ನಮ್ಮ ಜ್ಞಾನ ಹೆಚ್ಚಿಸಲು ಮತ್ತು ಹೊಸ ವಿಷಯ ಕಂಡು ಹಿಡಿಯಲು ಮಾಡುವ ಒಂದು ವ್ಯವಸ್ಥಿತ ಪ್ರಯತ್ನವಾಗಿದೆ.

ಕನಕಗಿರಿ: ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸಪ್ರದ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಸಂಶೋಧನಾ ಘಟಕದಿಂದ ಸಂಶೋಧನಾ ವಿಧಾನದಲ್ಲಿ ಹೊಸ ಪ್ರವೃತ್ತಿಗಳು ವಿಷಯದ ಕುರಿತಾಗಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ಕಾರ್ಯಕ್ರಮ ಗುರುವಾರ ನಡೆಯಿತು.

ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಪ್ರೊ.ಶೋಭಾ ಜಿ ಮಾತನಾಡಿ, ಯಾವುದೇ ದೇಶ ಅಥವಾ ಸಮಾಜದ ಪ್ರಗತಿ ಅಲ್ಲಿ ನಡೆಯುವ ಸಂಶೋಧನೆಗಳ ಗುಣಮಟ್ಟದ ಮೇಲೆ ಆಧಾರಿತವಾಗಿರುತ್ತದೆ. ಸಂಶೋಧನೆಯಿಂದ ಹೊಸ ಉದ್ಯಮ ಸೃಷ್ಟಿಯಾಗುತ್ತವೆ. ಉದ್ಯೋಗಾವಕಾಶ, ದೇಶದ ಉತ್ಪಾದನಾ ಸಾಮರ್ಥ್ಯ ವೃದ್ಧಿಯಾಗುತ್ತವೆ. ಪದವಿ ಹಂತದಲ್ಲೇ ವಿದ್ಯಾರ್ಥಿಗಳು ಸಂಶೋಧನೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಹಾಗೂ ದೇಶದ ಒಂದು ಮೌಲ್ಯಯುತ ಆಸ್ತಿಯನ್ನಾಗಿ ರೂಪಿಸಬಲ್ಲದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಸಹಕಾರಿಯಾಗಿದೆ ಎಂದರು.

ಕೊಪ್ಪಳ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಕೆ.ಸಿ. ಕುಲಕರ್ಣಿ ಮಾತನಾಡಿ, ನಮ್ಮ ಜ್ಞಾನ ಹೆಚ್ಚಿಸಲು ಮತ್ತು ಹೊಸ ವಿಷಯ ಕಂಡು ಹಿಡಿಯಲು ಮಾಡುವ ಒಂದು ವ್ಯವಸ್ಥಿತ ಪ್ರಯತ್ನವಾಗಿದೆ. ಮಾನವನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಂಬರುದ ದಿನಗಳಲ್ಲಿ ಉಂಟಾಗಬಹುದಾದ ಆಹಾರ, ಜನಸಂಖ್ಯೆ ಸ್ಫೋಟ, ಸಾಂಕ್ರಾಮಿಕ ರೋಗ ಎದುರಿಸಲು ಸಂಶೋಧನೆ ಸಹಕಾರಿಯಾಗಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಬಜರಂಗಬಲಿ, ಐಕ್ಯೂಎಸಿ ಘಟಕದ ಸಂಯೋಜಕ ರಕ್ಷಿತ್ ಎ.,ಕಾಲೇಜಿನ ಭೂದಾನಿ ಬಸವರಾಜ್ ಗುಗ್ಗಳಶೆಟ್ರ ಮಾತನಾಡಿದರು.

ಸಂಶೋಧನೆಯಲ್ಲಿ ಹೊಸ ಪ್ರವೃತ್ತಿಗಳು ವಿಷಯದ ಮೊದಲ ಕಮ್ಮಟದಲ್ಲಿ ನೆಲ್ಲೂರಿನ (ಆಂಧ್ರಪ್ರದೇಶ) ಎನ್‌ಸಿಆರ್‌ಟಿ ಸ್ಥಾನಿಕ ಸಂಸ್ಥೆಯ ಸಹ ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಕೆ. ಬಡಿಗೇರ್ ಉಪನ್ಯಾಸ ನೀಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಫೀಸ್ ಬಾನು ಕಮ್ಮಟದ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಸಂಯೋಜಕ ಡಾ.ವೀರೇಶ ಕೆಂಗಲ್, ಸಾಂಸ್ಕೃತಿಕ ಘಟಕದ ಸಂಯೋಜಕಿ ಲಲಿತಾ ಎನ್.ಕೆ, ಹಿರಿಯ ಉಪನ್ಯಾಸಕ ಅಮರೇಶ್ ವಿ.ಅಧ್ಯಾಪಕ ಫರ್ಹಾನ್ ತಾಜ್, ರಾಘವೇಂದ್ರ, ಸರ್ವಮಂಗಳಮ್ಮ ಹಾಗೂ ಬಾಲಪ್ಪ ಕುರಿ ಇತರರಿದ್ದರು.