ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪವಿತ್ರ ಸನಾತನ ಸಂಸ್ಕೃತಿಯ ನೆಲೆವೀಡಾಗಿರುವ ದೇಗುಲ ಪರಂಪರೆಯನ್ನು ಉಳಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ ಹೇಳಿದರು.ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದಲ್ಲಿ ಲೋಕಾರ್ಪಣೆಗೊಂಡ ಶ್ರೀಹೊಂಗನೂರಮ್ಮ ದೇಗುಲ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಧರ್ಮ, ಸಂಸ್ಕೃತಿ, ಆಧ್ಯಾತ್ಮ ನೆಲಗಟ್ಟಿನಲ್ಲಿ ನಮ್ಮ ನಾಡು ಬಿಂಬಿತವಾಗಿದೆ. ಗ್ರಾಮಗಳಲ್ಲಿ ಸುಖ, ಶಾಂತಿ, ನೆಮ್ಮದಿಗೆ ದೇಗುಲ, ಭಗವಂತನ ಆರಾಧನೆ ಪ್ರಮುಖವಾಗಿದೆ. ನಮ್ಮ ಪೂರ್ವಜರು ಹಾಕಿಕೊಟ್ಟಿರುವ ದೇಗುಲ ಸಂಸ್ಕೃತಿ ಉಳಿಸಿಕೊಂಡು ನೆಮ್ಮದಿ ಕಾಣಲು ಮುಂದಾಗಬೇಕಿದೆ ಎಂದರು.
ದೇಗುಲ ಉದ್ಘಾಟನೆಗೆ ಮುನ್ನ ಸಮೀಪದ ಹೇಮಾವತಿ ನದಿಯಿಂದ ಪೂರ್ಣಕುಂಭದೊಂದಿಗೆ ಗಂಗೆಯನ್ನು ತರಲಾಯಿತು. ಮಂಗಳವಾದ್ಯದೊಂದಿಗೆ ದೇವಿಗೆ ಗಂಗಾ ಜಲಾಭಿಷೇಕ ನೆರವೇರಿಸಲಾಯಿತು. ಪೂರ್ಣಕುಂಭ ಕಳಸ ಮೆರವಣಿಗೆಯೊಂದಿಗೆ ಮಹಿಳೆಯರು ಮಂಗಳವಾದ್ಯದೊಂದಿಗೆ ದೇಗುಲಕ್ಕೆ ಸಾಗಿದರು.ಗ್ರಾಮದಲ್ಲಿ ತಳಿರು ತೋರಣ, ರಂಗೋಲಿ ಬಿಡಿಸಿ ದೊಡ್ಡಹಬ್ಬದಂತೆ ಸಂಭ್ರಮಿಸಿದರು.ದೇಗುಲದ ಸುತ್ತ ದಿಗ್ಬಂಧನ ಬಲಿ ಪೂಜೆ, ವಿವಿಧ ಹೋಮ ಹವನಾದಿ, ಅಭಿಷೇಕ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಸೇವೆ ನೆರವೇರಿತು. ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಸಿ ಸದಸ್ಯ ಸುರೇಶ್, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರಮೇಶ್, ನಿರ್ದೇಶಕ ಚಂದ್ರೆಗೌಡ, ಮುಖಂಡರಾದ ಎಂ.ಕೆ.ನಾಗರಾಜು, ಅಯ್ಯಪ್ಪಸ್ವಾಮಿ, ಮಂಜುನಾಥ್, ಎಂ.ಕೆ. ಶ್ರೀನಿವಾಸ್, ಎಂ.ಬಿ ಶಿವಣ್ಣ, ಯೋಗೇಶ್, ಎಂ.ಕೆ,ಗಿರೀಶ್, ರಮೇಶ್, ಗ್ರಾಪಂಸದಸ್ಯ ಶಿವಣ್ಣ, ಅರ್ಚಕ ಜಗದೀಶ್ ಮತ್ತಿತರರು ಇದ್ದರು.