ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯ ಸರ್ಕಾರಿ ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಜಿಲ್ಲಾ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ, ಅನುದಾನ ಪಡೆಯಲು ಜಿಲ್ಲಾ ಸಚಿವ ಡಾ.ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಬಳಿಗೆ ನಿಯೋಗ ತೆರಳಿ ಅನುಕೂಲ ಪಡೆಯಬೇಕು, ನಿಮ್ಮ ನಿಯೋಗಕ್ಕೆ ತಾವೂ ಕೈ ಜೋಡಿಸುವುದಾಗಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.ನಗರದ ಬಾಲಭವನದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗೂ ಹಿರಿಯ ಚೇತನಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಇವೆ, ಅವುಗಳ ಸಿಎಸ್ಆರ್ ಫಂಡ್ ಅನ್ನು ಕೇಳಿ ಪಡೆದು ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಹಲವು ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಅನುಭವ, ಆಡಳಿತ ಸಾಮರ್ಥ್ಯ ಹೊಂದಿರುವ ನಿವೃತ್ತ ನೌಕರರನ್ನು ಜಿಲ್ಲಾಡಳಿತದ ವಿವಿಧ ಸಮಿತಿಗಳಿಗೆ ನೇಮಕ ಮಾಡುವಂತೆ ಮನವಿ ಮಾಡಿ, ನಿವೃತ್ತ ನೌಕರರ ಸಲಹೆ, ಮಾರ್ಗದರ್ಶನ ಬಳಸಿಕೊಳ್ಳಲು ನಿವೃತ್ತರನ್ನು ಕ್ರಿಯಾಶೀಲಗೊಳಿಸುವ ಜೊತೆಗೆ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ ಎಂದು ಜಿಲ್ಲಾ ಶಾಖೆ ಮುಖಂಡರಿಗೆ ತಿಳಿಸಿದರು.ತುಮಕೂರು ನಗರ ಮಾದಕ ವ್ಯಸನಿಗಳ ಜಾಗವಾಗುತ್ತಿರುವ ಆತಂಕ ಎದುರಾಗಿದೆ. ಯುವಜನಾಂಗ ಮಾದಕ ಪದಾರ್ಥಗಳ ದಾಸರಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಮೊಮ್ಮಕ್ಕಳು ಅಂತಹ ವ್ಯಸನಗಳಿಗೆ ಬಲಿಯಾಗದಂತೆ ಎಚ್ಚರವಹಿಸಿ, ಮಾದಕ ವ್ಯಸನ ತಡೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೈಗೊಳ್ಳುವ ಕಾರ್ಯದಲ್ಲಿ ಕೈ ಜೋಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಹಕರಿಸಿ ಎಂದು ಮುರಳಿಧರ ಹಾಲಪ್ಪ ಹೇಳಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಜಿಲ್ಲಾ ಸಂಘ ಸುಮಾರು 35 ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಾ ರಾಜ್ಯದಲ್ಲಿ ಮಾದರಿಯಾಗಿದೆ. ಸಂಘದಿಂದ ನಿವೃತ್ತರ ಪರವಾಗಿ ಹಲವಾರು ಕಾರ್ಯಚಟುವಟಿಕೆ ಮಾಡಲು ಸ್ವಂತ ಜಾಗದ ಅಗತ್ಯವಿದೆ. ನಗರದ ಶಿರಾಗೇಟ್ನ ಐಡಿಎಸ್ಎಂಟಿ ಲೇಔಟ್ನಲ್ಲಿ ಸಿಎ ನಿವೇಶನವನ್ನು ಸಂಘಕ್ಕೆ ನೀಡಲು ಕೋರಿ ಜಿಲ್ಲಾಡಳಿತ, ನಗರಪಾಲಿಕೆಗೆ ಮನವಿ ಮಾಡಲಾಗಿದೆ. ಅವರು ಬೇಗ ನಿವೇಶನ ನೀಡಬೇಕು ಎಂದರು.ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿ ನಿವೃತ್ತ ನೌಕರರಿಗೆ ಅಗತ್ಯ ಸೇವಾಯೋಜನೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಕಟ್ಟಡದಲ್ಲಿ ಸಭಾಂಗಣ, ಗ್ರಂಥಾಲಯ, ಹಗಲು ಯೋಗ ಕೇಂದ್ರ ಮಾಡುವ ಆಶಯವಿದೆ. ನಿವೃತ್ತ ನೌಕರರ ವೈಯಕ್ತಿಕ ಕೆಲಸ- ಕಾರ್ಯಗಳಿಗೆ ಸಹಾಯ ಮಾಡಲು ಸೇವಾ ತಂಡ ಕಟ್ಟಿ ನೆರವಾಗುವುದು ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ನಿಮ್ಮ ಬಗ್ಗೆಯೂ ಕಾಳಜಿವಹಿಸಿ:ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ನಿವೃತ್ತ ನೌಕರರು ಸರ್ಕಾರಿ ಸೇವೆಯಲ್ಲಿದ್ದಾಗ ತಮ್ಮ ಕುಟುಂಬದ ಶ್ರೇಯಸ್ಸಿಗಾಗಿ ದುಡಿದು, ಸಮಾಜದಲ್ಲಿ ತಮ್ಮ ಕುಟುಂಬ ಗೌರವದಿಂದ ಬಾಳಲು ಕಾರಣರಾಗಿದ್ದೀರಿ. ಆದರೆ ನಿವೃತ್ತಿ ನಂತರ ನಿಮ್ಮ ಕುಟುಂಬದವರು ನಿಮ್ಮ ಬಗ್ಗೆ ಅದೇ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆಯೆ? ಹಲವು ಕುಟುಂಬಗಳಲ್ಲಿ ಇದು ಕಾಣುತ್ತಿಲ್ಲ. ದುಡಿದ ಹಣ, ಆಸ್ತಿಯನ್ನು ಕುಟುಂಬಸ್ಥರಿಗೆ ಕೊಟ್ಟು ಖಾಲಿ ಕೈ ಮಾಡಿಕೊಂಡರೆ, ಕೊನೆಗಾಲದಲ್ಲಿ ನಿಮ್ಮ ಆರೋಗ್ಯ, ಚಿಕಿತ್ಸೆಗೆ ಹಣದ ಕೊರತೆ ಆಗಬಹುದು. ಆಗ ಯಾರೂ ನಿಮಗೆ ಸಹಾಯ ಮಾಡಲು ಮುಂದೆ ಬಾರದಿರಬಹುದು, ಅಂತಹ ಸಂದರ್ಭದಲ್ಲಿ ಸಹಾಯವಾಗಲು ನೀವು ಒಂದಿಷ್ಟು ಹಣವನ್ನು ಇಟ್ಟುಕೊಂಡಿರುವುದು ಒಳ್ಳೆಯದು ಎಂದು ಹೇಳಿದರು.
ವಾಸನ್ ಐ ಕೇರ್ ಸೆಂಟರ್ನಿಂದ ನಿವೃತ್ತ ನೌಕರರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಐ ಕೇರ್ ಸೆಂಟರ್ನ ನೇತ್ರ ತಜ್ಞೆ ಡಾ.ಸ್ಮಿತಾ ಅವರು ಕಣ್ಣುಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು.80 ವರ್ಷ ಮೇಲ್ಪಟ್ಟ ವಯೋಮಾನದ ನಿವೃತ್ತ ನೌಕರರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಸಂಘದಿಂದ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಂತರ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪಿ.ನರಸಿಂಹರೆಡ್ಡಿ ಲೆಕ್ಕಪತ್ರಗಳ ಮಂಡನೆ ಮಾಡಿದರು. ಆಂತರಿಕ ಲೆಕ್ಕಪರಿಶೋಧಕ ವೆಂಕಟಾಚಲಶೆಟ್ಟಿ ಆಯವ್ಯಯ ಮಂಡಿಸಿದರು. ತುಮಕೂರು ತಾಲೂಕು ಸರ್ಕಾರಿ ನಿವೃತ್ತ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅನಂತರಾಮಯ್ಯ ಮತ್ತಿತರರು ಭಾಗವಹಿಸಿದ್ದರು.ನಿವೃತ್ತ ಇಂಜಿನಿಯರ್ ಬಿ.ಆರ್.ನಟರಾಜಶೆಟ್ಟಿ, ಸಂಘದ ಉಪಾಧ್ಯಕ್ಷ ಎನ್.ಜಿ.ಚನ್ನರಾಯಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಅನಂತರಾಜು, ಮಂಜುಳಾದೇವಿ, ಎಚ್.ಪ್ರಕಾಶ್, ಜಂಟಿ ಕಾರ್ಯದರ್ಶಿಗಳಾದ ಎಚ್.ಶಂಕರಪ್ಪ, ಎಂ.ಎಸ್.ರವೀಂದ್ರನಾಥ್, ಅಲ್ಲದೆ ವಿವಿಧ ತಾಲೂಕು ಸಂಘಗಳ ಅಧ್ಯಕ್ಷರಾದ ವೆಂಕಟಾಚಲಶೆಟ್ಟಿ, ಆರ್.ಬಿ.ಜಯಣ್ಣ, ಜಿ.ಟಿ.ಶಂಕರೇಗೌಡ, ಡಿ.ಎಸ್.ಸಿದ್ದಪ್ಪ, ಶಿವಯ್ಯ, ಮೈಲಪ್ಪ, ಬಿ.ಹನುಮಂತರಾಯಪ್ಪ, ಪ್ರೊ.ಕೆ.ಹನುಮಂತರಾಯಪ್ಪ,ಎಂ.ಎಸ್.ಈಶ್ವರಪ್ಪ, ಮುಖಂಡರಾದ ಡಾ.ಪಿ.ಹುಚ್ಚಯ್ಯ, ಭವಾನಮ್ಮ, ಟಿ.ಎನ್.ನರಸಿಂಹಮೂರ್ತಿ ಮೊದಲಾದವರು ಭಾಗವಹಿಸಿದ್ದರು.