ಕನ್ನಡಪ್ರಭ ವಾರ್ತೆ ಯಮಕನಮರಡಿ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ಶಾಲಾವಧಿಯಲ್ಲಿಯೇ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಹಿಡಕಲ್ ಡ್ಯಾಂ ವಲಯದ ಸಮೀಪವಿರುವ ಕಾಲುವೆಯಲ್ಲಿ ಮಂಗಳವಾರ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಯೊಬ್ಬ ಶಾಲಾವಧಿಯಲ್ಲಿಯೇ ಕಾಲುವೆಯಲ್ಲಿ ಬಿದ್ದು ಮೃತಪಟ್ಟಿರುವ ದುರ್ಘಟನೆ

ಹಿಡಕಲ್ ಡ್ಯಾಂ ವಲಯದ ಸಮೀಪವಿರುವ ಕಾಲುವೆಯಲ್ಲಿ ಮಂಗಳವಾರ ಸಂಭವಿಸಿದೆ.

ಸಾವನ್ನಪ್ಪಿರುವ ವಿದ್ಯಾರ್ಥಿಯನ್ನು 8ನೇ ತರಗತಿಯ ಕಾರ್ತಿಕ ಮಂಜುನಾಥ ಗಾಡಿವಡ್ಡರ(14) ಮೃತಪಟ್ಟಿರುವ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಮಂಗಳವಾರ ವಿದ್ಯಾರ್ಥಿಗಳು ಸಮೀಪದ ಕಾಲುವೆಗೆ ಈಜಲು ಹೋಗಿದ್ದಾರೆ. ಇದರಲ್ಲಿ ಒರ್ವ ವಿದ್ಯಾರ್ಥಿ ಕಬ್ಬು ತರಲು ಹೋಗಿದ್ದು, ಇಬ್ಬರು ವಿದ್ಯಾರ್ಥಿಗಳು ಈಜಲು ಕಾಲುವೆಗೆ ಇಳಿದಿದ್ದಾರೆ. ನೀರಿನ ರಭಸ ಹೆಚ್ಚಾಗಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದಾರೆ. ಈ ವೇಳೆ ಸ್ಥಳೀಯರು ಕಂಡು ಓರ್ವ ವಿದ್ಯಾರ್ಥಿಯನ್ನು ರಕ್ಷಿಸಿದ್ದಾರೆ. ಆದರೆ, ಕಾರ್ತಿಕ ಮಾತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮಂಗಳವಾರ ಸಂಜೆ ಶಾಲೆಯ ಸಿಬ್ಬಂದಿ ಮನೆಯವರಿಗೆ ಪೋನ್ ಮಾಡಿ ತಮ್ಮ ಮಗುವಿಗೆ ಪ್ರಜ್ಞೆ ತಪ್ಪಿತ್ತು. ಹುಕ್ಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ನಾವು ಬಂದು ನೋಡಿದಾಗ ಮಗು ಸಾವನ್ನಪ್ಪಿದೆ ಎಂದು ಪಾಲಕರ ಸಂಬಂಧಿ ಕೆಂಪಣ್ಣಾ ಕಲಕುಟ್ರಿ ವಿಷಯ ತಿಳಿಸಿದರು.

ಸಿಬ್ಬಂದಿಯ ಹೇಳಿಕೆಯಂತೆ ಶಾಲಾ ಅವಧಿಯಲ್ಲಿ ಮಕ್ಕಳು ಹೊರಗಡೆ ಹೇಗೆ ಹೋದರು?, ಕಾಲುವೆಗೆ ಮಕ್ಕಳು ಬಿದ್ದಾಗ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಲಾಗಿದೆ, ಕಾಲುವೆಯ ನೀರನ್ನು ಬಂದ್ ಮಾಡಲು ಸೂಚಿಸಲಾಗಿದೆ ಎಂಬ ಹೇಳಿಕೆಗಳು ಸಂಶಯಕ್ಕೆ ಎಡೆ ಮಾಡುತ್ತಿವೆ. ಈ ಬ ಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕು. ಪ್ರಾಚಾರ್ಯ ವೀರುಪಾಕ್ಷಿ ಸಬರದ ಮತ್ತು ವಾರ್ಡನ್ ಮಹಾಂತೇಶ ನಾಯಿಕ ಇವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.