒ , ಆಟೋ, ಬಸ್ ಚಾಲಕರ ಸಂಘ, ಟ್ರಾಫಿಕ್ ಪೊಲೀಸ್, ಕೆಎಸ್ಆರ್ಟಿಸಿ ಯವರು ಸರ್ವೇ ಮಾಡಿ ನಿಗದಿಪಡಿಸುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಅಪರ ಪೊಲೀಸ್ ವರಿಷ್ಟಾಧಿಕಾರಿ ಅನಿಲ್ಕುಮಾರ್ ಭೂಮರಡ್ಡಿ, ಕೆಎಸ್ಆರ್ಟಿಸಿ ಡಿಸಿ ವಿಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಸೇರಿದಂತೆ ಅಧಿಕಾರಿಗಳು, ನಾಗರೀಕ ಹಿತ ರಕ್ಷಣಾ ವೇದಿಕೆಯ ವಸಂತಕುಮಾರ್, ಇತರೆ ಪದಾಧಿಕಾರಿಗಳು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದವರು ಹಾಜರಿದ್ದರು.
ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ ತೆರೆಯಲು ಸೂಚನೆ: ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್ಪೆಕ್ಟರ್ ದಂಡ ವಿಧಿಸಬೇಕು. ಜೋರಾಗಿ ಹಾರ್ನ್ ಕಂಡುಬಂದಲ್ಲಿ ಪೊಲೀಸ್ ಠಾಣೆಯ ಸಂಖ್ಯೆಗೆ ಒಂದು ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದು ಡಾ.ಆರ್.ಸೆಲ್ವಮಣಿ ತಿಳಿಸಿದರು.
ಆಟೋಗಳಲ್ಲಿ ಮೀಟರ್ ಹಾಕಬೇಕು. ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಮಾತ್ರ ಒಂದುವರೆ ಚಾರ್ಜ್ ತೆಗೆದುಕೊಳ್ಳಬೇಕು. ಬಳಿಕ ನಿಗಧಿ ಪಡಿಸಿದ ಚಾರ್ಚ್ ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚುವರಿ ದರ ತೆಗೆದುಕೊಳ್ಳಬಾರದು. ಈ ಸಮಯ ಮತ್ತು ದರದ ಕುರಿತು ರೈಲ್ವೆ ನಿಲ್ದಾಣದ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದು ಬೋರ್ಡ್ ಬರೆಸಿ ಹಾಕಿಸಬೇಕು. ಜೊತೆಗೆ ಮೊದಲನೇ ಹಂತದಲ್ಲಿ ರೈಲ್ವೇ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ಗಳನ್ನು ತೆರೆಯಬೇಕು ಎಂದು ಆರ್ಟಿಒ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.