ಶಿಕ್ಷಕ ವೃತ್ತಿ ಹೊರತುಪಡಿಸಿ ಉಳಿದೆಲ್ಲ ವೃತ್ತಿಗೆ ನಿವೃತ್ತಿ: ಪಾಟೀಲ್‌

| Published : Jan 21 2025, 12:31 AM IST

ಶಿಕ್ಷಕ ವೃತ್ತಿ ಹೊರತುಪಡಿಸಿ ಉಳಿದೆಲ್ಲ ವೃತ್ತಿಗೆ ನಿವೃತ್ತಿ: ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಪಡೆದ ವಿದ್ಯಾರ್ಥಿ ಎಷ್ಟೇ ಎತ್ತರಕ್ಕೆ ತಲುಪಿ ಉನ್ನತ ಹುದ್ದೆಯಲ್ಲಿದ್ದರೂ ಗುರುವನ್ನು ಕಂಡಾಗ ಅವರ ಪಾದಗಳಿಗೆ ಎರಗಿ ಭಕ್ತಿಯಿಂದ ಗೌರವ ತೋರುತ್ತಾನೆ.

ಧಾರವಾಡ:

ಸಮಾಜದಲ್ಲಿ ನೂರೆಂಟು ವೃತ್ತಿಗಳಿದ್ದು ಬಹುತೇಕ ಎಲ್ಲ ವೃತ್ತಿಗಳಿಗೂ ನಿವೃತ್ತಿ ಇದೆ. ಆದರೆ, ಶಿಕ್ಷಕರಿಗೆ ನಿವೃತ್ತಿಯೆಂಬುದೇ ಇಲ್ಲ. ನಿವೃತ್ತಿ ನಂತರವೂ ಗುರು ಎಂದೇ ಕರೆಯಿಸಿಕೊಳ್ಳುವ ಶಿಕ್ಷಕರು ಜನಮಾನಸದಲ್ಲಿ ಸದಾವಕಾಲ ಗೌರವಿಸಲ್ಪಡುತ್ತಾರೆ ಎಂದು ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್. ಪಾಟೀಲ್ ಹೇಳಿದರು.

ನಿವೃತ್ತ ಶಿಕ್ಷಕ ಸುಧಾಕರ ಬೇಲಿ ಅವರ ಕುರಿತಾದ ಗುರುವಿನ ಗುರು ಅಭಿನಂದನ ಗ್ರಂಥದ ಲೋಕಾರ್ಪಣೆಯಲ್ಲಿ ಅವರು ಮಾತನಾಡಿ, ಶಿಕ್ಷಣ ಪಡೆದ ವಿದ್ಯಾರ್ಥಿ ಎಷ್ಟೇ ಎತ್ತರಕ್ಕೆ ತಲುಪಿ ಉನ್ನತ ಹುದ್ದೆಯಲ್ಲಿದ್ದರೂ ಗುರುವನ್ನು ಕಂಡಾಗ ಅವರ ಪಾದಗಳಿಗೆ ಎರಗಿ ಭಕ್ತಿಯಿಂದ ಗೌರವ ತೋರುತ್ತಾನೆ. ನಿವೃತಿ ಹೊಂದಿ 25 ವರ್ಷಗಳ ನಂತರವೂ ಕೂಡ ತಾವು ಸೇವೆ ಮಾಡಿದ ಬಾಸೆಲ್ ಮಿಶನ್ ತರಬೇತಿ ಸಂಸ್ಥೆಯ 10 ವರ್ಷಗಳ ಅವಧಿಯಲ್ಲಿ ಕಲಿತ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಗುರುಗಳಾದ ಸುಧಾಕರ ಬೇಲಿ ಅವರನ್ನು ಭಯಭಕ್ತಿಯಿಂದ ಗೌರವಿಸಿದ್ದು ಶ್ಲಾಘನೀಯ ಎಂದರು.

ಬಾಸೆಲ್ ಮಿಶನ್ ಶಿಕ್ಷಕ, ಶಿಕ್ಷಕಿಯರ ತರಬೇತಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಂಘವು ಜೀರ್ಣೋದ್ಧಾರ ಮಾಡಿದ ಪ್ರಾರ್ಥನಾ ಮಂದಿರ ಹಾಗೂ ವಿಜ್ಞಾನ ಪ್ರಯೋಗಾಲಯಗಳನ್ನು ಇದೇ ವೇಳೆ ಉದ್ಘಾಟಿಸಲಾಯಿತು.

ಸುಧಾಕರ ಬೇಲಿ ಅವರ ಶಿಷ್ಯ, ಹೃದಯರೋಗ ತಜ್ಞ ಡಾ. ಎಸ್.ಆರ್. ಹೆಬ್ಬಾಳ, ತಮ್ಮ ಪ್ರೌಢಶಾಲಾ ದಿನಗಳನ್ನು ಸ್ಮರಿಸಿ, ತಮ್ಮ ಗುರುಗಳು ವಿಜ್ಞಾನ ವಿಷಯವನ್ನು ಪರಿಣಾಮಕಾರಿ ಬೋಧಿಸಿದನ್ನು ಸ್ಮರಿಸಿಕೊಂಡರು.

ಅಭಿನಂದನಾ ಪರ ನುಡಿಗಳನ್ನಾಡಿದ ಸಂಸ್ಥೆಯ ಹಳೆಯ ವಿದ್ಯಾರ್ಥಿ ಎಂ.ಎಂ. ಚಿಕ್ಕಮಠ, ಎಸ್.ಡಿ. ಬೇಲಿ ಅವರು ನಿವೃತ್ತಿ ಹೊಂದಿ 25 ವರ್ಷಗಳನ್ನು ಕಳೆದ ನಂತರವೂ ವಿದ್ಯಾರ್ಥಿ ಗಳ ಮನದಲ್ಲಿ ನಿರಂತರ ನೆಲೆಯೂರಿದ್ದಾರೆ ಎಂಬುವುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.

ಸಂಸ್ಥೆಯ ಹಿಂದಿನ, ಇಂದಿನ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಹೆಬಿಕ್ ಮೆಮೋರಿಯಲ್ ಚರ್ಚ್‌ನ ಸಭಾಪಾಲಕ ರೆ. ಸ್ಯಾಮುವೆಲ್ ಕೆಲ್ವಿನ್, ಜಿ.ಆರ್‌. ಹಾವೇರಿಮಠ, ರಾಜಶೇಖರ ಹೊನ್ನಪ್ಪನವರ, ಡಾ. ಬಾಳಪ್ಪ ಚಿನಗುಡಿ, ಈಶ್ವರ ಮೆಡ್ಲೇರಿ, ನಿಂಗಪ್ಪ ನಾಗರಳ್ಳಿ, ಬಸವರಾಜ ಹೊರಕೇರಿ ಹಾಗೂ ವಿಲ್ಸನ್‌ ಮೈಲಿ ಇದ್ದರು.