ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕ್ಷುಲ್ಲಕ ಕಾರಣಕ್ಕೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಕೆಲವೊಂದು ರಾಜೀಯಾಗುವ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸುಧೀರ್ ತಿಳಿಸಿದರು.ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಗೆ ಚಾಲನೆ ನೀಡಿ ಮಾತನಾಡಿ, ಭೂ ಸ್ವಾಧೀನ ಪ್ರಕರಣಗಳು, ರಾಜೀಯಾಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ವಸೂಲಾತಿ, ಉದ್ಯೋಗದಲ್ಲಿ ಪುನರ್ ಸ್ಥಾಪಿಸುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದರು.
ಕೈಗಾರಿಕಾ ಕಾರ್ಮಿಕರ ಪ್ರಕರಣಕ್ಕೆ ಸಂಬಂಧಿಸಿದ ಕ್ಲೇಮುಗಳು, ವೈವಾಹಿಕ ಕುಟುಂಬದ ನ್ಯಾಯಾಲಯದ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪ್ರಕರಣಗಳು, ಕಾರ್ಮಿಕ ವಿವಾದಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಮತ್ತು ರಾಜಿಯಾಗಬಲ್ಲ ಸಿವಿಲ್ ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.ಸಣ್ಣ ಪುಟ್ಟ ವಿಚಾರಕ್ಕೆ ದಾವೆಯನ್ನು ಹೂಡಿ ವರ್ಷಾನುಗಟ್ಟಲೆ ನ್ಯಾಯಾಲಯಕ್ಕೆ ಅಲೆದು ತಮ್ಮ ಅಮೂಲ್ಯ ಸಮಯ ಮತ್ತು ಹಣ ವ್ಯರ್ಥ್ಯಮಾಡಿಕೊಳ್ಳುತ್ತಿರುವುದನ್ನು ಮನಗಂಡ ಕಾನೂನು ಇಲಾಖೆ ವರ್ಷಕ್ಕೆ ನಾಲ್ಕು ಭಾರಿ ಲೋಕ ಅದಾಲತ್ ಹಮ್ಮಿಕೊಂಡಿದೆ ಎಂದರು.
ನ್ಯಾಯಾಲಯವೇ ತಮ್ಮ ಗ್ರಾಮಕ್ಕೆ ಬಂದು ನ್ಯಾಯ ಇತ್ಯರ್ಥ ಪಡಿಸುತ್ತಿದೆ. ಇಂತಹಾ ಸದಾವಕಾಶವನ್ನು ಪ್ರತಿಯೊಬ್ಬರು ಬಳಸಿಕೊಂಡು ಕಕ್ಷಿದಾರರು ವ್ಯಾಜ್ಯ ಮುಕ್ತರಾಗಿರಿ ಎಂದರು.ಅಂಗವಿಕಲೆಯೊಬ್ಬರು ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ನ್ಯಾಯಾಲಯಕ್ಕೆ ಕಾರಿನಲ್ಲಿ ಬಂದಿದ್ದರು. ಆದರೆ, ಒಳಗೆ ಹೋಗಲು ಸಾಧ್ಯವಾಗದೇ ಇರುವುದನ್ನು ಮನಗಂಡ ಅಪರ ಸಿವಿಲ್ ನ್ಯಾಯಾಧೀಶರಾದ ಆರ್.ಶಕುಂತಲಾ ಅವರು ಖುದ್ದು ನ್ಯಾಯಾಧೀಶರೇ ವಿಕಲಾಂಗ ಮಹಿಳೆ ಬಳಿ ಹೋಗಿ ರಾಜಿ ಇತ್ಯರ್ಥ ಪತ್ರಕ್ಕೆ ಸಹಿ ಪಡೆಯುವ ಮೂಲಕ ಮಾನವೀಯತೆ ಮೆರೆದು ಎಲ್ಲರಿಗೂ ಮಾದರಿಯಾಗಿ ನೆರೆದಿದ್ದ ಕಕ್ಷಿದಾರರ ಪ್ರಶಂಸೆಗೆ ಪಾತ್ರರಾದರು.
ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರಾದ ಸುಧೀರ್ , ದೇವರಾಜು, ಆರ್.ಶಕುಂತಲಾ, ಕೆ.ವಿ.ಅರ್ಪಿತಾ, ಸರ್ಕಾರಿ ಅಭಿಯೋಜಕರಾದ ಸುರೇಂದ್ರ ಜಿ.ವೀಣಾ ನೂರಾರು ಪ್ರಕರಣಗಳನ್ನು ರಾಜಿಸಂಧಆನದ ಇತ್ಯರ್ಥ ಪಡಿಸಿದರು.ಕಾರ್ಯಕ್ರಮ ಯಶಸ್ಸಿನ ಹಿನ್ನೆಲೆಯಲ್ಲಿ ವಕೀಲರು ಮತ್ತು ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿಗೆ ನ್ಯಾಯಾಧೀಶರು ಅಭಿನಂದನೆ ಸಲ್ಲಿಸಿದರು.