ಕನ್ನಡಪ್ರಭ ವಾರ್ತೆ ಗೋಕರ್ಣ

ಇಲ್ಲಿನ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಕಡಲತೀರದಲ್ಲಿನ ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ರೆಸಾರ್ಟ್‌, ಹೊಟೇಲ್‌ಗಳ ತೆರವಿನ ಬದಲು ತಾಲೂಕಾಡಳಿತ ಸೋಮವಾರ ಬೀಗ ಹಾಕಿ ಸೀಲ್‌ ಮಾಡಿದೆ. ಸೋಮವಾರ ಮುಂಜಾನೆಯಿಂದ ಈ ಪ್ರದೇಶದಲ್ಲಿ ತೆರವಿಗೆ ಸ್ಥಳೀಯರು ಪ್ರತಿಭಟನೆ, ಕಾರ್ಯಾಚರಣೆಗೆ ಅಡ್ಡಿಪಡಿಸುವ ಸಾಧ್ಯತೆ ಇರಬಹುದು ಎಂಬ ಕಾರಣದಿಂದ ಕುಮಟಾ ಉಪವಿಭಾಗಾಧಿಕಾರಿಗಳು ಮಾ. ೯ ಮುಂಜಾನೆ ೧೦ರಿಂದ ಮಾ.೧೦ ಮುಂಜಾನೆ ೧೦ರವರೆಗೆ ನಿಷೇಧಾಜ್ಞೆ ಹೊರಡಿಸಿದ್ದರು. ಅತ್ಯಧಿಕ ಸಂಖ್ಯೆಯದಲಿ ಪೊಲೀಸರನ್ನ ಸಹ ನೀಯೋಜಿಸಲಾಗಿತ್ತು.ಒಟ್ಟು ೫೨ ಅಕ್ರಮ ಕಟ್ಟಡಗಳಿದ್ದು, ಇದರಲ್ಲಿ ೨೪ ಕಟ್ಟಡದವರು ನ್ಯಾಯಾಲಯದಲ್ಲಿ ಸ್ವಯಂ ತೆರವು ಮಾಡಲು ಕಾಲಾವಕಾಶ ಕೋರಿದ್ದರು. ಈ ಬಗ್ಗೆ ಸೂಕ್ತ ಪ್ರಮಾಣ ಪತ್ರ ಅಫಡವೀಟ್ ನೀಡುವಂತೆ ಸೂಚಿಸಿ ತೆರವಿಗೆ ತಾತ್ಕಾಲಿಕ ತಡೆ ನೀಡಿತ್ತು. ಇದರಂತೆ ಸೋಮವಾರ ಸಹ ೧೧ ರೆಸಾರ್ಟ್‌ಗಳಿಗೆ ತೆರವಿಗೆ ತಡೆ ನೀಡಿದ್ದು, ಉಳಿದ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ ಸ್ವಯಂ ಪ್ರೇರಿತವಾಗಿ ತೆರವು ಮಾಡುವ ಕಾರಣ ಅಲ್ಲಿಯವರೆಗೆ ಯಾವುದೇ ಚಟುವಟಿಕೆ ನಡೆಯದಂತೆ ಬೀಗ ಹಾಕಲಾಗಿದೆ. ಸುದೀರ್ಘ ಚರ್ಚೆ:

ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ನೇತೃತ್ವದಲ್ಲಿ ನಾಡುಮಾಸ್ಕೇರಿ ಗ್ರಾಪಂಯಲ್ಲಿ ಮುಂಜಾನೆಯಿಂದ ವಿಶೇಷ ಸಭೆ ನಡೆಸಿ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು. ಅಲ್ಲದೆ ಧಾರವಾಡದ ಹೈಕೋರ್ಟ್‌ ಪೀಠದಿಂದ ಬರುವ ಆದೇಶಕ್ಕಾಗಿ ಕಾದು, ಅಲ್ಲಿಂದ ಆದೇಶ ಬಂದ ನಂತರ ಜಾಗ ಅತಿಕ್ರಮಣ ಮಾಡಿದ ಕಟ್ಟಡ ಕಟ್ಟಿದ ಮಾಲೀಕರೊಂದಿಗೆ ಚರ್ಚಿಸಿ ವಿಷಯ ಮನವರಿಕೆ ಮಾಡಿ ಮುಂದಿನ ಕಾರ್ಯಾಚರಣೆ ನಡೆಸಿದರು. ಈ ವೇಳೆ ತಾಪಂ ಇಒ ಆರ್.ಎಲ್. ಭಟ್, ಪಿ.ಐ. ಶ್ರೀಧರ ಎಸ್.ಆರ್., ಗ್ರಾಪಂ ಆಡಳಿತಾಧಿಕಾರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರುಬೆಳ್ಳಂ ಬೆಳಗ್ಗೆ ಭಾರಿ ಭದ್ರತೆ:

ಇಬ್ಬರು ಡಿವೈಎಸ್ಪಿ, ಎಂಟು ಸಿಪಿಐ, ೩೦ ಪಿಎಸ್‌ಐ, ೪೦ ಎಎಸ್‌ಐ, ೯೦ ಹವಾಲ್ದಾರ, ೧೦೦ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನ ತೆರವು ಕಾರ್ಯಾಚರಣೆ ಪ್ರದೇಶಕ್ಕೆ ನಿಯೋಜಿಸಲಾಗಿತ್ತು. ನಾಲ್ಕು ಜೆಸಿಬಿ, ನಾಲ್ಕು ಟಿಪ್ಪರ್‌, ಅಂಕೋಲಾದ ಅಗ್ನಿಶಾಮಕದಳದ ವಾಹನ, ತುರ್ತು ಸಂದರ್ಭದ ಬಳಕೆಗಾಗಿ 2 ಆ್ಯಂಬುಲೆನ್ಸ್‌ ಸಹ ಒದಗಿಸಲಾಗಿತ್ತು.ಪ್ರತಿಭಟನೆ ಮಹಿಳೆಯರು ಅಸ್ವಸ್ಥ:

ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿ ಸ್ಥಳೀಯ ಕೆಲವರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಈ ವೇಳೆ ಇಬ್ಬರು ಮಹಿಳೆಯರು ಕುಸಿದು ಬಿದ್ದರು. ತಕ್ಷಣ ಆ್ಯಂಬುಲೆನ್ಸ್‌ ಮೂಲಕ ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಿದ್ದು, ನಂತರ ಚೇತರಿಸಿಕೊಂಡಿದ್ದಾರೆ. ನಾಮಫಲಕದೊಂದಿಗೆ ಸರ್ಕಾರಿ ಸೀಲ್:


ಅಕ್ರಮ ಕಟ್ಟಡಗಳಿಗೆ ಇದು ಸರ್ಕಾರಿ ಆಸ್ತಿಯಾಗಿದ್ದು, ಸ್ಥಳೀಯರಿಗೆ ಪ್ರವಾಸಿಗರಿಗೆ ಪ್ರವೇಶವಿಲ್ಲ ಎಂಬ ಬರಹದ ನಾಮಫಲಕವನ್ನ ಅಳವಡಿಸಿ ಬೀಗಮುದ್ರೆ ಹಾಕಲಾಗಿದೆ.ತೆರವು ಕಾರ್ಯಾಚರಣೆಗೆ ನ್ಯಾಯಾಲಯ ತಡೆ ನೀಡಿದೆ ಎಂಬ ವದಂತಿಗೆ ತೆರೆ ಬಿದ್ದಿದ್ದು, ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವಿಗೆ ಕಾಲಾವಕಾಶ ನೀಡುವಂತೆ ಅಕ್ರಮ ಕಟ್ಟಡ ಕಟ್ಟಿದವರು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರಿಂದ, ನ್ಯಾಯಾಲಯವು ತೆರವುಗೊಳಿಸುವ ಪ್ರಮಾಣಪತ್ರ ಪಡೆದು ಅಲ್ಪ ಅವಧಿಯ ಗಡವು ನೀಡಿದ್ದು, ಸ್ವತಂತ್ರವಾಗಿ ನಿಗದಿತ ಅವಧಿಯೊಳಗೆ ತೆರವು ಮಾಡಬೇಕಿದೆ.