ಕನ್ನಡಪ್ರಭ ವಾರ್ತೆ ಬೈಲಹೊಂಗಲ

ತಾಲೂಕಿನ ದೊಡವಾಡ ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ಕೃಷಿ ಇಲಾಖೆ ಬೈಲಹೊಂಗಲ ವತಿಯಿಂದ ಧರ್ತಿ ಮಾತಾ ಬಚಾವೋ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಆತ್ಮ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಚಂದ್ರಕಾಂತ್ ಮರಡಿ ಅವರು ಸಮಗ್ರ ಹಾಗೂ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಕುರಿತು ಮಾತನಾಡಿದರು.

ಸಾವಯವ ಕೃಷಿಕ ಮಂಜುನಾಥ ತಹಸೀಲ್ದಾರ್ ತಮ್ಮ ಕೃಷಿ ಅನುಭವ ಹಂಚಿಕೊಂಡರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕೆಎಲ್ಇ ಕೆವಿಕೆ ಮತ್ತಿಕೊಪ್ಪದ ಮಣ್ಣು ವಿಜ್ಞಾನಿಗಳಾದ ವಿನೋದ್ ಕೊಚ್ಚಿನ್ ಅವರು ಮಣ್ಣು ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಣ್ಣಿನ ಗುಣಧರ್ಮ ಹಾಗೂ ಫಲವತ್ತತೆ ಹೆಚ್ಚಿಸುವ ಕುರಿತು ಮಾತನಾಡಿದರು.

ಕೃಷಿ ಅಧಿಕಾರಿ ಯಮನಪ್ಪ ಮಾದಿಗರ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ ಮಾತನಾಡಿ, ರಾಸಾಯನಿಕ ಗೊಬ್ಬರಗಳ ದುಷ್ಪರಿಣಾಮ ಹಾಗೂ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಮತ್ತು ಜೈವಿಕ ಗೊಬ್ಬರಗಳನ್ನ ಬಳಸಿ ಭೂಮಿಯಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚು ಮಾಡುವುದರ ಕುರಿತು ಮಾತನಾಡಿದರು.


ನೈಸರ್ಗಿಕ ಕೃಷಿ ಪಂಡಿತ ಲಕ್ಷ್ಮಿ ಲೋಕೂರ, ಮಹಾಂತ ರೈತ ಉತ್ಪಾದಕರ ಸಂಸ್ಥೆ (ಗೊವನಕೊಪ್ಪ) ವ್ಯವಸ್ಥಾಪಕ ಮಹಾಂತೇಶ ಹೊಂಗಲ ಮಾತನಾಡಿ. ಇಲಾಖೆ ಯೋಜನೆಗಳನ್ನು ಸರಿಯಾಗಿ ಉಪಯೋಗ ತೆಗೆದುಕೊಳ್ಳಿ ಎಂದು ರೈತರಿಗೆ ಸಲಹೆ ನೀಡಿದರು. ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡನವರ ಇದ್ದರು. ಸಂತೋಷ ಚೌಡನವರ ಸ್ವಾಗತಿಸಿ, ವಂದಿಸಿದರು. ಗ್ರಾಪಂ ಅಧ್ಯಕ್ಷ ಸಂಗೀತ ಚಂದರಗಿ, ಕೃಷಿ ಅಧಿಕಾರಿ ಎಸ್.ಎಫ್‌.ಪೂಜಾರ, ಸಹಾಯಕ ಕೃಷಿ ಅಧಿಕಾರಿ ಎಸ್ಎಸ್ ಮಾಳಗಿ ಹಾಗೂ ಬಿ ಕೆ ಜಮಾದಾರ್ ಹಾಜರಿದ್ದರು.