ಸಾರಾಂಶ
ಕನಕಗಿರಿ:
ತಾಲೂಕಿನ ಬಸರಿಹಾಳ ಗ್ರಾಮದ ಗುಡ್ಡದ ಪ್ರದೇಶದ ಬಂಡೆಯೊಳಗೆ ಸಿಲುಕಿ ನರಳಾಡುತ್ತಿದ್ದ ಕರಡಿ ಮರಿಯೊಂದನ್ನು ಮಂಗಳವಾರ ಸ್ಥಳೀಯ ಯುವಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.ಗುಡ್ಡಕ್ಕೆ ಹೊಂದಿಕೊಂಡಿರುವ ವೀರೇಶ ಎಂಬ ರೈತನ ಜಮೀನಿನ ಪಕ್ಕದಲ್ಲಿ ಕರಡಿ ಮರಿ ನೋವಿನಿಂದ ಚೀರುತ್ತಿರುವುದು ಕೇಳಿದೆ. ಆಗ ರೈತ ಅಲ್ಲಿಗೆ ಹೋಗಿ ನೋಡಿದಾಗ ಕಲ್ಲು ಬಂಡೆಯಲ್ಲಿ ಸಿಲುಕಿರುವುದು ಗೊತ್ತಾಗಿದೆ. ಆದರೆ, ಅದರ ಪಕ್ಕದಲ್ಲಿಯೇ ಅದರ ತಾಯಿ ಇನ್ನೊಂದು ಮರಿಯೊಂದಿಗೆ ಕುಳಿತುಕೊಂಡಿದೆ. ಆಗ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ತಾಯಿಯನ್ನು ಓಡಿಸಿ ಕಲ್ಲು ಬಂಡೆಯಲ್ಲಿ ಸಿಲುಕಿರುವ ಮರಿಯನ್ನು ರಕ್ಷಿಸಿ ಆರೈಕೆ ಮಾಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಗಾಯಗೊಂಡಿರುವ ಕರಡಿ ಮರಿಗೆ ಪಶು ಸಂಗೋಪನಾ ಇಲಾಖೆ ವೈದ್ಯರು ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಮಲಾಪುರದ ಪ್ರಾಣಿ ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.
ಗಾಯಗೊಂಡಿರುವುದು ಏಳೆಂಟು ತಿಂಗಳ ಗಂಡು ಕರಡಿಯಾಗಿದೆ. ಎರಡ್ಮೂರ ದಿನಗಳ ಹಿಂದೆಯೇ ಕಲ್ಲು ಬಂಡೆಯಲ್ಲಿ ಸಿಲುಕಿದ್ದರಿಂದ ನಿಶಕ್ತಿಯಿಂದ ಬಳಲುತ್ತಿದೆ. 6 ದಿನ ಚಿಕಿತ್ಸೆ ಅವಶ್ಯವಿದೆ ಎಂದು ಪಶು ವೈದ್ಯೆ ಹೀನಾ ಫಾತಿಮಾ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.ಈ ವೇಳೆ ವಲಯ ಅರಣ್ಯಾಧಿಕಾರಿ ಸುಭಾಶ್ಚಂದ್ರ ನಾಯಕ, ಉಪ ವಲಯ ಅರಣ್ಯಾಧಿಕಾರಿ ಎಂ.ಡಿ. ಸುಲೇಮಾನ್, ಪಶು ವೈದ್ಯೆ ಶ್ವೇತಾ, ಗಸ್ತು ಅರಣ್ಯ ಪಾಲಕರಾದ ಶಿವಶರಣ ಕೋಳಿ, ಮಹಾಂತೇಶ ಕುಂಬಾರ, ಗ್ರಾಮಸ್ಥರಾದ ಶರಣಪ್ಪ ನೆಟೆಗುಡ್ಡ, ಯಂಕಪ್ಪ, ಹಿರೇ ಸೋಮನಾಥ, ಶಂಕ್ರಪ್ಪ, ಸಣ್ಣ ಸೋಮನಾಥ, ಯಂಕಪ್ಪ ಬಾವಿಕಟ್ಟಿ, ನಾಗಪ್ಪ ನೆಟೆಗುಡ್ಡ ಇದ್ದರು.