ಚೆಂಡಿಯಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಕಾರವಾರಚೆಂಡಿಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಪರವಾನಿಗೆಯಿಲ್ಲದೆ ಅನಧಿಕೃತವಾಗಿ ನಡೆಸುತ್ತಿರುವ ಸಿಗಡಿ ಕೃಷಿ ಹೊಂಡ ಸ್ಥಳಕ್ಕೆ ಭೇಟಿ ನೀಡಿ, ಸಿಗಡಿ ಕೃಷಿಗೆ ಸಂಬಂಧಿಸಿ ಸೂಕ್ತ ದಾಖಲೆ ಸಲ್ಲಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಆಡಳಿತಾಧಿಕಾರಿ ಪ್ರಶಾಂತ ಎಸ್.ಎಚ್. ಸೂಚಿಸಿದರು.
ಚೆಂಡಿಯಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಂದಯ ಅಧಿಕಾರಿ ಮತ್ತು ಇತರೆ ಪಂಚಾಯಿತಿ ಸಿಬ್ಬಂದಿಗಳೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವ ಬಗ್ಗೆ ಆ ಭಾಗದ ಗ್ರಾಮಸ್ಥರಲ್ಲಿ ಸ್ಥಾನಿಕವಾಗಿ ಚರ್ಚಿಸಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ನಿರ್ಮಾಣ ಮಾಡುವ ಬಗ್ಗೆ ವಿಶ್ವಾಸ ಮೂಡಿಸಿ, ಸಾರ್ವಜನಿಕರು ನೀಡಿದ ತಕರಾರು ಅರ್ಜಿಗಳನ್ನು ಹಾಗೂ ಇತರೆ ಕುಂದು ಕೊರತೆ ಅರ್ಜಿಗಳನ್ನು ಪರಿಶೀಲಿಸಿದರು.
ಬೇಸಿಗೆಗಾಲದಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಿ, ಮಳೆಗಾಲದಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರವಾಹ ಉಂಟಾಗುವ ಸಂಭವನೀಯ ಸ್ಥಳಗಳನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚನೆ ನೀಡಿದರು.
ರಾ.ಹೆ. 66ರ ಎರಡು ಬದಿಯಲ್ಲಿರುವ ಚರಂಡಿಗಳಲ್ಲಿರುವ ಮಣ್ಣನ್ನು ಹೂಳೆತ್ತುವ ಕಾಮಗಾರಿಗನ್ನು ಕೈಗೊಳ್ಳಲು ಸಂಬಂಧಪಟ್ಟ ಐಆರ್ಬಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಚೆಂಡಿಯಾ ವ್ಯಾಪ್ತಿಯ ಒಕ್ಕಲಕೇರಿಯಲ್ಲಿ ಉಂಟಾದ ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.