ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ವಸತಿ ಶಾಲಾ ಶಿಕ್ಷಕರು

| Published : May 30 2025, 12:26 AM IST

ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ ವಸತಿ ಶಾಲಾ ಶಿಕ್ಷಕರು
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ವಸತಿ ಶಾಲೆಗಳು ಕ್ರೆಸ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ವಸತಿ ಶಾಲೆಗಳ ನೌಕರರಿಗೆ ಸಿಗುತ್ತಿಲ್ಲ.

ಹಾವೇರಿ: ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ವಸತಿ ಶಾಲಾ ಶಿಕ್ಷಕರು ಗುರುವಾರ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಲೇ ಕರ್ತವ್ಯ ನಿರ್ವಹಿಸಿದರು.

ರಾಜ್ಯಾದ್ಯಂತ ಸುಮಾರು 827 ಶಾಲೆಗಳಲ್ಲಿ 6100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ 27 ವಸತಿ ಶಾಲೆಗಳಿದ್ದು, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಏಕಲವ್ಯ ಹೀಗೆ ಎಲ್ಲ ವಸತಿ ಶಾಲೆಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದು, ಈ ಎಲ್ಲ ಸಿಬ್ಬಂದಿಗಳು ಕೈಗೆ ಕಪ್ಪುಪಟ್ಟಿ ಧರಿಸಿಕೊಂಡೇ ಶಾಲಾ ಮಕ್ಕಳನ್ನು ಬರಮಾಡಿಕೊಂಡರು.

ಈಗಾಗಲೇ ವಸತಿ ಶಾಲೆಗಳು ಕ್ರೆಸ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳು ವಸತಿ ಶಾಲೆಗಳ ನೌಕರರಿಗೆ ಸಿಗುತ್ತಿಲ್ಲ. ವಸತಿ ಶಿಕ್ಷಣ ನಿರ್ದೇಶನಾಲಯ ಎಂದು ಪ್ರತ್ಯೇಕವಾಗಿ ರಚಿಸಿ ರಾಜ್ಯದ ಪ್ರೌಢಶಾಲಾ ಶಿಕ್ಷಣ ಇಲಾಖೆಯಂತೆ ನ್ಯಾಯೋಚಿತ ಗೌರವ ಮತ್ತು ಸೌಲಭ್ಯ ಕಲ್ಪಿಸಬೇಕು. ನಗದುರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು. ಕ್ರೆಸ್ ಅಡಿಯಲ್ಲಿ ಎಸ್ಸಿ, ಎಸ್ಟಿ ಮತ್ತು ಒಬಿಸಿಯ ವಸತಿ ಶಾಲೆಗಳು ನಡೆಯುತ್ತಿದ್ದು, ವಸತಿ ಶಿಕ್ಷಣ ನಿರ್ದೇಶನಾಲಯ ಎಂದು ಪ್ರತ್ಯೇಕವಾಗಿ ರಚಿಸದೇ ಹೋದಲ್ಲಿ ಎಸ್ಸಿ,ಎಸ್ಟಿ ಮತ್ತು ಒಬಿಸಿಯ ವಸತಿ ಶಾಲೆ ಮತ್ತು ಸಿಬ್ಬಂದಿಯನ್ನು ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು. ಮರಣ ಅಥವಾ ನಿವೃತ್ತಿಯ ಉಪಧನ ಸೇರಿದಂತೆ ಹಲವು ಬೇಡಿಕೆ ಇಟ್ಟುಕೊಂಡು ಮೇ 26ರಿಂದ ಮೂರು ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸಿದ್ದರು.

ಇದಕ್ಕೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸಾಂವಿಧಾನಿಕ ಹಕ್ಕುಗಳಿಗಾಗಿ ಇದೀಗ ಜಿಲ್ಲಾ ಹಂತದಲ್ಲಿ ಹೋರಾಟ ಮುಂದುವರಿಸಿದ್ದು, ಗುರುವಾರ ಕೈಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಮೇ 30ರಿಂದ ಶಾಲಾ ಹಂತದಲ್ಲಿ ಹೋರಾಟ ಮುಂದುವರಿಸುವುದಾಗಿ ಸಂಘಟನೆ ತಿಳಿಸಿದೆ.ಮಳೆಗೆ ಸಿಲುಕಿದ ಭತ್ತದ ಪೈರು, ಚಿಂತೆಗೀಡಾದ ರೈತರು

ಹಿರೇಕೆರೂರು: ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಕಟಾವಿಗೆ ಬಂದಿದ್ದ ಭತ್ತದ ಬೆಳಗೆ ಹಾನಿಯಾಗಿದ್ದು, ಅನ್ನದಾತರು ಆತಂಕಗೊಂಡಿದ್ದಾರೆ.ಕೊಳವೆ ಬಾವಿ ಮತ್ತು ಕೆರೆ ನೀರು ಅಶ್ರಯಿಸಿ ಇಲ್ಲಿನ ರೈತರು ಸಾವಿರಾರು ರು. ಖರ್ಚು ಮಾಡಿ ಭತ್ತ ಬೆಳೆದಿದ್ದಾರೆ. ಅದರೆ ಈ ಭತ್ತ ಕೈಗೆ ಬರುವ ಹೊತ್ತಿನಲ್ಲೇ ಮಳೆ ಸುರಿದಿದ್ದು, ರೈತರು ಆತಂಕಗೊಂಡಿದ್ದಾರೆ.

ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತ ಸ್ಥಿತಿ ಭತ್ತ ಬೆಳೆಗಾರದ್ದಾಗಿದೆ. ಇತ್ತ ಸರ್ಕಾರ ಭತ್ತಕ್ಕೆ ಯೋಗ್ಯ ಬೆಂಬಲ ಬೆಲೆ ನೀಡದೆ ರೈತರನ್ನು ಸತಾಯಿಸುತ್ತಿದೆ ಎಂಬ ಆರೋಪ ರೈತರಿಂದ ಕೇಳಿಬಂದಿದೆ.

ಹಿರೇಕೆರೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಭತ್ತಕ್ಕೆ ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು ರೈತ ಮುಖಂಡ ರಾಜಶೇಖರ್ ದೂದ್ದಿಹಳ್ಳಿ ಒತ್ತಾಯಿಸಿದ್ದಾರೆ.