ಅಂಬೇಡ್ಕರ್‌ ಆಲೋಚನೆ ಬಿತ್ತಬೇಕು

| Published : May 16 2025, 02:38 AM IST

ಸಾರಾಂಶ

ಇಂದಿನ ತುರ್ತಿನ ಕಾಲದಲ್ಲಿ ನಮ್ಮ ಒಂದೇ ಒಂದು ನಂಬಿಕೆ ಆಶಾಕಿರಣ ಎಂದರೆ ಅದು ನಮ್ಮ ಸಂವಿಧಾನ.

ಕನ್ನಡಪ್ರಭ ವಾರ್ತೆ ಮೈಸೂರು

ಅಂಬೇಡ್ಕರ್ ದಲಿತರು, ದಮನಿತರು, ಅಸ್ಪೃಶ್ಯರ ನಾಯಕ ಎಂದು ಬಿಂಬಿಸಲಾಗಿದೆ. ಆದರೆ ಬಹುಜನರಿಗೆ ಅರ್ಥವೇ ಆಗಿಲ್ಲದ ಸಂಗತಿ ಎಂದರೆ ದೇಶದ ಪರಿಸ್ಥಿತಿ ಬಹಳ ಹದಗೆಟ್ಟಿದೆ. ಈ ವೇಳೆ ಅಂಬೇಡ್ಕರರ ಆಲೋಚನೆ ಬಿತ್ತುವ ಕೆಲಸ ಮಾಡಬೇಕಾದ ತುರ್ತು ಇದೆ ಎಂದು ಚಲನಚಿತ್ರ ನಟ ಪ್ರಕಾಶ್‌ ರಾಜ್‌ ಹೇಳಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ಗುರುವಾರ ಆಯೋಜಿಸಿದ್ದ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 134ನೇ ಜಯಂತ್ಯುತ್ಸವದಲ್ಲಿ ಆಧುನಿಕ ಬೋಧಿಸತ್ವ ಅಂಬೇಡ್ಕರ್‌ : ವಿಶ್ವಜ್ಞಾನಿ- ವಿಶ್ವಪ್ರಮಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ತುರ್ತಿನ ಕಾಲದಲ್ಲಿ ನಮ್ಮ ಒಂದೇ ಒಂದು ನಂಬಿಕೆ ಆಶಾಕಿರಣ ಎಂದರೆ ಅದು ನಮ್ಮ ಸಂವಿಧಾನ. ಸರ್ವೋಚ್ಚ ನ್ಯಾಯಾಲಯ ಕೂಡ ಅಂಬೇಡ್ಕರ್ ಕೊಟ್ಟ ಸಂವಿಧಾನದ ಮೇಲೆ ತೀರ್ಪು ಕೊಡುತ್ತಿದ್ದೆಯೇ? ಅದು ನಮಗೇ ಮುಖ್ಯವಾಗಬೇಕು ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಅವರಿಂದ ನಾವು ಕಲಿಯಬೇಕಾದ್ದು ಪ್ರತಿರೋಧದ ಗುಣ. ಒಬ್ಬ ಯುವಕ ಅಂಬೇಡ್ಕರರಂತೆ ವೇಷ ಧರಿಸಿ ಮೆರವಣಿಗೆಯಲ್ಲಿ ಸಾಗಿ ಬಂದ. ಈ ಬಗ್ಗೆ ಕೇಳಿದರೆ ಆತ ನಾನು ಅಂಬೇಡ್ಕರ್ ಅವರಂತೆಯೇ ಕಾಣಲೆಂದು ಉತ್ತರಿಸಿದ. ಆದರೆ, ಅಂಬೇಡ್ಕರ್ ಕೋಟ್ ಧರಿಸಿದ್ದು ಒಂದು ಪ್ರತಿರೋಧವಾಗಿದೆ ಎಂದರು.

ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳಲ್ಲಿ ಈವರೆಗೆ ದಲಿತರ ವಿಮೋಚನಾ ರಥವನ್ನು ಎಳೆದು ಬಂದಿದ್ದೇನೆ. ಮುಂದಕ್ಕೆ ಎಳೆಯದಿದ್ದರೂ ಪರವಾಗಿಲ್ಲ. ಮುಂದಕ್ಕೆ ಎಳೆಯದಂತೆ ಹೇಳಿದ್ದಾರೆ. ಈಗ ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವ ಸಂಕಲ್ಪದೊಂದಿಗೆ ಪುನರ್‌ಜನ್ಮ ನೀಡಬೇಕಿದೆ ಎಂದು ತಿಳಿಸಿದರು.

ಪ್ರಾಧ್ಯಾಪಕ ಪ್ರೊ.ಎ. ನಾರಾಯಣ ಪ್ರಜಾಪ್ರಭುತ್ವದ ಸದೃಢತೆಯಲ್ಲಿ ಯುವ ಸಮುದಾಯದ ಪಾತ್ರ ವಿಷಯ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ಉಳಿವಿನಲ್ಲಿ ಯುವಜನರ ಪಾತ್ರದ ಕುರಿತು ಮಾತಾಡಬೇಕಿದೆ. ದೇಶವನ್ನು ದೇಶ ಉಳಿಸಿದಾಗ ಆ ಮೂಲಕ ಅಪಾಯದಲ್ಲಿರುವ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆಯಿಂದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಯಿತು. ಕಲಾತಂಡಗಳ ಮೆರವಣಿಗೆ ಆಕರ್ಷಿಸಿತು. ಸಭಾ ಕಾರ್ಯಕ್ರಮದ ಬಳಿಕ ದೇವನೂರ ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ ರಂಗರೂಪ ಪ್ರದರ್ಶನಗೊಂಡಿತು. ಅಂಬೇಡ್ಕರ್ ಅವರ ಛಾಯಾಚಿತ್ರಗಳ ಪ್ರದರ್ಶನ, ಸಂವಿಧಾನ ಪ್ರಸ್ತಾವನೆ, ಬುದ್ಧರ ಪ್ರತಿಮೆ ಹಬ್ಬದ ಸಂಭ್ರಮ ಕಂಡು ಬಂದಿತು.