ಗಜೇಂದ್ರಗಡ: ವೀರಶೈವ ಪರಂಪರೆಯನ್ನು ಪಸರಿಸುವಲ್ಲಿ ರೇಣುಕಾಚಾರ್ಯರ ಪಾತ್ರ ಮಹತ್ತರವಾಗಿದೆ ಎಂದು ವೀರಶೈವ ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ ತಿಳಿಸಿದರು.

ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ವೀರಶೈವ ಜಂಗಾಮಭಿವೃದ್ದಿ ಸಂಘ ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ನಡೆದ ರೇಣುಕಾಚಾರ್ಯರ ಯುಗಮಾನೋತ್ಸವ ಅಂಗವಾಗಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ರಾಷ್ಟ್ರದ ಸನಾತನ ಸಂಸ್ಕೃತಿಯಲ್ಲಿ ದ್ವೈತ, ಅದ್ವೈತ, ವಿಶಿಷ್ಟ ಅದ್ವೈತ ಎಂಬ ಸಿದ್ಧಾಂತಗಳು ಪ್ರಚಲಿತದಲ್ಲಿದ್ದು, ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಜಾತಿ, ಮತ, ಭಾಷೆ, ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ರೇಣುಕಾಚಾರ್ಯರು ಶ್ರಮಿಸಿದ್ದಾರೆ. ಯಾವುದೇ ಜಾತಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸತ್ಯ, ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾತಿ ಗುರು ನೀಡಿದ ಬೋಧಾಮೃತವನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತ್ತಕ್ಕೆ ಏರಲು ಸಾಧ್ಯ ಎಂದರು.ಟಿ.ಎಸ್. ರಾಜೂರ ಮಾತನಾಡಿ, ಯುಗ- ಯುಗಗಳ ನಂಟು ಬೆಸೆದುಕೊಂಡಿರುವ ಪಂಚ ಆಚಾರ್ಯರ ಪರಂಪರೆಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಸರ್ವ ಜನಾಂಗಕ್ಕೂ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಕ್ರಾಂತಿ ಪುರುಷ ಎಂದರು.

ಈ ವೇಳೆ ಗುರುಸಿದ್ದಯ್ಯ ಸೂಗಿರಯ್ಯನಮಠ, ಚಂಬಣ್ಣ ಚವಡಿ, ಮಲ್ಲಯ್ಯಸ್ವಾಮಿ ಗುರುಸ್ಥಲಮಠ, ಶಾಂತಯ್ಯ ಪೂಜಾರ, ಎ.ಪಿ. ಗಾಣಿಗೇರ, ಅಮರಯ್ಯ ಗೌರಿಮಠ, ಶಿವಯ್ಯ ಚಕ್ಕಡಿಮಠ, ಮಹೇಶ ಎಸ್., ಸಂತೋಷ ವಸ್ತ್ರದ, ಶಿವಕುಮಾರ ಶಶಿಮಠ, ಮಾಂತಯ್ಯ ಕಪ್ಲಿಮಠ, ಬಸಯ್ಯ ಗೊಂಗಡಶೆಟ್ಟಿಮಠ, ಎಸ್.ಬಿ. ಹಿಡಕಿಮಠ, ಸಿದ್ದು ಗೊಂಗಡಶೆಟ್ಟಿಮಠ, ಶಿವು ಚಂದ್ರಗಿರಿಮಠ ಸೇರಿ ಇತರರು ಇದ್ದರು.ಪ್ರತಿಭಟನೆ ತಹಸೀಲ್ದಾರ್ ಅವರು ವಾರದ ಹಿಂದೆ ಪೂರ್ವಭಾವಿ ಸಭೆ ನಡೆಸಿ ಎಲ್ಲ ಸರ್ಕಾರಿ ಶಾಲಾ- ಕಾಲೇಜು ಹಾಗೂ ಕಚೇರಿಗಳಲ್ಲಿ ಸರ್ಕಾರದ ಆದೇಶದಂತೆ ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಆಚರಿಸುವಂತೆ ಆದೇಶ ಹೊರಡಿಸಿದರು.

ತಾಲೂಕಿನ ಶಿಕ್ಷಣಾಧಿಕಾರಿ ತಾಲೂಕಿನ ಯಾವುದೇ ಶಾಲೆಗಳಿಗೂ ಸುತ್ತೋಲೆ ಕಳಿಸದ ಪರಿಣಾಮ ಯಾವ ಶಾಲೆಯಲ್ಲಿಯೂ ಜಯಂತಿ ಆಚರಿಸಿಲ್ಲ ಹಾಗೂ ಪ್ರತಿವರ್ಷವೂ ಶಿಕ್ಷಣ ಇಲಾಖೆಯಿಂದ ಇಂತಹ ನಿರ್ಲಕ್ಷ್ಯ ಪದೇ ಪದೇ ನಡೆಯುತ್ತಿರುವುದರಿಂದ ಬಿಇಒ ಅವರನ್ನು ಅಮಾನತಯಗೊಳಿಸಬೇಕೆಂದು ಆಗ್ರಹಿಸಿ ವೀರಶೈವ ಜಂಗಾಮಭಿವೃದ್ದಿ ಸಂಘ ಹಾಗೂ ವೀರಶೈವ ಲಿಂಗಾಯತ ಸಮಾಜದ ಪಟ್ಟುಹಿಡಿದು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬಿಇಒ ವಿರುದ್ಧ ಧಿಕ್ಕಾರ ಕೂಗುವುದರ ಮೂಲಕ ಅಮಾನತು ಮಾಡುವಂತೆ ಪಟ್ಟು ಹಿಡಿದರು. ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಮಧ್ಯ ಪ್ರವೇಶಿಸಿ ತಹಸೀಲ್ದಾರ್ ಸೂಚನೆಯಂತೆ ಆದೇಶ ಹೊರಡಿಸದ ಬಿಇಒ ವಿರುದ್ಧ ನೋಟಿಸ್ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.