ಜನರ ಭಾವನೆ, ಕಷ್ಟಗಳಿಗೆ ಸ್ಪಂದಿಸಿ

| Published : Mar 03 2024, 01:32 AM IST

ಸಾರಾಂಶ

ಸದಾಕಾಲವೂ ಒತ್ತಡದ ಮಧ್ಯೆ ಜನರಿಗೆ ರಕ್ಷಣೆ ನೀಡುವ ಕಾರ್ಯ ಪೊಲೀಸರ ಮೇಲಿದೆ. ಆದ್ದರಿಂದ ಪೊಲೀಸರು ಜನರ ಭಾವನೆ ಹಾಗೂ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸದಾಕಾಲವೂ ಒತ್ತಡದ ಮಧ್ಯೆ ಜನರಿಗೆ ರಕ್ಷಣೆ ನೀಡುವ ಕಾರ್ಯ ಪೊಲೀಸರ ಮೇಲಿದೆ. ಆದ್ದರಿಂದ ಪೊಲೀಸರು ಜನರ ಭಾವನೆ ಹಾಗೂ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ದರಾಮಪ್ಪ ಹೇಳಿದರು.

ನಗರದ ಜಿರಿಗೆ ಸಭಾಂಗಣದಲ್ಲಿ ಜರುಗಿದ ವಯೋನಿವೃತ್ತಿ ಹಿನ್ನೆಲೆಯಲ್ಲಿ ಬೀಳ್ಕೊಡಿಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಗಣ್ಯರಿಗೆ ಭದ್ರತೆ ಜತೆಗೆ ಇನ್ನೀತರ ಕಾರ್ಯದೊತ್ತಡ ಮಧ್ಯೆ ನಾವು ಜನರ ಭಾವನೆ ಹಾಗೂ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಎಂದಿಗೂ ಮರಿಯಬಾರದು. ಪೊಲೀಸರು ಮತ್ತು ಪೊಲೀಸ್‌ ಠಾಣೆಗಳು ಸಂಕಷ್ಟದಲ್ಲಿರುವ ಆತ್ಮಸ್ಥೈರ್ಯ ತುಂಬುವ, ಅನ್ಯಾಯಕ್ಕೊಳ್ಳಗಾದ ಹಾಗೂ ನೊಂದರಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡಿದ್ದಲ್ಲಿ ಮಾತ್ರ ಪೊಲೀಸರ ಮೇಲಿ ನಂಬಿಕೆ ಮತ್ತು ಗೌರವ ಹೆಚ್ಚಾಗಲು ಸಾಧ್ಯ ಎಂದರು.

1997ರಲ್ಲಿ ಡಿವೈಎಸ್‌ಪಿ ಆಗುವ ಮೂಲಕ ಪೊಲೀಸ್‌ ಇಲಾಖೆಗೆ ಸೇರಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ವೇಳೆ ನಕ್ಸಲ್‌, ಉಗ್ರರನ್ನು, ಅತ್ಯಾಚಾರಿಗಳನ್ನು, ಡಕಾಯತಿ ಮಾಡುವವರನ್ನು, ಗಲಭೆ ಕೋರರನ್ನು, ಕೊಲೆಗಡುಕರನ್ನು, ಕಳ್ಳರನ್ನು ಸೇರಿದಂತೆ ಸಮಾಜಘಾತುಕ ಚಟುವಕೆಗಳಲ್ಲಿ ಭಾಗಿಯಾದರವನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟುವ ಮೂಲಕ ತಮ್ಮ ಸುದೀರ್ಘ ಸೇವಾವಧಿ ತೃಪ್ತಿ ತಂದಿದೆ ಎಂದರು.

ಬೆಳಗಾವಿ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಲಾಗಿಂದಲೂ ಸಮಾಜಘಾತುಕರನ್ನು ಮಟ್ಟಹಾಕಲು ಹಾಗೂ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯವನ್ನು ಅಧೀನ ಅಧಿಕಾರಿಗಳ ಮೂಲಕ ಮಾಡಿಸಲಾಗಿದೆ. ಅಪರಾಧಿಕ ಪ್ರಕರಣಗಳ ತನಿಖೆಯಲ್ಲಿ ವಿಳಂಭವನ್ನು ಸಹಿಸದೆ, ಉದಾಸೀನ ಮಾಡುವ ಅಧಿಕಾರಿಗಳಿಗೆ ಚಾಟಿ ಬಿಸಿ ಕಾರ್ಯ ಮಾಡಿಸಿದ್ದೇನೆ ಎಂದರು.

ಕನ್ನಡ ರಾಜ್ಯೋತ್ಸವ, ಚಳಿಗಾಲದ ಅಧಿವೇಶನದಲ್ಲಿ ಯಾವುದೇ ಲೋಪವಾಗದ ರೀತಿಯಲ್ಲಿ ಭದ್ರತೆ, ಮಹಾಮೇಳಾವ ಕಾನೂನು ರೀತಿಯಲ್ಲಿ ಕಟ್ಟಿಹಾಕಿರುವುದು, ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಮೇಲ್ವಿಚಾರಣೆ, ಕಾನೂನು ವಿಶ್ವವಿದ್ಯಾನಿಲಯದ ಅತ್ಯಾಚಾರ ಪ್ರಕರಣ, ವೆಸ್ಟ ಫ್ರೈಡ್ ಹೋಟೆಲ್ ಪತ್ತೆ 7 ಕೆಜಿ ಚಿನ್ನದ ದರೋಡೆ ಮತ್ತು ಕೊಲಂಬಿಯಾದಿಂದ ಪರಾರಿಯಾಗಿದ್ದ ಲ್ಯಾಟಿನ್ ಅಮೆರಿಕನ್ನರ ಬಂಧನ, ನಗರದಲ್ಲಿ ಬಾರಿ ವಾಹನಗಳನ್ನು ನಿರ್ಬಂಧ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಟ್ರಾಫಿಕ್ ನಿಯಮ ಮತ್ತು ಸುರಕ್ಷತೆ ಕುರಿತು ಅರಿವು ಮೂಡಿಸುವುದು, ಟ್ರಾಫಿಕ್ ನಿಯಮ ಪಾಲಿಸದೇ ಇರುವವರಿಗೆ ಲೈಸನ್ಸ್‌ ಅಮಾನತು, ಕೆಲವು ಆಯಕಟ್ಟಿನ ಪ್ರದೇಶದಲ್ಲಿ ಪಾರ್ಕಿಂಗ್ ತೆರವುಗೊಳಿಸುವುದು, ಸುರಕ್ಷತೆಯ ಹಿತದೃಷ್ಟಿಯಿಂದ ಕೆಲವು ಬಲ ತೀರವುಗಳನ್ನು ಬಂದ್‌ ಮಾಡುವ ಮೂಲಕ ಅಪಘಾತ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು. ಹೀಗೆ ನನ್ನ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯ ತೃಪ್ತಿ ತಂದಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್‌ಪಿ ಮಹಾನಿಂಗ ನಂದಗಾಂವಿ, ಡಿಸಿಪಿಗಳಾದ ರೋಹನ್‌, ಸ್ನೇಹಾ ಸೇರಿದಂತೆ ಎಸಿಪಿ, ಪೊಲೀಸ್‌ ಇನಸ್ಪೆಕ್ಟರ್‌ಗಳು ಮಾತನಾಡಿದರು.

---

ಕೋಟ್‌

ಬೆಳಗಾವಿ ಗಡಿ ಜಿಲ್ಲೆಯಾಗಿದ್ದು, ಹಲವು ಸಂಸ್ಕೃತಿ ಜತೆಗೆ ಕನ್ನಡ, ಮರಾಠಿ, ಕೊಂಕಣಿ ಸೇರಿದಂತೆ ಹಲವು ಭಾಷೆಗಳನ್ನು ಹೊಂದಿದ ಶ್ರೀಮಂತ ನಗರವಾಗಿದೆ. ಇಲ್ಲಿನ ಜನರ ಮನಸ್ಸು, ಮತ್ತು ಹೃದಯ ವೈಶಾಲ್ಯತೆ ಬೆಳಗಾವಿ ಕುಂದಾದಷ್ಟೇ ಮೃದು ಹಾಗೂ ಸಿಹಿಯಾಗಿದೆ.

-ಎಸ್‌.ಎನ್‌.ಸಿದ್ದರಾಮಪ್ಪ ನಗರ ಪೊಲೀಸ್‌ ಆಯುಕ್ತ