ಪ್ರೀತಂ ಗೌಡಗೆ ಸಹಕಾರ ನೀಡಲು ಮನವಿ: ಸಂಸದ ಪ್ರಜ್ವಲ್ ರೇವಣ್ಣ

| Published : Mar 10 2024, 01:31 AM IST

ಸಾರಾಂಶ

ಪ್ರಥಮ ಬಾರಿಗೆ ಪ್ರೀತಂ ಗೌಡರ ಜತೆ ಮಾತನಾಡುವುದಾಗಿ ಹೇಳಿಕೆ ಕೊಡುವುದರ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಸ್ನೇಹದ ಹಸ್ತ ಚಾಚಿದ್ದಾರೆ. ಹಾಸನದ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ಟಿಕೆಟ್‌ ಘೋಷಣೆ ನಂತರ ಎರಡು ಪಕ್ಷ ಸೇರಿ ಸಭೆ । 15ರೊಳಗೆ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ

ಕನ್ನಡಪ್ರಭ ವಾರ್ತೆ ಹಾಸನ

ಪ್ರಥಮ ಬಾರಿಗೆ ಪ್ರೀತಂ ಗೌಡರ ಜತೆ ಮಾತನಾಡುವುದಾಗಿ ಹೇಳಿಕೆ ಕೊಡುವುದರ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಸ್ನೇಹದ ಹಸ್ತ ಚಾಚಿದ್ದಾರೆ.

ನಗರದ ಸಂಸದರ ನಿವಾಸದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ‘ನಾನು ಐದು ವರ್ಷ ಸಂಸದನಾಗಿ ವಿಶೇಷವಾದ ಒಳ್ಳೆಯ ಅನುಭವ ನೀಡಿದೆ. ಎಲ್ಲಾ ಕಡೆ ಹೋಗಲು ಆಗಲ್ಲ. ಆದರೂ ಬಹುತೇಕ ಭೇಟಿ ನೀಡಿ ಕೆಲಸ ಮಾಡಿದ್ದೀನಿ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯವಾಗದ ರೀತಿ ಕೆಲಸ ಮಾಡಿದ್ದೀನಿ. ಎಲ್ಲರೂ ಬಹಳಷ್ಟು ಅನುಭವ ಕೊಟ್ಟಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

‘ಟಿಕೆಟ್ ಘೋಷಣೆ ಆದ ಮೇಲೆ ಎರಡು ಪಕ್ಷದವರು ಸೇರಿ ಎಲ್ಲಾ ಭಾಗದಲ್ಲೂ ಸಭೆ ಮಾಡುತ್ತೇವೆ. ಕಡೂರಿನಲ್ಲಿ ಬೆಳ್ಳಿಪ್ರಕಾಶ್ ಅಣ್ಣನ ಜತೆ ಮಾತನಾಡಿದ್ದೇನೆ. ಬೇಲೂರು ಶಾಸಕ ಎಚ್.ಕೆ. ಸುರೇಶಣ್ಣ, ಸಕಲೇಶಪುರ ಶಾಸಕ ಸಿಮೆಂಟ್ ಮಂಜಣ್ಣನ ಜತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರೀತಂ ಗೌಡರ ಬಳಿಯೂ ಮಾತನಾಡುತ್ತೇನೆ. ಅರಕಲಗೂಡು ಯೋಗರಮೇಶ್ ಅಣ್ಣ ಜತೆ ಮಾತನಾಡುತ್ತೇನೆ. ಎಲ್ಲರ ಜೊತೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಸ್ನೇಹದ ಹಸ್ತ ಚಾಚಿದರು.

‘ಮೊದಲು ಸ್ಥಳೀಯ ಮಟ್ಟದಲ್ಲಿ ಸಭೆ ಮಾಡುತ್ತೇವೆ. ನಂತರ ದೊಡ್ಡಮಟ್ಟದ ರ್‍ಯಾಲಿ ಮಾಡುತ್ತೇವೆ. ಯಡಿಯೂರಪ್ಪ ಅವರು, ವಿಜಯೇಂದ್ರ ಅಣ್ಣ, ಕುಮಾರಣ್ಣ ಅವರೊಡನೆ ಪಕ್ಷದ ಪೂರ್ವಭಾವಿ ಸಭೆಗಳು ನಡೆದಿವೆ. ಈಗ ಜಂಟಿ ಪೂರ್ವಭಾವಿ ಸಭೆಗಳು ನಡೆಯಬೇಕು. ಮಾ.೧೨ ರಿಂದ ೧೫ರ ಒಳಗೆ ಚುನಾವಣೆ ಘೋಷಣೆ ಆಗಬಹುದು. ದೇವೇಗೌಡರು ಎಲ್ಲಾ ಕಡೆ ಪ್ರಚಾರ ಮಾಡುತ್ತಾರೆ. ದೇವೇಗೌಡರಿಗೆ ಹೆಚ್ಚು ಅನುಭವವಿದೆ. ಎಲ್ಲದನ್ನೂ ಸರಿ ಮಾಡುವ ಕೆಲಸ ಮಾಡಲಾಗುವುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನೂ ಐದು ವರ್ಷದಲ್ಲಿ ಜಿಲ್ಲೆಯ ಎಲ್ಲಾ ಭಾಗಕ್ಕೂ ಹೋಗಿದ್ದ ಸಂದರ್ಭದಲ್ಲಿ ಎಲ್ಲಾ ಕಡೆ ಚೆನ್ನಾಗಿ ಪ್ರತಿಕ್ರಿಯೆ ಬಂದಿದ್ದು, ಎಲ್ಲಾ ಕಡೆ ಒಳ್ಳೆಯ ವಿಶ್ವಾಸ ಇದೆ. ಎರಡು ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ನಾವು ಖಂಡಿಯವಾಗಿಯೂ ಒಳ್ಳೆಯ ಲೀಡ್‌ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಗೆಲ್ಲುತ್ತೇವೆ. ಮಾಹಿತಿ ಪ್ರಕಾರ ಭಾನುವಾರ ಅಥವಾ ಸೋಮವಾರ ಬಿಜೆಪಿ-ಜೆಡಿಎಸ್ ಟಿಕೆಟ್ ಘೋಷಣೆ ಮಾಡುವರು. ಇನ್ನೆರೆಡು, ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಘೋಷಣೆ ಮಾಡುತ್ತಾರೆ. ಜೆಡಿಎಸ್‌ಗೆ ಎಷ್ಟು ಟಿಕೆಟ್ ಕೊಡಬೇಕು ಎಂದು ಎರಡು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಟಿಕೆಟ್ ಕೊಟ್ಟ ಮೇಲೆ ಕೆಲಸ ಮಾಡೋಣ. ಈಗಾಗಲೇ ಒಂದು ರೌಂಡ್ ಎಲ್ಲಾ ಪಂಚಾಯಿತಿಗೆ ಹೋಗಿದ್ದೀನಿ. ಹಳ್ಳಿಗಳಿಗೆ ಭೇಟಿ ನೀಡಿದ್ದೀನಿ. ಒಂದು ರೌಂಡ್ ಪ್ರಚಾರ ಕೂಡ ಆಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದೀನಿ’ ಎಂದು ಹೇಳಿದರು.

ಕೆಲಸ ಮಾಡದ ಶ್ರೇಯಸ್‌ಗೆ ಟಿಕೆಟ್

ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್‌ಗೆ ಟಿಕೆಟ್ ಘೋಷಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕೆಲಸ ಮಾಡಿರುವವರು ಬಂದರೆ ಮಾತನಾಡಬಹುದು. ಕೆಲಸ ಮಾಡದೇ ಸುಮ್ಮನೆ ಓಡಾಡಿಕೊಂಡು ಬರುವವರ ಬಗ್ಗೆ ನಾನೇನು ಮಾತನಾಡಲಿ?’ ಎಂದು ಹೇಳಿದರು.

ಮಂಡ್ಯ ಹಾಗೂ ಕೋಲಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಉತ್ತರಿಸಿ, ‘ಅಲ್ಲಿ ಯಾರೂ ನಿಲ್ಲುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಕುಮಾರಣ್ಣ ಸ್ಪರ್ಧಿಸಿದರೆ ಒಳ್ಳೆಯದೇ ಆಗುತ್ತದೆ. ಕುಮಾರಣ್ಣ ನಿಂತರೆ ಹಳೇಮೈಸೂರು ಭಾಗದಲ್ಲಿ ಒಂದು ಅಲೆ ಏಳುತ್ತದೆ. ಕುಮಾರಸ್ವಾಮಿ ಸ್ಪರ್ಧೆಯನ್ನು ಸ್ವಾಗತಿಸುತ್ತೇನೆ ಎಂದರು.ಪ್ರಜ್ವಲ್‌ ರೇವಣ್ಣ.