ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ಇರುವಾಗ ತಮಿಳು ನಾಡಿಗೆ 15 ದಿನಗಳ ಕಾಲ ಪ್ರತಿದಿನ 3500 ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶ ಅಮಾನವೀಯ. ಸರ್ಕಾರ ಯಾವುದೇ ಕಾರಣಕ್ಕೂನೀರು ಬಿಡಬಾರದು ಎಂದು ಒತ್ತಾಯಿಸಿ ವಿಜಯಸೇನೆ ಜಿಲ್ಲಾ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ವಿಜಯಸೇನೆಯ ಆಟೋ ಘಟಕ ಕಾರ್ಯಕರ್ತರು ಆಟೋಗಳನ್ನು ಪ್ರತಿಭಟನೆಗೆ ತಂದಿದ್ದರು.ಈ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಗಂಗಾಧರ್, ಈ ಕೆ.ಆರ್.ಎಸ್‌ನಲ್ಲಿ ಶೇಕಡ 33 ರಷ್ಟು ಮಾತ್ರ ನೀರಿದೆ.ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಬೇಕು ಎಂದು ಹೇಳಿರುವುದು ಸರಿಯಲ್ಲ ಎಂದರು.

ಪ್ರಸ್ತುತ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಎದುರುಸುತ್ತಿರುವ ಹೊತ್ತಿನಲ್ಲಿ ತಮಿಳುನಾಡು ಭಾಗದ ಬೆಳೆಗಳಿಗೆ ಪ್ರತಿನಿತ್ಯ 3500 ಕ್ಯೂಸೆಕ್ ನೀರು ಬಿಡುವಂತೆ ಆದೇಶಿಸಿರುವುದು ದುರಾದೃಷ್ಟಕರ. ಕುಡಿಯುವ ನೀರು ಮೊದಲ ಆದ್ಯತೆಯಾಗಿದ್ದು ಈಗಾಗಲೇ ಬೆಳದ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ ಎಂದರು.

ಕಾವೇರಿ ಕೊಳ್ಳದ ರೈತ ರಕ್ಷಣೆ ಮಾಡುವುದು ಕೂಡ ರಾಜ್ಯ ಸರ್ಕಾರದ ಕರ್ತವ್ಯ.ತಕ್ಷಣ ಮರು ಪರಿಶೀಲನಾ ಅರ್ಜಿಯನ್ನು ಟ್ರಿಬ್ಯುನಲ್ ಮುಂದೆ ಸಲ್ಲಿಸಿ ಸಮರ್ಥ ರೀತಿಯಲ್ಲಿ ವಾದ ಮಂಡಿಸಬೇಕು, ಕಾವೇರಿ ನೀರು ನಿಯಂತ್ರಣ ಸಮಿತಿ ಮಾಡಿರುವ ಶಿಫಾರಸ್ಸನ್ನು ಒಪ್ಪಿ ಕಾವೇರಿ ನೀರು ತಮಿಳು ನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ವಿಜಯಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್, ಉಪಾಧ್ಯಕ್ಷ ನಯನ್‌ಕುಮಾರ್, ಆಟೋ ಘಟಕ ಜಿಲ್ಲಾಧ್ಯಕ್ಷ ತಿಪ್ಪೇಶ್, ನಗರ ಅಧ್ಯಕ್ಷ ರಾಕೇಶ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ.ರುದ್ರೇಶ್, ಕಾರ್ಯಾಧ್ಯಕ್ಷ ಎಸ್. ರುದ್ರೇಶ್, ಪ್ರಧಾನ ಕಾರ್ಯದರ್ಶಿ ಯೋಗೀಶ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಯಾಸ್ಮೀನ್ ತಾಜ್, ನಗರ ಅಧ್ಯಕ್ಷೆ ಕಾವ್ಯ ಶಿವಶಂಕರ್, ಮುಖಂಡರಾದ ಮೋಹನ್, ತಿಮ್ಮರಾಜು, ಪವನ್, ಅಂಬಿಕಾ ಮಹೇಶ್, ಕನ್ನಿಕಾಂಬ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.