ಜೀರ್ಣೋದ್ಧಾರಗೊಂಡ ಗುರುಮಠ ರಾಮಚಂದ್ರರಿಂದ ಉದ್ಘಾಟನೆ

| Published : Jun 19 2025, 11:50 PM IST

ಸಾರಾಂಶ

ಗುರು ಮಠ ಈಗ ಭಕ್ತರ ಅನುಕೂಲಕ್ಕೆ ಸಿದ್ಧವಾಗಿದೆ. ದಾನಿಗಳ ಸಹಕಾರದಲ್ಲಿ ಸಾಕಷ್ಟು ಬದಲಾವಣೆ ಕಂಡು ಜೀರ್ಣೋದ್ಧಾರಗೊಂಡಿದೆ. ಇಂದಿನ ದಿನಗಳಲ್ಲಿ ಮನುಷ್ಯರಿಗೆ ಒತ್ತಡದ ಜೀವನ ಆರಂಭವಾಗಿದೆ. ಹಣದ ಹಿಂದೆ ಓಡದೇ ಸಮಾಜಮುಖಿಯಾಗಿ ಕೆಲಸ ಮಾಡಿ ನೆಮ್ಮದಿ ಜೀವನ ಕಾಣಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ದಾನಿಗಳ ಸಹಕಾರದಿಂದ ಗುರುಮಠ ಜೀರ್ಣೋದ್ಧಾರಗೊಂಡಿದೆ ಎಂದು ಮನ್ಮುಲ್ ನಿರ್ದೇಶಕ ಜಿ.ಆರ್.ರಾಮಚಂದ್ರ ಹೇಳಿದರು.

ನಗರದ ಹೊಸಹಳ್ಳಿಯ ಗುರು ಮಠದಲ್ಲಿ ಶ್ರೀ108 ಸದ್ಗುರು ಜ್ಞಾನಾನಂದ ಗುರುಸಂವೀವರ ಗುರುಶಿವಾಯ ಮಹಾಸಂಸ್ಥಾನ ಮಠ ಟ್ರಸ್ಟ್ ಆಯೋಜಿಸಿದ್ದ ಶ್ರೀಸದ್ಗುರು ಲಿಂಗಾನಂದರ ಭಜನಾ ಮಂದಿರ ಮತ್ತು ದಾಸೋಹ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗುರು ಮಠ ಈಗ ಭಕ್ತರ ಅನುಕೂಲಕ್ಕೆ ಸಿದ್ಧವಾಗಿದೆ. ದಾನಿಗಳ ಸಹಕಾರದಲ್ಲಿ ಸಾಕಷ್ಟು ಬದಲಾವಣೆ ಕಂಡು ಜೀರ್ಣೋದ್ಧಾರಗೊಂಡಿದೆ ಎಂದರು.

ಮಠದ ಪೀಠಾಧಿಪತಿ ಸದ್ಗುರು ಗುರುದೇವ ಮಾತನಾಡಿ, ಇಂದಿನ ದಿನಗಳಲ್ಲಿ ಮನುಷ್ಯರಿಗೆ ಒತ್ತಡದ ಜೀವನ ಆರಂಭವಾಗಿದೆ. ಹಣದ ಹಿಂದೆ ಓಡದೇ ಸಮಾಜಮುಖಿಯಾಗಿ ಕೆಲಸ ಮಾಡಿ ನೆಮ್ಮದಿ ಜೀವನ ಕಾಣುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಮನ್ಮುಲ್ ಅಧ್ಯಕ್ಷ ಶಿವಪ್ಪ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸೋಮಶೇಖರ್, ಶಿವಲೀಂಗೇಗೌಡ, ಬೋರೇಗೌಡ, ಬಿ.ಎಂ.ಅಪ್ಪಾಜಪ್ಪ, ಹೊಸಹಳ್ಳಿ ನಾಗೇಶ್, ಗಾಯಕ ಗೊರವಾಲೆ ಚಂದ್ರಶೇಖರ್, ಯಜಮಾನ್ ಬೋರೇಗೌಡ, ಸುರೇಶ್, ಸ್ವಾಮಿ, ಸಿದ್ದಪ್ಪ, ಬಿ.ರೇವಣ್ಣ, ವರುಣ್ ಮತ್ತಿತರರಿದ್ದರು.

ದತ್ತಿ ಪ್ರಶಸ್ತಿಗೆ ಮಳವಳ್ಳಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಆಯ್ಕೆ

ಕನ್ನಡಪ್ರಭ ವಾರ್ತೆ ಮಳವಳ್ಳಿ

ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಲಿಂಗಮ್ಮ ಮತ್ತು ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿಗೆ ಮಳವಳ್ಳಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಆಯ್ಕೆಯಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಸಮಾನ ಮನಸ್ಸಿನ ರೈತರಿಂದ ರಾಸಾಯನಿಕ ಮುಕ್ತ, ವಿಷಮುಕ್ತ ಭೂಮಿ ಉಳಿಸಲು ಪಣತೊಟ್ಟು ಸುಮಾರು 160ಕ್ಕೂ ಹೆಚ್ಚು ರೈತರನ್ನು ಸಂಘಟಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತನ್ನ ವ್ಯಾಪ್ತಿಯನ್ನು ಜಿಲ್ಲಾ ಮಟ್ಟದಲ್ಲಿ ವಿಸ್ತರಿಸಿ ರಾಜ್ಯದ ಅನೇಕ ಕಡೆ ರೈತರನ್ನು ಸಂಪರ್ಕಿಸಿ ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಳವಳ್ಳಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಮಾಡುತ್ತಿದೆ.

ವಿಷ ಮುಕ್ತ ಭೂಮಿ, ವಿಷ ಮುಕ್ತ ಆಹಾರ ಕೃಷಿ, ನೈಸರ್ಗಿಕ ಕೃಷಿ, ಸಹಜ ಕೃಷಿ ಯಾವುದೇ ಆದರೂ ರಾಸಾಯನಿಕ ಮುಕ್ತ ವ್ಯವಸಾಯ ಮಾಡುವುದೇ ಇದರ ಉದ್ದೇಶವಾಗಿದೆ. ಇದರೊಂದಿಗೆ ಮಧ್ಯವರ್ತಿಗಳಿಲ್ಲದೆ ರೈತರು ಬೆಳೆದ ಬೆಳೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವಂತೆ ಅವಕಾಶ ಕಲ್ಪಿಸುವ ಪ್ರಯತ್ನ ಮಾಡುತ್ತಿದೆ.

ಸಂಘದ ಕೃಷಿ ಸೇವೆಯನ್ನು ಪರಿಗಣಿಸಿ ಲಿಂಗಮ್ಮ ಮತ್ತು ಡಾ.ಚಿಕ್ಕಕೊಮಾರಿಗೌಡ ಹಾರೋಕೊಪ್ಪ ದತ್ತಿ ಪ್ರಶಸ್ತಿಯನ್ನು ನೀಡಿ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸುತ್ತಿದೆ. ಸಂಘದ ಕೃಷಿ ಸೇವೆಯನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಇಂಥ ದೊಡ್ಡ ಗೌರವ ನೀಡುತ್ತಿದೆ.

ರಾಜ್ಯದಲ್ಲಿ ರಾಸಾಯನಿಕ ಮುಕ್ತ ಕೃಷಿ ಪದ್ಧತಿ ತರುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಜೂ.23ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸುವುದಾಗಿ ಮಳವಳ್ಳಿ ಸಂಪೂರ್ಣ ಸಾವಯವ ಕೃಷಿಕರ ಸಂಘ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದ್ದಾರೆ.