ಕಳೆದ 30 ವರ್ಷಗಳ ಹಿಂದೆ ನಿರ್ಮಾಣವಾದ ಲಕ್ಷ್ಮೇಶ್ವರ ಕರೆಗೋರಿ ಆಶ್ರಯ ಪ್ಲಾಟ್ನಲ್ಲಿ ಸರಿಯಾದ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ ಇರುವುದನ್ನು ಖಂಡಿಸಿ ಶನಿವಾರ ಬೆಳಗ್ಗೆ ಅಲ್ಲಿಯ ನಿವಾಸಿಗಳು ಪುರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಲಕ್ಷ್ಮೇಶ್ವರ: ಕಳೆದ 30 ವರ್ಷಗಳ ಹಿಂದೆ ನಿರ್ಮಾಣವಾದ ಕರೆಗೋರಿ ಆಶ್ರಯ ಪ್ಲಾಟ್ನಲ್ಲಿ ಸರಿಯಾದ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಕಲ್ಪಿಸದೆ ಇರುವುದನ್ನು ಖಂಡಿಸಿ ಶನಿವಾರ ಬೆಳಗ್ಗೆ ಅಲ್ಲಿಯ ನಿವಾಸಿಗಳು ಪುರಸಭೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಂಜುನಾಥ ಅಂಗಡಿ ಹಾಗೂ ಆನಂದ ಅಮರಶೆಟ್ಟಿ ಮಾತನಾಡಿ, ಕರೆಗೋರಿ ಪ್ಲಾಟ್ ನಿವಾಸಿಗಳು ಹಲವು ಬಾರಿ ಆಶ್ರಯ ಪ್ಲಾಟ್ನಲ್ಲಿ ಮೂಲ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಕರೆಗೋರಿ ಪ್ಲಾಟಿನಲ್ಲಿ ಚರಂಡಿಯ ನೀರು ರಸ್ತೆಯ ಮೆಲೆ ನಿಂತು ಹಲವು ರೋಗ- ರುಜಿನಗಳು ತವರುಮನೆಯಾಗಿದೆ. ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ. ಇದರಿಂದ ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ಲ ಮಾತನಾಡಿ, ಕರೆಗೋರಿ ಸಂಪೂರ್ಣ ಅಭಿವೃದ್ಧಿಗೆ ₹48 ಲಕ್ಷ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಅನುದಾನ ಬಿಡುಗಡೆ ಆದ ತಕ್ಷಣ ಕೆರೆಗೋರಿ ಪ್ಲಾಟಿನಲ್ಲಿ ರಸ್ತೆ, ಚರಂಡಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಕರೆಗೋರಿ ಆಶ್ರಯ ನಿವಾಸಿಗಳು ನಮ್ಮ ಕಾಲನಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿ-ಗತಿ ಅರಿಯುವಂತೆ ಆಗ್ರಹಿಸಿದರು.ಈ ವೇಳೆ ಮಂಜುನಾಥ ಮುದಗಲ್ಲ, ಲಿಂಬಯ್ಯಸ್ವಾಮಿಮಠ ಹಾಗೂ ಬದಿ ಅವರು ಕರೆಗೋರಿ ಆಶ್ರಯ ಕಾಲನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣವೇ ಜೆಸಿಬಿ ಯಂತ್ರ ತರಿಸಿ ಕರೆಗೋರಿಯಲ್ಲಿನ ರಸ್ತೆಯಲ್ಲಿನ ನೀರು, ಚರಂಡಿ ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಿದರು.
ಆನಂದ ಅಮರಶೆಟ್ಟಿ, ಮಂಜುನಾಥ ಅಂಗಡಿ, ಶಶಿಕಲಾ ಶೇಖಣ್ಣವರ, ಲಕ್ಷ್ಮಣ ನಾವಿ, ಮಲ್ಲಿಕಾರ್ಜುನ ಕರೆಯತ್ತಿನ, ಮಂಜು ಸೋಗಿ, ಮಹೇಶ ಶಿರಹಟ್ಟಿ, ಗಂಗಾಧರ ಕರೆಯುತ್ತಿನ, ಬಸವರಾಜ ಅಕ್ಕಿ, ಬಸವರಾಜ ಹುಬ್ಬಳ್ಳಿ, ಗಣೇಶ ಉಮಚಗಿ, ಮಂಜುನಾಥ ಹುದ್ದಾರ, ಅಶೋಕ ಗೊರವರ, ಯಲ್ಲಪ್ಪ ಹಮ್ಮಗಿ, ಮಂಜುನಾಥ ದೊಡ್ಡಮನಿ, ಗುರುನಾಥ ಬೇಂದ್ರೆ, ಬಸವರಾಜ ಕನವಳ್ಳಿ, ರವಿ ಹುಬ್ಬಳ್ಳಿ, ವರುಣ ಸೊರಟೂರ, ಆನಂದ ಬೂದಿಹಾಳ ಇದ್ದರು.