ಸಾರಾಂಶ
ಕಬ್ಬಿನ ತೋಟದಲ್ಲಿ ಅಡಗಿದ್ದ ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳಪುರ ಗ್ರಾಮದ ರೈತರೊಬ್ಬರ ಕಬ್ಬಿನ ತೋಟದಲ್ಲಿ ನಡೆದಿದೆ.
ಗುಂಡ್ಲುಪೇಟೆ: ಕಬ್ಬಿನ ತೋಟದಲ್ಲಿ ಅಡಗಿದ್ದ ಎರಡು ಚಿರತೆ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದ ಘಟನೆ ತಾಲೂಕಿನ ಹಂಗಳಪುರ ಗ್ರಾಮದ ರೈತರೊಬ್ಬರ ಕಬ್ಬಿನ ತೋಟದಲ್ಲಿ ನಡೆದಿದೆ.
ಹಂಗಳಪುರ ಗ್ರಾಮದ ಬಳಿಯ ಹಂಗಳ ಗ್ರಾಮದ ರೈತ, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ಗೆ ಸೇರಿದ ಕಬ್ಬಿನ ತೋಟದಲ್ಲಿ ಕಬ್ಬು ಕಟಾವು ಮಾಡುವಾಗ ಚಿರತೆ ಮರಿಗಳು ಕಾಣಿಸಿಕೊಂಡಿವೆ. ಚಿರತೆ ಮರಿಗಳಿರುವುದನ್ನು ಕಂಡು ಹೌಹಾರಿದ ಕಬ್ಬು ಕಟಾವಿಗೆ ಬಂದ ಕೂಲಿ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಗುಂಡ್ಲುಪೇಟೆ ಬಫರ್ ಜೋನ್ ವಲಯ ಆರ್ಎಫ್ಒ ಕೆ.ಪಿ.ಸತೀಶ್ ಕುಮಾರ್ ಅರಣ್ಯ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ.ಕಬ್ಬಿನ ತೋಟದಲ್ಲಿದ್ದ ಸುಮಾರು ಒಂದೂವರೆ ತಿಂಗಳ ಚಿರತೆಯ ಎರಡು ಹೆಣ್ಣು ಮರಿಗಳನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ ಎಂದು ಆರ್ಎಫ್ಒ ಕೆ.ಪಿ.ಸತೀಶ್ ಕುಮಾರ್ ತಿಳಿಸಿದ್ದಾರೆ.ಕಬ್ಬಿನಗದ್ದೆಯಲ್ಲಿ ತಾಯಿ ಚಿರತೆ ಇರುವ ಕಾರಣದಿಂದಲೇ ಚಿರತೆ ಮರಿಗಳು ಸಿಕ್ಕಿವೆ. ತಾಯಿ ಚಿರತೆ ಆಹಾರ ಹುಡುಕಾಟಕ್ಕೆ ಹೋಗಿರಬಹುದಾಗಿದೆ. ಕಬ್ಬಿನಗದ್ದೆಯಲ್ಲಿ ಬೋನು ಇರಿಸಿ ಇಡೀ ರಾತ್ರಿ ಕಾವಲು ಕಾಯ್ದು ತಾಯಿ ಚಿರತೆ ಸಿಕ್ಕರೆ ಮರಿ ಚಿರತೆ ಜೊತೆಗೆ ಬಿಡಲು ಪ್ರಯತ್ನಿಸುವುದಾಗಿ ಹೇಳಿದರು. ಒಂದೆರಡು ದಿನ ಕಾಯ್ದರು ತಾಯಿ ಚಿರತೆ ಬರದೆ ಇದ್ದರೆ ಮೈಸೂರು ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಸಿಕ್ಕಿರುವ ಚಿರತೆ ಮರಿಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದರು.