ಸಾರಾಂಶ
ಕೋಲಾರ; ಜಿಲ್ಲಾಡಳಿತದಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಧ್ವಜಾರೋಹಣ ನೆರವೇರಿಸಿದರು. ಗೌರವ ಸಲ್ಲಿಸಿದ ನಂತರ ಸಚಿವ ಭೈರತಿ ಸುರೇಶ್, ಡಿಎಆರ್, ನಾಗರಿಕ ಪೊಲೀಸ್ ತಂಡ, ಎಇಎಸ್ ಪಬ್ಲಿಕ್ ಶಾಲೆ, ಗೃಹ ರಕ್ಷಕ ದಳ, ಬಾಲಕರ ಎನ್ಸಿಸಿ, ಬಾಲಕಿಯರ ಎನ್ಸಿಸಿ, ಮಹಾ ಸಮಾಜ, ಶುಬಲ ವಿದ್ಯಾಲಯ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಭಾರತ ಸೇವಾದಳ, ಬಿಎಂಎಸ್ ಬಾಲಕಿಯರ ತಂಡಗಳ ಪಥಸಂಚಲನದಿಂದ ಗೌರವ ಸ್ವೀಕರಿಸಿದರು. ಗಣರಾಜ್ಯೋತ್ಸವ ಸಂದೇಶ ಸಾರಿದ ಸಚಿವರು, ದೇಶದ ಇತಿಹಾಸದಲ್ಲಿ ಜ.೨೬ ಐತಿಹಾಸಿಕ ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ದಿನವಾಗಿದೆ. ದೇಶವನ್ನು ಗಣತಂತ್ರ ರಾಷ್ಟ್ರವನ್ನಾಗಿಸಲು ಸಂವಿಧಾನದ ಕರಡು ಪ್ರತಿಯನ್ನು ಅಂಗೀಕರಿಸಿ, ಆನಂತರ ಜಾರಿಗೆ ತರಲಾಯಿತು.ಅನೇಕ ಮಹಾನ್ ನಾಯಕರು ಈ ದೇಶದ ಅಭಿವೃದ್ಧಿಗಾಗಿ ಬಹಳ ಶ್ರಮಪಟ್ಟಿದ್ದಾರೆ ಎಂದು ವಿವರಿಸಿದರು. ಗಣರಾಜ್ಯೋತ್ಸವದ ಸಂದೇಶದ ನಂತರ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಸಚಿವರು, ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿದರು. ಶಾಸಕ ಕೊತ್ತೂರು ಜಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಪಂ ಸಿಇಎ ಪದ್ಮ ಬಸವಂತಪ್ಪ, ಎಸ್ಪಿ ಎಂ.ನಾರಾಯಣ, ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ ಇದ್ದರು.